ಮೂಡಲಗಿ : ಸುತ್ತ ಮುತ್ತಲಿನ ಹಲವಾರು ಹಳ್ಳಿಗಳ ಜನರು ತಾಲೂಕಾ ಕೇಂದ್ರವಾಗಿರುವ ಮೂಡಲಗಿಯನ್ನು ಅವಲಂಬಿಸಿರುವ ಕಾರಣ ಪಟ್ಟಣಕ್ಕೆ ಹೆಚ್ಚುವರಿ ಬಸ್ಸಿನ ಸೌಕರ್ಯ ಒದಗಿಸಬೇಕಾದ ಅನಿವಾರ್ಯತೆಯಿದೆ ಎಂದು ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸುಭಾಸ ಕಡಾಡಿ ಹೇಳಿದರು.
ಗುರುವಾರದಂದು ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆ ವತಿಯಿಂದ ಮೂಡಲಗಿಯ ಬಸ ನಿಲ್ದಾಣದ ಕಾರ್ಯ ನಿರ್ವಾಹಕ ಅಧಿಕಾರಿಯಾದ ಬಿ.ಬಿ.ದಂಡಾಪ್ಪನ್ನವರ ಮುಖಾಂತರ ಗೋಕಾಕ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೊಲ್ಲಾಪುರ, ಇಂಚಲಕರಂಜಿ, ಬಾಗಲಕೋಟೆ ಸೇರಿದಂತೆ ಬೆಟಗೇರಿ ಪಟ್ಟಣಗಳಿಗೆ ಗುರ್ಲಾಪೂರ ಮಾರ್ಗವಾಗಿ ಬೈಪಾಸಾಗಿ ಹೋಗುವ ಬಸ್ಸುಗಳು, ಮೂಡಲಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಹೋಗಬೇಕು. ಜೊತೆಗೆ ವಿಜಯಪೂರ, ಸೊಲ್ಲಾಪೂರ, ಅಥಣಿ, ಮಿರಜ, ಜಮಖಂಡಿಗೆ ತೆರಳುವ ಬಸ್ಸುಗಳು ಗುರ್ಲಾಪೂರ ಮಾರ್ಗದಲ್ಲಿ ಬರುವ ಮೂಡಲಗಿ ಪಟ್ಟಣದ ನಾಗಲಿಂಗ ನಗರ, ವಿವೇಕಾನಂದ ನಗರ, ಟಿಪ್ಪು ವೃತ್ತ ಬಳಿ ಬಸ್ಸನ್ನು ನಿಲುಗಡೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವಬಸು ಗಾಡವಿ, ಸುರೇಶ ಎಮ್ಮಿ, ಮಹಾಲಿಂಗಯ್ಯ ನಂದಗಾವಮಠ, ಶಿವಬಸು ಕುಲಗೋಡ, ಇಮ್ತಿಯಾಜ್ ಕಲಾರಕೊಪ್ಪ, ಚಿದಾನಂದ ಆಲತಗಿ, ವಿಠ್ಠಲ ಶಿಂಫಿ, ಚಂದ್ರಶೇಖರ ಪತ್ತಾರ ಸೇರಿದಂತೆ ಅನೇಕ ಸಾರ್ವಜನಿಕರು ಭಾಗಿಯಾಗಿದ್ದರು.
