ಕೊಪ್ಪಳ,ಜು,೧೦ : ನಗರದ ನೌಕರರ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆ ಬುಧುವಾರ ಸಂಜೆ ಜರುಗಿತು.
ಸಭೆಯನ್ನುದ್ದೇಶಿಸಿ ರಾಜ್ಯ ಹಿರಿಯ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಅವರು ಮಾತನಾಡಿ ಇದೇ ಜುಲೈ ೧೧ ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿಯೇ ರಾಜ್ಯ ಸರ್ಕಾರಿ ನೌಕರರ ಸಂಘದ ಬಹುದಿನಗಳ ಬೇಡಿಕೆ ನೂತನ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆ (ಓPS ಣo ಔPS) ಜಾರಿಗಾಗಿ ಹಕ್ಕೊತ್ತಾಯ ಮಾಡಲಿದ್ದೇವೆ. ಹಾಗೂ ಇದೇ ಜುಲೈ ೨೬ ರಂದು ಕೊಪ್ಪಳದಲ್ಲಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಜರುಗಲಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಕಾರ್ಯಕ್ರಮ ಯಲಬುರ್ಗಾ ತಾಲೂಕಿನ ಕ್ಯಾನ್ಸರ್ ಪೀಡಿತ ನೌಕರನಿಗೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿಯಲ್ಲಿ ಪಾವತಿಸುವಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶ್ರಮಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ ಸಂಘ ಕೆಲಸ ಮಾಡುತ್ತಿದೆ. ಜಿಲ್ಲೆಯ ಆಸ್ಪತ್ರೆಗಳನ್ನು ಅದರಲ್ಲಿ ಸೇರಿಸುವ ಕಾರ್ಯ ನೌಕರರ ಸಂಘದಿಂದ ಮಾಡುತ್ತಿದ್ದೇವೆ ಎಂದರು.
ಕಾರಟಗಿ ತಾಲೂಕ ಅಧ್ಯಕ್ಷರಾದ ಹನುಮಂತಪ್ಪ ನಾಯಕ ಮಾತನಾಡಿ ನೂತನ ಪಿಂಚಣಿ ಯೋಜನೆ ಇಂದ ಹಳೆಯ ಪಿಂಚಣಿ ಯೋಜನೆ ಜಾರಿಗಾಗಿ ನಮ್ಮಭಿಮಾನದ ಅಭಿನಂದನೆ ಕಾರ್ಯಕ್ರಮದಲ್ಲಿ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಇದು ನಮ್ಮೆಲ್ಲರ ಧ್ವನಿ ಈ ನಿಟ್ಟಿನಲ್ಲಿ ಅತೀಹೆಚ್ಚು ನೌಕರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೌಕರರ ಸಂಘದ ಮಹತ್ವದ ಕಾರ್ಯಕ್ಕೆ ಕೈ ಜೋಡಿಸೋಣ ಎಂದರು.
ಯಲಬುರ್ಗಾ ತಾಲೂಕ ಅಧ್ಯಕ್ಷ ಶಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ ಆದಷ್ಟು ಸರ್ಕಾರಿ ನೌಕರರನ್ನು ರಜಾ ದಿನಗಳಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವಂತೆ ಮಾಡಬೇಕಿದೆ. ಒತ್ತಡದ ಇಂದಿನ ದಿನಗಳಲ್ಲಿ ಬದುಕುತ್ತಿರುವ ನಾವೆಲ್ಲರೂ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸುವಂಥ ಅದೆಷ್ಟು ಸರ್ಕಾರಿ ನೌಕರರು ನಮ್ಮ ಮಧ್ಯೆ ಇದ್ದಾರೆ. ಅಧಿಕಾರಿಗಳು ತಮ್ಮ ಅಧಿಕಾರ ಬಳಸಿ ನೌಕರರ ಮೇಲೆ ಒತ್ತಡ ಹಾಕಿ ರಜಾ ದಿನಗಳಲ್ಲೂ ಕೆಲಸ ಮಾಡುತ್ತಿರುವುದರ ಕುರಿತು ಸಂಘ ಧ್ವನಿಯಾಗಬೇಕಿದೆ. ಇದರೊಂದಿಗೆ ಕೆನೆಪದರ ನೀತಿಯಿಂದ ಸರ್ಕಾರಿ ನೌಕರರ ಮಕ್ಕಳಿಗೆ ಅನುಕೂಲವಾಗುವ, ಕಲ್ಯಾಣ ಕರ್ನಾಟಕ ಭಾಗದ ನಮ್ಮಸರ್ಕಾರಿ ನೌಕರರಿಗೆ ಅರ್ಹತೆ ಇದ್ದಾಗಲೂ ಮುಂಬಡ್ತಿಯಲ್ಲಿ ವಿಳಂಬವಾಗುತ್ತಿವೆ, ೩೭೧ ಜೆ ಸಮರ್ಪಕವಾಗಿ ಅನುಷ್ಠಾನವಾಗಲಿ ಎಂದರು.
ಸರ್ದಾರ ಅಲಿ ಮಾತನಾಡಿ ನೌಕರರ ಸಂಘಟನೆ ಬಹುದಿನಗಳ ಬೇಡಿಕೆ ಓPS ಣo ಔPS ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ಔPS ಜಾರಿಯಾಗುವಂಥ ಐತಿಹಾಸಿಕ ದಿನ ಜುಲೈ ೧೧ ಆಗಲಿ ಎಂದರು.
ಕನಕಗಿರಿ ತಾಲೂಕ ಅಧ್ಯಕ್ಷೆ ಶಂಶಾದ ಬೇಗಂ, ಗಂಗಾವತಿ ತಾಲೂಕ ಅಧ್ಯಕ್ಷ ಶಿವಶಂಕರ ಕಲ್ಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೌರವಧ್ಯಕ್ಷ ಸಿದ್ಧಪ್ಪ ಮೆಳ್ಳಿ, ಉಪಾಧ್ಯಕ್ಷರಾದ ಗೋಪಾಲಕೃಷ್ಣ ಮುಂಡರಗಿ, ರಾಜ್ಯ ಪದಾಧಿಕಾರಿಗಳಾದ ಮಂಜುನಾಥ, ಹೇಮಣ್ಣ ಕವಲೂರ, ಖಚಾಂಚಿ ಜಯತೀರ್ಥ ದೇಸಾಯಿ, ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು, ಚುನಾಯಿತ ನಿರ್ದೇಶಕರುಗಳು ಉಪಸ್ಥಿತರಿದ್ದರು. ಪ್ರಾರ್ಥನೆ ಭಾರತಿ ಹವಳೆ, ಸ್ವಾಗತ ನಾಗರಾಜನಾಯಕ ಡಿ.ಡೊಳ್ಳಿನ, ವಂದನಾರ್ಪಣೆ ಯಮನೂರಪ್ಪ ಕಟಗಿ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ ನಿರೂಪಿಸಿದರು.
