ರಾಮದುರ್ಗ: ರಾಜ್ಯ ಸರಕಾರವು ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಒಡೆತನದ ಟಾಟಾ ಪವರ್ ಕಂಪನಿಗೆ ನಿರ್ವಹಿಸಲು ಮುಂದಾಗಿರುವುದಕ್ಕೆ ತಾಲೂಕು ನೇಕಾರ ಒಕ್ಕೂಟ ವಿರೋಧ ವ್ಯಕ್ತಪಡಿಸಿ, ಬುಧವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಗರದ ತಾಲೂಕು ಆಡಳಿತ ಸೌಧದಲ್ಲಿ ಸೇರಿದ್ದ ನೇಕಾರ ಸಮುದಾಯದ ಜನರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯ ಸರಕಾರ ಹಾಗೂ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ರಾಜು ಕೋಪರ್ಡೆ ಮಾತನಾಡಿ, ಕರ್ನಾಟಕ ವಿದ್ಯುತ್ ಮಂಡಳಿಯು ಕಳೆದ ೭ ದಶಕಗಳಿಗೂ ಅಧಿಕ ವರ್ಷ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ದುಡಿಯುತ್ತಿರುವ ನೌಕರರು, ರೈತರು, ನೇಕಾರರು ಸೇರಿ ವಿದ್ಯುತ್ ಗ್ರಾಹಕರಿಗೆ ಸರಕಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ವಿದ್ಯುತ್ ನಿರ್ವಹಣೆ ಖಾಸಗಿಕರಣ ಮಾಡುವುದರಿಂದ ಎಲ್ಲ ವರ್ಗದ ಜನರಿಗೆ ತೊಂದರೆಯಾಗಲಿದೆ ಎಂದರು.
ರಾಜ್ಯ ದೇವಾಂಗ ಸಂಘದ ಉಪಾಧ್ಯಕ್ಷ ಶಂಕ್ರಣ್ಣ ಮುರುಡಿ ಮಾತನಾಡಿ, ನೇಕಾರ ಹಾಗೂ ರೈತರಿಗೆ ರಾಜ್ಯ ಸರಕಾರ ರಿಯಾಯಿತಿ ದರದಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಪೂರೈಸುತ್ತಿದ್ದು, ಖಾಸಗಿಯವರಿಗೆ ಹಂಸ್ತಾಂತರಿಸುವುದರಿಂದ ರಿಯಾಯಿತಿ ಸೇರಿ ಸರಕಾರಗಳ ಹಲವು ಕಾರ್ಯಕ್ರಮಗಳಿಗೆ ಕತ್ತರಿ ಬಿಳ್ಳುವ ಸಾಧ್ಯತೆ ಇದೆ. ತಕ್ಷಣ ರಾಜ್ಯ ಸರಕಾರ ವಿದ್ಯುತ್ ನಿಯಂತ್ರಣ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡದೇ ಸರಕಾರವೇ ಮುಂದುವರೆಸಬೇಕು. ಇಲ್ಲವಾದಲ್ಲಿ ಸರಕಾರದ ವಿರುದ್ಧ ಉಘ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎನ್.ಟಿ. ಹೂಲಿ, ಕಾರ್ಯದರ್ಶಿ ವಿನೋದ ಕರದಿನ, ರಾಜ್ಯ ದೇವಾಂಗ ಸಂಘದ ನಿರ್ದೇಶಕ ಶಿವಾನಂದ ಬಳ್ಳಾರಿ, ಮುಖಂಡರಾದ ಏಕನಾಥ ಕೊಣ್ಣೂರ, ಅಶೋಕ ಸೂಳಿಭಾವಿ, ದುರ್ವಾಸ್ಪಪ ಹೆಬ್ಬಳ್ಳಿ, ಪ್ರಕಾಶ ಸೂಳಿಭಾವಿ, ವಿಠ್ಠಲ ಮುರುಡಿ, ಮಾಗುಂಡಪ್ಪ ಮುರುಡಿ, ಬಸವರಾಜ ಲ್ಯಾವಿ, ಶಂಕರ ಬೆನ್ನೂರ, ಪ್ರಭಾಕರ ಬಲಕುಂದಿ, ಆರ್.ಎನ್. ಮುರುಡಿ, ಸೋಮನಗೌಡ ಪಾಟೀಲ, ವಿಠ್ಠಲ ಕಲ್ಲೂರ, ಸುರೇಶ ಬಲಕುಂದಿ ಸೇರಿದಂತೆ ಇತರರಿದ್ದರು.
ಶಾಸಕರಿಗೆ ಮನವಿ: (ಬಾಕ್ಸ್)
ವಿದ್ಯುತ್ ನಿತಂತ್ರಣ ಮಂಡಳಿಯನ್ನು ಖಾಸಗೀಕರಣ ಮಾಡಲು ಹೊರಟ ರಾಜ್ಯ ಸರಕಾರದ ಹಿಂದೆ ಸರಿಯುವಂತೆ ಒತ್ತಾಯಿಸಿ, ಸ್ಥಳೀಯ ಶಾಸಕ ಹಾಗೂ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರಿಗೆ ನೇಕಾರ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಅಶೋಕ ಪಟ್ಟಣ ಅವರು, ಖಾಸಗಿಕರಣದಿಂದ ದೂರ ಸರಿಯುವಂತೆ ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವ ಕೆ.ಜೆ. ಜಾರ್ಜ್ ಹಾಗೂ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ ಎಂದು ಹೇಳಿದರು.
