ಬೀಳಗಿ- ಈ ನಾಡಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ತುಳಿತಕ್ಕೊಳಗಾದ ಸಮುದಾಯಗಳ ಹಕ್ಕುಗಳನ್ನು ಜಾರಿಗೊಳಿಸಲು ಸಾಮಾಜಿಕ ನ್ಯಾಯದಡಿಯಲ್ಲಿ ಪ್ರತಿಯೊಬ್ಬರಿಗೂ ಸಮಪಾಲು ಸಮಬಾಳು ಸಿಗುವಂತೆ ಮಾಡಲು ಜುಲೈ18 ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಾರ್ಯಾಲಯದವರೆಗೆ ಕಾಲ್ನಾಡಿಗೆ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಹೇಳಿದರು.
ಇಲ್ಲಿನ ಜಿಎಲಬಿಸಿ ಪ್ರವಾಸಿಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಿಕೊಳ್ಳಬೇಕು. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳವನ್ನು 9ನೇ ಪರಿಚ್ಛೇದಕ್ಕೆ ಸೇರಿಸುವಂತೆ, ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ಮರು ಸ್ಥಾಪನೆ ಮಾಡಿ, 2025ರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಜಾರಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಹಿಂದ ವರ್ಗದ ಹೆಚ್ಚು ಮತ ಬ್ಯಾಂಕನ್ನು ಹೊಂದಿರುವ ಬೀಳಗಿ ಮತಕ್ಷೇತ್ರದಲ್ಲಿ ಶಾಸಕ ಜೆ.ಟಿ. ಪಾಟೀಲ ಅವರು ಈ ಜನಾಂಗದ ಹೆಚ್ಚು ಮತಗಳನ್ನು ಪಡೆದಿದ್ದು ಅವರು ಈ ಸಮುದಾಯಗಳ ಸಾಮಾಜಿಕ ನ್ಯಾಯದ ಕುರಿತು ಒಂದೇ ಒಂದು ದಿನ ಧ್ವನಿ ಎತ್ತಿಲ್ಲ ಮುಂದಾದರೂ ಈ ಸಮುದಾಯಗಳ ಅಭಿವೃದ್ಧಿಗಾಗಿ ಧ್ವನಿ ಎತ್ತಬೇಕೆಂದು ವಿನಂತಿಸಿದರು.
ಮಾಜಿ ಸಚಿವ ಮುರುಗೇಶ ನಿರಾಣಿ ಸ್ಥಾಪಿಸುವ ಉದ್ಯಮಕ್ಕೆ ಸರ್ಕಾರ ಅನುಮತಿ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ವಿಧಾನಸೌಧದ ಮುಂದೆ ಪ್ರತಿಭಟನೆಗೆ ಮುಂದಾಗುತ್ತೆನೆ ಎನ್ನುವ ಅವರು ತುಳಿತಕ್ಕೊಳಗಾದವರನ್ನು ಮೆಲೆತ್ತಲು ಮತ್ತು ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ವಿಧಾನಸೌಧದ ಮುಂದೆ ಮತ್ತು ದೆಹಲಿಯಲ್ಲಿ ಹೋರಾಟಕ್ಕೆ ಮುಂದಾಗಲಿ ಎಂದು
ವಿನಂತಿಸಿದರು.
ರೈತ ಮುಖಂಡರಾದ ಸಿದ್ದಪ್ಪ ಬಳಗಾನೂರ, ಬಸವರಾಜ ಗೋನಾಳ, ಸದಾಶಿವ ಅಗೋಜಿ, ಹಸನಸಾಬ್ ನದಾಫ, ಸಿದ್ದಪ್ಪ ಚಿಂಡಕಿ, ಸಿದ್ದು ಬಾಳಗಿ ಇದ್ದರು.
