ಬಾಗಲಕೋಟೆ, ಜೂನ್ ೨೫: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಪ್ರಕರಣಗಳ ತನಿಖೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ತಪ್ಪತಸ್ಥರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೌರ್ಜನ್ಯ ಪ್ರಕರಣದಡಿ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು ೧೯೬ ಪ್ರಕರಣಗಳ ಪೈಕಿ ೪೬ ಬಿಡುಗಡೆಯಾಗಿದ್ದು, ಅದರಲ್ಲಿ ೧೯ ಪ್ರಕರಣಗಳಿಗೆ ಶಿಕ್ಷೆಯಾಗಿತ್ತವೆ. ೮೩ ಪ್ರಕರಣ ವಿಲೇವಾರಿಯಾಗಿದ್ದು, ೧೧೩ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಪೊಲೀಸ್ ಠಾಣೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ೭೩, ೨೦೨೬-೨೭ನೇ ಸಾಲಿನಲ್ಲಿ೨೫ ಪ್ರಕರಣಗಳು ದಾಖಲಾಗಿರುತ್ತವೆ ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿಗಮದಲ್ಲಿ ೨೦೨೩-೨೪ನೇ ಸಾಲಿನಿಂದ ಯಾವುದೇ ಬೋರವೆಲ್ ಕೊರೆಯಲು ಟೆಂಡರ್ ಆಗಿರುವದಿಲ್ಲವೆಂದು ಸಂಬಂಧಿಸಿದ ನಿಗಮದ ಅಧಿಕಾರಿಗಳು ಸಭೆಗೆ ತಿಳಿಸಿದಾಗ ಜಿಲ್ಲೆಯಲ್ಲಿ ಬೋರ್ವೆಲ್ ಕೊರೆಯುವ ಕೆಲಸವಾಗುತ್ತಿಲ್ಲ. ಕೇಳಿದರೆ ರಾಜ್ಯ ಮಟ್ಟದಲ್ಲಿ ಟೆಂಡರ್ ಆಗಲ್ಲವೆಂದು ಅಧಿಕಾರಿಗಳು ಹೇಳಿ ಕುಳಿತರೆ ಸಾಲದು. ಯೋಜನೆಗಳು ಅನುಷ್ಠಾನಕ್ಕೆ ನಿರಂತರ ಕೇಂದ್ರ ಕಚೇರಿ ಹಂತದಲ್ಲಿ ನಡೆಯುವ ವಿಷಯಗಳ ಬಗ್ಗೆ ಗಮನಹರಿಸಬೇಕು. ಅಂದಾಗ ಮಾತ್ರ ಕೆಲಸಗಳು ಆಗಲು ಸಾಧ್ಯವಾಗುತ್ತವೆ ಎಂದು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧಿಕಾರಿಗಳಿಗೆ ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಸ್ಮಶಾನದ ಬಗ್ಗೆ ಸಭೆಗೆ ಸಮಿತಿ ಸದಸ್ಯರು ತಿಳಿಸಿದಾಗ ಈ ವಿಷಯದ ಬಗ್ಗೆ ಮಾತನಾಡಿದ ಬಾಗಲಕೋಟೆ ಶಾಸಕ ಉಮೇಶ ಮೇಟಿ ಅವರು ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿತ್ತಾರೆ ಹೊರತು ಯಾವುದೇ ಕೆಲಸಗಳು ಆಗುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿತ್ತಿದೆ ಎಲ್ಲಿ ಸ್ಮಶಾನಗಳು ಇರುವದಿಲ್ಲ, ಅವುಗಳ ಪಟ್ಟಿಯನ್ನು ಪಡೆದುಕೊಂಡ ಸಮಾಜ ಕಲ್ಯಾಣ ಇಲಾಖೆ, ತಹಶೀಲ್ದಾರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ ಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಸ್ಮಶಾನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆ ಹಾಗೂ ವಿವಿಧ ಇಲಾಖೆಗಳಿಗೆ ಎಸ್ಸಿಪಿ, ಟಿಎಸ್ಪಿಗಳಿಗೆ ಮೀಸಲಿಟ್ಟ ಅನುದಾನ ಸಮರ್ಪಕ ಬಳಕೆಯಾಗಬೇಕು. ಬಳಕೆಯಾದ ಅನುದಾನ ಸದ್ಬಳಕೆಯಾಗುವಂತಹ ಕೆಲಸಗಳು ಆಗಬೇಕು ಎಂದು ತಿಳಿಸಿದರು. ಸಮಿತಿ ಸದಸ್ಯರಿಂದ ಬಂದ ಅನುದಾನ ದುರ್ಬಳಕೆ, ಚರಂಡಿ ನೀರು ನಿಲ್ಲುವುದು, ಕುಂದು ಕೊರತೆ ಸಭೆ ಮಾಡದೇ ಇರುವುದು, ಡಕ್ಕಲಿಗ ಜನಾಂಗದವರಿಗೆ ನಿವೇಶನ ಮಂಜೂರು, ಜಮೀನುಗಳಿಗೆ ದಾರಿ, ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕಳೆದ ೨೦೨೫-೨೬ನೇ ಸಾಲಿನಲ್ಲಿ ೭೩ ದೌರ್ಜನ್ಯ ಪ್ರಕರಣಗಳಿಗೆ ಒಟ್ಟು ೧.೨೮ ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಜಿ.ಮನ್ನಿಕೇರಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ಎಂ ಸೇರಿದಂತೆ ಉಸ್ತುವಾರಿ ಸಮಿತಿಯ ಸದಸ್ಯರಾದ ಯಮನಪ್ಪ ಪೂಜಾರ, ಶಿವಾನಂದ ಮಾದರ, ಫಕೀರಪ್ಪ ಮಾದರ, ಬಸವರಾಜ ಪಾತ್ರೋಟ, ಗೋವಿಂದಪ್ಪ ಕೌಲಗಿ, ದ್ಯಾಮಣ್ಣ ಗಾಳಿ ಶ್ರೀಕಾಂತಗೌಡ ಗೌಡರ, ಅಕ್ಬರಸಾಬ ಹಾಗೂ ಇತರರು ಉಪಸ್ಥಿತರಿದ್ದರು.
