ಬಾಗಲಕೋಟೆ : ಆಗಸ್ಟ ೨೧ : ಬಾಗಲಕೋಟೆ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಗುರುವಾರ ಭೇಟಿ ನೀಡಿ ವಿಬಿಜಿ-ರಾಮ್ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಅಭಿವೃದ್ದಿ ಹಾಗೂ ಸ್ವಚ್ಚತಾ ಕಾಮಗಾರಿಗಳನ್ನು ಪರಿಶೀಲಿಸಿ, ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆನಕಟ್ಟಿ ಗ್ರಾಮ ಪಂಚಾಯತಿಯ ಕೆರೆ ಕಾಮಗಾರಿ ಪರಿಶೀಲಿಸಿದ ವೇಳೆ ಗ್ರಾಮದ ತ್ಯಾಜ್ಯ ನೀರು ಕೆರೆಗೆ ಹರಿಯುತ್ತಿರುವುದನ್ನು ಗಮನಿಸಿದ ಸಿಇಓ ಅವರು ವೈಜ್ಞಾನಿಕ ಚರಂಡಿ ವ್ಯವಸ್ಥೆ ಕಲ್ಪಿಸಿ ತ್ಯಾಜ್ಯ ನೀರು ಕೆರೆಗೆ ಸೇರುವುದನ್ನು ತಕ್ಷಣ ತಡೆಯುವಂತೆ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು. ನಿರ್ಲಕ್ಷ ಕಂಡುಬಂದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕಾರ್ಮಿಕರು ಗಟ್ಟಿಯಾದ ಮಣ್ಣಿನಿಂದ ಕಾಮಗಾರಿ ಕಷ್ಟವಾಗುತ್ತಿದೆ ಎಂದು ತಿಳಿಸಿದಾಗ ಸ್ವತಃ ಸಿಇಓ ಅವರು ಸ್ಥಳದಲ್ಲಿ ಮಣ್ಣು ಅಗೆದು ಪರಿಶೀಲಿಸಿದರು. ಮಣ್ಣು ತೆಗೆಯಲು ಸಾಧ್ಯವಿರುವದನ್ನು ಖಚಿತಪಡಿಸಿದರು. ಮಾಪನದಲ್ಲಿ ಯಾವುದೇ ಸಡಿಲಿಕೆ ನೀಡಲು ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಕಾರ್ಮಿಕರ ಕೂಲಿ ವಿಳಂಬವಾಗದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಸಮರ್ಪಕ ಡ್ರಾಯಿಂಗ್, ವಿನ್ಯಾಸ ಹಾಗೂ ತಾಂತ್ರಿಕ ಯೋಜನೆ ಇಲ್ಲದೇ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಿದ ತಾಂತ್ರಿಕ ಅಭಿಯಂತರ ಹಾಗೂ ತಾಂತ್ರಿಕ ಸಹಾಯಕ ಅಭಿಯಂತರರಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಿದರು. ಮುಂದಿನ ಕಾಮಗಾರಿಗಳನ್ನು ಅಂದಾಜು, ತಾಂತ್ರಿಕ ಮಾರ್ಗದರ್ಶನ ಹಾಗೂ ಸ್ಥಳ ಪರಿಶೀಲನೆಯ ಬಳಿಕವೇ ಆರಂಭಿಸುವಂತೆ ನಿರ್ದೇಶನ ನೀಡಿದರು. ಕಾರ್ಮಿಕರಿಗೆ ಕೂಲಿ ಹಣವನ್ನು ವಿಳಂಬವಿಲ್ಲದೇ ಪಾವತಿಸುವಂಥೆ ಸೂಚಿಸಿದರು.
ಕದಲಿಮಟ್ಟಿ ಗ್ರಾಮ ಪಂಚಾಯತಿಯ ಲವಳೇಶ್ವರ ತಾಂಡಾದಲ್ಲಿ ೧೦೦ಕ್ಕೂ ಹೆಚ್ಚು ಕಾರ್ಮಿಕರು ಕೆರೆ ಸ್ವಚ್ಛತಾ ಕಾಮಗಾರಿಯಲ್ಲಿ ತೊಡಗಿರುವುದನ್ನು ಪರಿಶೀಲಿಸಿದರು. ಒಳಹರಿವು-ಹೊರಹರಿವು ಚಾನೆಲ್ ವ್ಯವಸ್ಥೆ ಕಲ್ಪಿಸಿ ಕೆರೆಯ ಗಡಿ ಗುರುತಿಸಿದ ಬಳಿಕ ಮುಂದಿನ ಅಭಿವೃದ್ದಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು. ಹಿರೇಗುಳಬಾಳದ ಮೂರಮಟ್ಟಿ ಕೆರೆ ಪರಿಶೀಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೂದಾಖಲೆ ಇಲಾಖೆಯ ಉಪನಿರ್ದೇಶಕರ ಮೂಲಕ ಸರ್ವೆ ಮಾಡಿ ನಿಖರ ಗಡಿ ಗುರುತಿಸುವಂತೆ ಹಾಗೂ ಒತ್ತುವರಿ ತೆರವುಗೊಳಿಸಿ ಕೆರೆಯ ಮೂಲ ಸ್ವರೂಪವನ್ನು ಪುನಃಸ್ಥಾಪಿಸುವಂತೆ ನಿರ್ದೇಶನ ನೀಡಿದರು.
ಭೇಟಿ ಸಮಯದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ಸಹಾಯಕ ನಿರ್ದೇಶಕ ಸಿದ್ದು ನಕ್ಕರಗುಂದಿ, ಡಿಐಇಸಿಯ ಅಜಯ ಸೂಳಿಕೇರಿ, ತಾಂತ್ರಿಕ ಸಂಯೋಜಕ, ತಾಂತ್ರಿಕ ಸಹಾಯಕ ಅಭಿಯಂತರ, ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.