ಹಸಿರು ಕ್ರಾಂತಿ ವರದಿ ವಿಜಯಪುರ
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜುಲೈ 23 ರಿಂದ ಆಗಸ್ಟ್ 2 ರವರೆಗೆ ನಡೆಯಲಿರುವ ಮಹಿಳೆಯರ ಮಹಾರಾಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ದೇವರಹಿಪ್ಪರಗಿ ಶ್ರೀಕಾಂತ ಕಾಖಂಡಕಿ ಆನ್ಫೀಲ್ಡ್ ಅಂಪೈರ್ ಆಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಉನ್ನತ ಪಂದ್ಯಾವಳಿಯಲ್ಲಿ ಅಂಪೈರ್ ಆಗಿ ಆಯ್ಕೆಯಾದವರಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಪ್ರಥಮ ನಿರ್ಣಾಯಕರಾಗಿ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಟೆನ್ನಿಸಬಾಲ್ ಕ್ರಿಕೆಟ್ ಚಾಂಪಿಯನಶಿಪ್ ಪಂದ್ಯಾವಳಿಗಳಲ್ಲಿ, ಹಿಮಾಚಲ ಪ್ರದೇಶದ ಕುಲ್ಲು, ಉತ್ತರ ಪ್ರದೇಶದ ವಾರಣಾಸಿ, ಬಿಹಾರ, ಗುಜರಾತ, ಚೆನ್ನೈ, ಗೋವಾದಲ್ಲಿ ಈಗಾಗಲೇ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ವಿಜಯಪುರದ ಖ್ಯಾತ ಕ್ರಿಕೆಟ್ ತಜ್ಞ ಡಾ.ಅಶೋಕಕುಮಾರ ಜಾಧವ ಮಾರ್ಗದರ್ಶನದಲ್ಲಿ ಈ ಮಹೋನ್ನತ ಸಾಧನೆಗೈದಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಿಜಯಪುರದ ಸಂಯೋಜಕ ಎನ್.ಎಂ.ಹುಟಗಿ, ದೇವರಹಿಪ್ಪರಗಿಯ ಮಾಜಿ ಆಟಗಾರ ಶ್ರೀಧರನಾಡಗೌಡ, ರಮೇಶ ಮಸಬಿನಾಳ, ಪ್ರಕಾಶ ಮಲ್ಲಾರಿ, ಕೆಎಸ್ಸಿಎ ಸಂಯೋಜಿತ ಕ್ರಿಕೆಟ್ ಕ್ಲಬ್ಗಳ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ಹಲವಾರು ಕ್ರಿಕೆಟ್ ಆಟಗಾರರು ಶ್ರೀಕಾಂತ ಕಾಖಂಡಕಿಯವರಿಗೆ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.