ಹುನಗುಂದ,ಜು,೧೦: ಬ್ರಿಟೀಷ್ ಭಾರತದಲ್ಲಿ ಇಳಕಲ್ ಒಂದು ಆಡಳಿತ ಕೇಂದ್ರವಾಗಿತ್ತು ಎಂಬುದಕ್ಕೆ ಎರಡು ಕೋಟೆ, ನಾಲ್ಕು ಅಗಸೆ, ೬೫ ಬಾವಿ, ವಾಡೆ, ಹುಡೆ ಸೇರಿದಂತೆ ಸಾಕಷ್ಟು ಪುರಾವೆಗಳು ಹಾಗೂ ಪುರಾವೆಗಳನ್ನು ಸಮರ್ಥಿಸಲು ಕೆಸರಭಾವಿ, ನಂದವಾಡಗಿ, ಹಿರೇಸಿಂಗನಗುತ್ತಿ, ಹುನಗುಂದ ಮತ್ತು ಇನ್ನಿತರ ಸ್ಥಳಗಳಲ್ಲಿನ ಶಾಸನಗಳು ಆಧಾರವಾಗಿ ನಿಲ್ಲುತ್ತವೆ ಎಂಬುದನ್ನು ಮಲ್ಲಿಕಾರ್ಜುನ್ ಅಂಗಡಿಯವರ ಸಂಶೋಧನಾ ಲೇಖನ ಸಮರ್ಥಿಸುತ್ತದೆ ಎಂದು ವ್ಹಿಎಂಎಸ್ಆರ್ ವಸ್ತ್ರದ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಎಸ್.ಆರ್ ನಾಗಣ್ಣನವರ್ ಹೇಳಿದರು.
ನಗರದ ಹೊನ್ನಕುಸುಮ ಸಾಹಿತ್ಯ ವೇದಿಕೆಯ ತಿಂಗಳ ಬೆಳಕು ಮಾಲಿಕೆಯ ೩೩ನೇ ಕಾರ್ಯಕ್ರಮದಲ್ಲಿ ಅವರು ಮಲ್ಲಿಕಾರ್ಜುನ್ ಅಂಗಡಿಯವರ ’ಇಳಕಲ್ ಕೋಟೆಗಳು ಮತ್ತು ಇತರ ಲೇಖನಗಳು’ ಎನ್ನುವ ಪುಸ್ತಕದ ಕುರಿತಾಗಿ ವಿಶ್ಲೇಷಣಾತ್ಮಕವಾಗಿ ಮಾತನಾಡಿದರು. ಮುಂದುವರೆದು ಅಂಗಡಿ ಅವರ ಲೇಖನಿಯಲ್ಲಿ ಬೆಳಕು ಕಂಡ ಅಲ್ಲಮನ ವಚನಗಳು, ಬಸವಣ್ಣನವರ ವ್ಯಕ್ತಿತ್ವ, ಚಿತ್ತರಗಿ ಶ್ರೀ ವಿಜಯ ಮಹಾಂತ ಶ್ರೀಗಳ ಜೋಳಿಗೆಯ ಮಹತ್ವ, ದು. ನಿಂ.ಬೆಳಗಲಿಯವರ ಕಾದಂಬರಿ, ಇಂದುಮತಿಯವರ ಕಾವ್ಯ ಮುಂತಾದ ವಿಷಯಗಳ ಮೇಲಿನ ವಿಮರ್ಶಾತ್ಮಕ ಲೇಖನಗಳ ಕುರಿತಾಗಿ ಮೌಲಿಕವಾಗಿ ಚರ್ಚಿಸಿದರು. ಕೃತಿಯ ಲೇಖಕರಾದ ಮಲ್ಲಿಕಾರ್ಜುನ ಅಂಗಡಿಯವರು ತಮ್ಮ ಅನುಭವವನ್ನು ಹಂಚಿಕೊಂಡರೆ, ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಆರ್. ಗೋಲಗೊಂಡ ಅಧ್ಯಕ್ಷತೆ ವಹಿಸಿದ್ದರು.
ಕೆ. ಎ. ಬನ್ನಟ್ಟಿ, ವಿ.ಆರ್. ಜನಾದ್ರಿ, ಬಸವರಾಜ್ ಕನ್ನೂರ್, ತೆನಹಳ್ಳಿ ಸರ್, ಮುದಗಲ್ ಸರ್, ಶಿರೂರ ಸರ್, ಸಿದ್ದಲಿಂಗಪ್ಪ ಬೀಳಗಿ, ನಾಗರಾಜ ನಾಡಗೌಡ, ಶರಣಪ್ಪ ಹೂಲಗೇರಿ, ವಿಜಯಕುಮಾರ್ ಕುಲಕರ್ಣಿ, ವಸಂತಕುಮಾರ್ ಕಡ್ಲಿಮಟ್ಟಿ, ಅಶೋಕ್ ಬಳ್ಳಾ, ಶ್ರೇಯಾಂಶ ಕೋಲಾರ್, ರಾಘು ವಡ್ಡರ್, ಮುರ್ತುಜಾಬೇಗಂ ಕೊಡಗಲಿ, ಇಂದುಮತಿ ಪುರಾಣಿಕ್, ಗೀತಾ ಇದ್ದಲಗಿ ಸೇರಿದಂತೆ ಹುನಗುಂದ ಇಳಕಲ್ ಅಮೀನಗಡದ ಹಿರಿ-ಕಿರಿಯ ಸಾಹಿತಿಗಳು ಹಾಗೂ ಹೊನ್ನಕುಸುಮ ಸಾಹಿತ್ಯ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೆಲ್ಲ ಭಾಗವಹಿಸಿದ್ದರು. ಅಂದಾನಯ್ಯ ವಸ್ತ್ರದ ಪ್ರಾರ್ಥಿಸಿದರೆ, ಗೀತಾ ತಾರಿವಾಳ ನಿರೂಪಿಸಿ ವಂದಿಸಿದರು.
