*ಬಳ್ಳಾರಿ:19:.ನಗರದ ಪಾಂಚಜನ್ಯ ಸಭಾಂಗಣದಲ್ಲಿ ಮೂನ್ ವಾಕರ್ಸ್ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ "ಶ್ರಾವಣ ಸಂಭ್ರಮ" ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು.
ಕಾರ್ಯಕ್ರಮವನ್ನು ಬಯಲಾಟ ರಂಗ ನಿರ್ದೇಶಕ ಮುದ್ದಟನೂರು ಎಚ್. ತಿಪ್ಪೇಸ್ವಾಮಿ ಅವರು ಉದ್ಘಾಟಿಸಿ ಮಾತನಾಡಿದರು. ಕಲೆ, ನಾಡು, ನುಡಿ, ಸಂಸ್ಕೃತಿ ಮತ್ತು ಸಂಸ್ಕಾರ ಇವೆಲ್ಲವೂ ಭಾರತೀಯ ಪರಂಪರೆಯ ಮೂಲ ಬೇರುಗಳು ಎಂದು ಅವರು ಹೇಳಿದರು.
ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹ ನೀಡುತ್ತಿದೆ. ಜೊತೆಗೆ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘವು ಆಯೋಜಿಸುವ ವಾರ್ಷಿಕ ಕಾರ್ಯಕ್ರಮದಲ್ಲಿ ಇಂತಹ ಕಲಾವಿದರಿಗೆ ಮತ್ತು ಕಲಾ ಸಂಸ್ಥೆಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡುವುದರ ಜೊತೆಗೆ ಪ್ರೋತ್ಸಾಹಿಸುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ರೇಣುಕಾ, ಲಲಿತಾ ಕುಮಾರಿ, ಕಲಾಪೋಷಕರು ಹಾಗೂ ನೃತ್ಯ ಗುರುಗಳಾದ ಜಯಣ್ಣ ಬಬ್ಲೂ ಸೇರಿದಂತೆ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.
ಮೂನ್ ವಾಕರ್ಸ್ ಸಾಂಸ್ಕೃತಿಕ ಕಲಾ ಸಂಘದ ಮಕ್ಕಳು ಮತ್ತು ಕಲಾವಿದರಿಂದ ವಿವಿಧ ಸಮೂಹ ನೃತ್ಯ ಪ್ರದರ್ಶನಗೊಂಡವು. ಶ್ರಾವಣ ಮಾಸದ ವಿಶೇಷತೆಯನ್ನು ಪ್ರತಿಬಿಂಬಿಸುವ ನೃತ್ಯಗಳು ಪ್ರೇಕ್ಷಕರ ಮೆಚ್ಚುಗೆ ಪಾತ್ರವಾದವು.
ಕಾರ್ಯಕ್ರಮದಲ್ಲಿ ನಗರದ ಕಲಾರಸಿಕರು, ಪೋಷಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.