ಹಸಿರು ಕ್ರಾಂತಿ ವರದಿ ಚನ್ನಮ್ಮನ ಕಿತ್ತೂರು
ಶರಣರ ವಚನ ಸಾಹಿತ್ಯದ ಉಳಿವಿಗೆ ಫ.ಗು.ಹಳಕಟ್ಟಿಯವರ ಕೊಡುಗೆ ಅನನ್ಯವಾಗಿದ್ದು, ಅವರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹಿರೇನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಪಕ ಬಿ.ಸಿ.ಬಿದರಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರಾಜಗುರು ಸಂಸ್ಥಾನ ಕಲ್ಮಠ ಸಂಯುಕ್ತಾಶ್ರಯದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಜೀವನ ಮತ್ತು ಕೊಡುಗೆ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣರ ಜೀವನ ಮೌಲ್ಯಗಳನ್ನು ಕಾಲಾತೀತವಾದ ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯ ಎಂಬ ಅನರ್ಘ್ಯ ರತ್ನವನ್ನು ಶೋಧಿಸಿ, ಅನ್ವೇಷಿಸಿ, ಸಂಗ್ರಹಿಸಿ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದವರಲ್ಲಿ ಜೀವನದುದ್ದಕ್ಕೂ ಕಡು ಬಡತನ ಮತ್ತು ಕಹಿ ಅನುಭವಗಳನ್ನೇ ಕಂಡ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಮೊದಲಿಗರಾಗಿದ್ದಾರೆ ಎಂದು ವಿವರಿಸಿದರು.
ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಮಾತನಾಡಿ, ವಕೀಲಿ ವೃತ್ತಿಯಲ್ಲಿರುವಾಗಲೇ ಫ.ಗು.ಹಳಕಟ್ಟಿಯವರು ಸಾಹಿತ್ಯ ರಚನೆಯಲ್ಲಿ ಆಸಕ್ತಿ ವಹಿಸಿ ಶರಣರ ವಚನಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಕಟಿಸಲು ತಮ್ಮ ಸ್ವಂತ ಮನೆಯನ್ನೇ ಮಾರಿ ಒಂದು ಹಿತ ಚಿಂತಕ ಮುದ್ರಣಾಲಯ ಸ್ಥಾಪಿಸಿ ಈ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತರುವುದರ ಜೊತೆಗೆ 175 ವಚನ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವಲ್ಲಿ ಯಶಸ್ವಿಯಾಗಿರುವುದು ಅಭಿಮಾನದ ವಿಷಯವಾಗಿದೆ ಎಂದು ಸಮಾರೋಪ ನುಡಿಗಳಲ್ಲಿ ಹಳಕಟ್ಟಿಯವರ ತ್ಯಾಗ ಮತ್ತು ಸಾಹಿತ್ಯ ಸೇವೆ ಯುವ ಜನತೆಗೆ ಪ್ರೇರಣೆ ಆಗಲಿ ಎಂದು ಆಶಿಸಿದರು.
ಈಶ್ವರ ಗಡಿಬಿಡಿ ಮತ್ತು ಭುವನಾ ಹಿರೇಮಠರವರ ವಚನ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಅವರ ವಚನ ಸಾಹಿತ್ಯದ ಕೊಡುಗೆ ಸ್ಮರಿಸಲಾಯಿತು. ಬಸವರಾಜ ದಳವಾಯಿ ಸ್ವಾಗತಿಸಿದರು. ಮಹೇಶ್ವರ ಹೊಂಗಲ ವಂದಿಸಿದರು. ಮಂಜುನಾಥ ಕಳಸಣ್ಣವರ ನಿರೂಪಿಸಿದರು.
ಎಸ್.ಬಿ.ಎಂ.ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಮಹೇಶ ಚನ್ನಂಗಿ, ಮೆಹಬೂಬ್ ಮುಲ್ತಾನಿ, ಬಿ.ಎಸ್.ಆಸಂಗಿಮಠ, ಗ್ರಂಥಪಾಲಕ ಸಂಗಮೇಶ, ಚಂದ್ರಶೇಖರ ಚನ್ನಂಗಿ ಮತ್ತು ಇತರರು ಉಪಸ್ಥಿತರಿದ್ದರು.
ಶರಣರ ಜೀವನ ಮೌಲ್ಯಗಳನ್ನು ಕಾಲಾತೀತವಾದ ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯ ಎಂಬ ಅನರ್ಘ್ಯ ರತ್ನವನ್ನು ಶೋಧಿಸಿ, ಅನ್ವೇಷಿಸಿ, ಸಂಗ್ರಹಿಸಿ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದವರಲ್ಲಿ ಜೀವನದುದ್ದಕ್ಕೂ ಕಡು ಬಡತನ ಮತ್ತು ಕಹಿ ಅನುಭವಗಳನ್ನೇ ಕಂಡ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಮೊದಲಿಗರಾಗಿದ್ದಾರೆ.
-ಬಿ.ಸಿ.ಬಿದರಿ, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿ.