ತಾಳಿಕೋಟೆ, ಪಟ್ಟಣದ ಮಿಣಜಗಿ ಕ್ರಾಸ್ನ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರರಂದು ವಿಶ್ವಕರ್ಮ ಜಯಂತ್ಯೋತ್ಸವವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಎಂ. ಸಜ್ಜನ ಅವರು ಭಾಗವಹಿಸಿ ಮಾತನಾಡಿ, "ವಿಶ್ವಕರ್ಮ ದೇವರು ಹಿಂದೂ ಪುರಾಣಗಳಲ್ಲಿ ದೇವತೆಗಳ ಪ್ರಸಿದ್ಧ ಶಿಲ್ಪಿ ಹಾಗೂ ವಾಸ್ತುಶಿಲ್ಪಿಯಾಗಿದ್ದಾರೆ. ಕಲೆ, ಶಿಲ್ಪಕಲೆ, ಕಟ್ಟಡ ನಿರ್ಮಾಣ ಹಾಗೂ ತಾಂತ್ರಿಕ ಕೌಶಲ್ಯದ ಅಧಿದೇವತೆಯಾಗಿ ಅವರನ್ನು ಪೂಜಿಸಲಾಗುತ್ತದೆ. ದೇವತೆಗಳಿಗಾಗಿ ಅನೇಕ ಅದ್ಭುತ ಅರಮನೆಗಳು, ನಗರಗಳು ಮತ್ತು ಆಯುಧಗಳನ್ನು ಅವರು ನಿರ್ಮಿಸಿದ್ದಾರೆ. ಶ್ರೀಕೃಷ್ಣನ ದ್ವಾರಕಾ ನಗರ, ಚಿನ್ನದ ಲಂಕೆ ಹಾಗೂ ದೇವತೆಗಳ ವಿವಿಧ ನಿರ್ಮಾಣಗಳು ಅವರೊಂದಿಗೆ ಸಂಬಂಧಿಸಿವೆ" ಎಂದು ಸ್ಮರಿಸಿದರಲ್ಲದೇ ವಿಶ್ವಕರ್ಮ ಅವರ ಆದರ್ಶಗಳು ಮತ್ತು ಮೌಲ್ಯಗಳು ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಪ್ರೇರಣೆಯಾಗಿದ್ದು, ಪ್ರತಿಯೊಬ್ಬರೂ ಅದನ್ನು ಮೈಗೂಡಿಸಿಕೊಂಡು ಸಾಗಬೇಕೆಂದು ಕರೆ ನೀಡಿದರು.
ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಸವರಾಜ, ಶ್ರೀಮತಿ ಆರ್. ಎಸ್. ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಸಿಬಿಎಸ್ಇ ಪ್ರಾಚಾರ್ಯ ಜಯಚಂದ್ರ, ಬೆಸ್ಟ್ ಪಿಯು ಕಾಲೇಜಿನ ಪ್ರಾಚಾರ್ಯ ಎಮ್. ಮಾರೇಣ್ಣಾ, ಬಿ.ಎಡ್. ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಜಿ. ಎನ್. ಪಾಟೀಲ, ಐ.ಟಿ.ಐ. ಕಾಲೇಜಿನ ರಾಜು ಹಜೇರಿ ಸೇರಿದಂತೆ ಸರ್ವ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.