ತಾಳಿಕೋಟೆ, ಮಾನವ ಜೀವನದಲ್ಲಿ ದಾಸೋಹವು ಅತ್ಯಂತ ಶ್ರೇಷ್ಠ ಸೇವೆಯಾಗಿದೆ. ಅನ್ನದಾನವು ಮಹಾದಾನವೆಂದು ನಮ್ಮ ಸಂಸ್ಕೃತಿಯಲ್ಲಿ ಪರಿಗಣಿಸಲಾಗಿದೆ. ಇಂತಹ ಪವಿತ್ರ ದಾಸೋಹ ಪದ್ದತಿಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ನೇಹಬಳಗವೊಂದು ಹೆಜ್ಜೆ ಇಟ್ಟಿದ್ದು ಮಾದರಿಯ ಗುಂಪಿಗೆ ಸೇರಿದೆ.
ಶ್ರೀ ಖಾಸ್ಗತೇಶ್ವರ ಜಾತ್ರೆ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ ಮಾತು ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳ ನಡುವೆ ಒಂದೆಡೆ ಸೇರಲಾಗದಿದ್ದರೂ ಕೂಡಾ ಈ ಜಾತ್ರೆ ಎಂತವರನ್ನು ಒಂದುಗೂಡಿಸಿ ಸಂಭ್ರಮಿಸುವಂತೆ ಮಾಡುತ್ತಾ ಬಂದಿರುವದು ಸರ್ವವಿದಿತ. ಪ್ರತಿ ವರ್ಷ ಸ್ನೇಹಿತರೆಲ್ಲ ಒಗ್ಗೂಡಿ ಜಾತ್ರೆಯಲ್ಲಿ ಏನಾದರೊಂದು ವಿಶೇಷತೆ ಮಾಡಬೇಕೆಂದು ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದ ಸ್ನೇಹ ಕುಟುಂಭದಲ್ಲಿ ಅಪಘಾತದಲ್ಲಿ ಅಗಲಿದ ಗುಂಡಕನಾಳ ಗ್ರಾಮದ ಮಂಜುನಾಥ ಪಾಟೀಲನ ಸ್ನೇಹ ಮರೆ ಮಾಚಲು ಸಾದ್ಯವಾಗದ ಸಂದರ್ಬದಲ್ಲಿ ಕಳೆದ ೨ ವರ್ಷಗಳಿಂದಲೂ ಶ್ರೀ ಖಾಸ್ಗತೇಶ್ವರ ಜಾತ್ರೆಯ ಸಂದರ್ಬದಲ್ಲಿ ಸ್ನೇಹಿತ ದಿ. ಮಂಜುನಾಥ ಪಾಟೀಲನ ನೆನಪು ಸದಾಕಾಲ ಉಳಿಸಿಕೊಳ್ಳಲು ಆತನ ಹೆಸರಿನ ಮೇಲೆ ಅನ್ನದಾಸೋಹ ಮಾಡುತ್ತಾ ಬರುತ್ತಿದ್ದಾರೆ.
ದಾಸೋಹದ ಮೂಲಕ ದೇವರ ಕೃಪೆ ಎಲ್ಲರ ಮೇಲೂ ಸದಾ ಇರಲಿ. ಸಮಾಜದಲ್ಲಿ ಪ್ರೀತಿ, ಸ್ನೇಹ, ಸಹಕಾರ ಮತ್ತು ಸೇವಾ ಮನೋಭಾವ ಇನ್ನಷ್ಟು ಬೆಳೆಯಲಿ ಎಂಬ ಅಭಿಲಾಷೆ ಹೊಂದಿದ ಸ್ನೇಹಿತರ ಬಳಗ “ಅನ್ನದಾನಂ ಪರಮ ದಾನಂ" ಎಂಬ ಸಂದೇಶದೊಂದಿಗೆ ಶ್ರೀ ಖಾಸ್ಗತನಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾ ಸಾಗಿದೆ.
ಮನುಷ್ಯನ ಜೀವನದಲ್ಲಿ ಕೆಲವು ಸಂಬಂಧಗಳು ಕಾಲದ ಮಿತಿಯನ್ನು ಮೀರಿ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಪವಿತ್ರ ಬಂಧವೇ ಸ್ನೇಹ, ನಿಜವಾದ ಸ್ನೇಹಿತನು ಜೀವನದ ಪ್ರತಿಯೊಂದು ಹಂತದಲ್ಲೂ ನೆರಳಾಗಿ ನಿಂತಿರುತ್ತಾನೆ. ಅವನು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವನ ನೆನಪು, ಪ್ರೀತಿ, ನಗು ಮತ್ತು ಮಾನವೀಯತೆ ಎಂದೆಂದಿಗೂ ಹೃದಯದಲ್ಲಿ ಜೀವಂತವಾಗಿರುತ್ತದೆ ಎಂಬುದನ್ನು ದಿ.ಮಂಜುನಾಥ ಪಾಟೀಲನ ಸ್ನೇಹ ಬಳಗ ಸಾಕ್ಷೀಕರಿಸಿದೆ.
ಸ್ನೇಹವು ಹಣದಿಂದ ಅಳೆಯುವ ಸಂಬಂಧವಲ್ಲ. ಅದು ನಂಬಿಕೆ, ವಿಶ್ವಾಸ, ಪ್ರೀತಿ, ತ್ಯಾಗ ಮತ್ತು ಪರಸ್ಪರ ಕಾಳಜಿಯಿಂದ ಕಟ್ಟಲ್ಪಟ್ಟ ಬಂಧವಾಗಿದೆ. ಜೀವನದ ಪಯಣದಲ್ಲಿ ಸ್ನೇಹಿತನು ಜೊತೆಗಿದ್ದರೆ ಕಷ್ಟಗಳು ಹಗುರವಾಗುತ್ತವೆ, ಸಂತೋಷಗಳು ಇನ್ನಷ್ಟು ಅರ್ಥಪೂರ್ಣವಾಗುತ್ತವೆ. ಅಂತಹ ಅಮೂಲ್ಯ ಸ್ನೇಹಿತನ ನೆನಪನ್ನು ಶಾಶ್ವತಗೊಳಿಸುವ ಉದ್ದೇಶದಿಂದ ಈ ಪುಣ್ಯ ಕಾರ್ಯವನ್ನು ಕೈಗೊಳ್ಳಲಾಗಿದೆ ಎನ್ನುತ್ತೆ ಈ ಸ್ನೇಹ ಬಳಗ.
ಪಟ್ಟಣದಲ್ಲಿ ಸೋಮವಾರರಂದು ನಡೆದ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದಲ್ಲಿ ದಿ.ಮಂಜುನಾಥ ಪಾಟೀಲ ನೆನಪಿನಂಗಳದ ಮೇಲೆ ನಡೆದ ದಾಸೋಹದಲ್ಲಿ ಸ್ನೇಹಿತರಾದ ಬೆಂಗಳೂರಿನ ಪರಪ್ಪನ ಅಗ್ರಹಾರದ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶೈಲ ಮೇಟಿ, ಸಿಪಿಐ ಸುರೇಶ ಬೆಂಡೆಗುಂಬಳ, ರವಿ ಸಜ್ಜನ, ವಿಠ್ಠಲ ಘಾಯಕವಾಡ, ಸಂತೋಷ ಹಜೇರಿ, ನೂರಹ್ಮದ ಮುರಾಳ, ಮಲ್ಲನಗೌಡ ಪಾಟೀಲ, ಪ್ರಕಾಶ ಜಗತಾಪ, ಶೇಖು ದೇಸಾಯಿ, ಸಿದ್ದು ಸಜ್ಜನ, ಪ್ರಭಯ್ಯ ಹಿರೇಮಠ, ಸಂದೀಪ ಪಾಟೀಲ, ಹರ್ಷವರ್ಧನ ಪಟ್ಟಣಶೆಟ್ಟಿ, ಶಾಂತಗೌಡ ಕೊಣ್ಣೂರ, ಗೌಸಅಹ್ಮದ ಶೇಖ, ಮಹಾಂತೇಶ ಇಂಗಳಗಿ, ದೇವೇಂದ್ರ ಬಡಿಗೇರ, ಅಂಬಾಜಿ ಘೋರ್ಪಡೆ, ನ್ಯಾಯವಾದಿ ಶಾಂತಗೌಡ ದೋರನಳ್ಳಿ, ರಾಜು ಫೀರಾಪೂರ, ರಾಜುಗೌಡ ಗುಂಡಕನಾಳ, ಸಂಗನಗೌಡ ಪಾಟೀಲ, ಒಳಗೊಂಡು ನೂರಾರು ಜನ ಸ್ನೇಹ ಬಳಗದವರು ಪಾಲ್ಗೊಂಡಿದ್ದರು.
---
ಸ್ನೇಹಿತನ ದೇಹ ನಮ್ಮೊಂದಿಗಿಲ್ಲದಿರಬಹುದು ಆದರೆ ಅವನು ಬಿಟ್ಟುಹೋದ ಒಳ್ಳೆಯತನ, ಪ್ರೀತಿ ಮತ್ತು ನೆನಪುಗಳು ಸದಾ ನಮ್ಮ ಬದುಕಿಗೆ ಬೆಳಕಾಗಿರುತ್ತವೆ. ಅಂತಹ ನೆನಪುಗಳನ್ನು ಸೇವೆಯ ಮೂಲಕ ಜೀವಂತವಾಗಿಡುವುದೇ ನಿಜವಾದ ಸ್ನೇಹದ ಅರ್ಥ ಸ್ನೇಹಿತನು ದೂರವಾದರೂ ಸ್ನೇಹ ದೂರವಾಗುವುದಿಲ್ಲ. ನೆನಪುಗಳು ಮರೆಯಾಗುವುದಿಲ್ಲ. ಪ್ರೀತಿಯಿಂದ ಮಾಡಿದ ಸೇವೆಯೇ ಅವನಿಗೆ ಸಲ್ಲಿಸುವ ಅತ್ಯುತ್ತಮ ನಮನವೆಂದು ನಂಬಿದ ಸ್ನೇಹಿತರ ಗುಂಪು ನಮ್ಮದಿದೆ.
ಶ್ರೀಶೈಲ ಮೇಟಿ
ಬೆಂಗಳೂರಿನ ಪರಪ್ಪನ ಅಗ್ರಹಾರದ ಪೊಲೀಸ್ ವರಿಷ್ಠಾಧಿಕಾರಿ
