-----
ತಾಳಿಕೋಟೆ, ಕಾಯಿಪಲ್ಲೆ ಮಾರುಕಟ್ಟೆಯನ್ನು ಕೇವಲ ಕಟ್ಟಡ ನಿರ್ಮಾಣಕ್ಕೆ ಸೀಮಿತಗೊಳಿಸದೆ, ವ್ಯಾಪಾರಸ್ಥರು, ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿ ಸಮಗ್ರ ಮಾರುಕಟ್ಟೆಯನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು. ಮಂಗಳವಾರರಂದು ಪಟ್ಟಣದ ಹಳೆಯ ಕಾಯಪಲ್ಲೆ ಮಾರುಕಟ್ಟೆ ಆವರಣದಲ್ಲಿ ೨ ಕೋಟಿ ರೂ.ವೆಚ್ಚದ ಎಸ್.ಎಫ್.ಸಿ.ವಿಶೇಷ ಅನುದಾನದಲ್ಲಿ ಕಾಯಿಪಲ್ಲೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಯಾವೆಲ್ಲ ಸೌಲಭ್ಯಗಳ ಅಗತ್ಯವಿದೆ ಎಂಬುದರ ಕುರಿತು ಎಲ್ಲರ ಸಲಹೆಯ ಮೇರೆಗೆ ಸರ್ಕಾರದಿಂದ ದೊರೆಯುವ ಅನುದಾನದ ಅವಕಾಶವನ್ನು ಬಳಸಿಕೊಂಡು ಅಗತ್ಯ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ವ್ಯಾಪಾರಿಗಳಿಗೆ ಮಾತ್ರವಲ್ಲದೆ ಸಗಟು (ಹೋಲ್ಸೇಲ್) ಅಂಗಡಿಗಳು, ಸಣ್ಣ ಮತ್ತು ದೊಡ್ಡ ವ್ಯಾಪಾರ ಮಳಿಗೆಗಳು, ರೈತರಿಗೆ ಅಗತ್ಯವಿರುವ ಸ್ಥಳಾವಕಾಶ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ದೂರದ ಊರುಗಳಿಂದ ಬೆಳಗಿನ ಜಾವವೇ ತರಕಾರಿ ಮಾರಾಟಕ್ಕೆ ಬರುವ ರೈತರಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ವಿಶ್ರಾಂತಿ ಹಾಗೂ ಇತರೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಚಿಂತನೆಯಿದೆ ಎಂದು ತಿಳಿಸಿದರು.
೬ ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ : ಕಾಮಗಾರಿಯ ಗುಣಮಟ್ಟಕ್ಕೆ ಯಾವುದೇ ರಾಜಿ ಮಾಡಿಕೊಳ್ಳದೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಿ ಜನರಿಗೆ ಶೀಘ್ರವಾಗಿ ಆದಷ್ಟು ೬ ತಿಂಗಳೊಳಗೆ ಕಾಮಗಾರಿಯನ್ನು ಮುಕ್ತಾಯಗೊಳಿಸಿಕೊಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದ ಅವರು ಈ ಕಾಮಗಾರಿಗೆ ಎಸ್ಎಫ್ಸಿ ಅನುದಾನದಡಿ ೨ ಕೋಟಿ ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಅಗತ್ಯ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಅನುದಾನದ ಅಗತ್ಯ ಕಂಡುಬಂದರೆ ಹೆಚ್ಚಿನ ಅನುದಾನ ನೀಡಲಾಗುವದೆಂದರು.
ತಾಳಿಕೋಟೆ ಅಭಿವೃದ್ದಿಗೆ ಆದ್ಯತೆ : ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಕಾಮಗಾರಿಗಳ ಆದ್ಯತೆಯನ್ನು ಸರಿಯಾಗಿ ಗುರುತಿಸಿ, ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗವಾಗದಂತೆ ಯೋಜನೆ ರೂಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ತಾಳಿಕೋಟೆ ಪಟ್ಟಣದಲ್ಲಿ ಬಹುವರ್ಷಗಳ ಬೇಡಿಕೆಗಳಿದ್ದು, ಅವುಗಳಲ್ಲಿ ತುರ್ತು ಅಗತ್ಯವಿರುವ ಕಾಮಗಾರಿಗಳಿಗೆ ಮೊದಲು ಆದ್ಯತೆ ನೀಡಲಾಗುತ್ತಿದೆ ಈಗಾಗಲೇ ಮಾಡಿರುವ ಕಾಮಗಾರಿಗಳನ್ನು ಮತ್ತೆ ಒಡೆದು ಪುನಃ ನಿರ್ಮಿಸುವ ಪರಿಸ್ಥಿತಿ ಬರದಂತೆ ದೂರದೃಷ್ಟಿಯಿಂದ ಯೋಜನೆ ರೂಪಿಸಲಾಗುವದೆಂದರು.
ಕುಡಿಯುವ ನೀರಿಗೆ ಮೊದಲ ಆದ್ಯತೆ : ಜಲಧಾರೆ ಸೇರಿದಂತೆ ವಿವಿಧ ಕುಡಿಯುವ ನೀರಿನ ಯೋಜನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸುವ ಮೊದಲು ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಗಮನ ಹರಿಸಬೇಕು ಜನರಿಗೆ ಮೊದಲು ಕುಡಿಯುವ ನೀರು ಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಿದ ನಂತರ ರಸ್ತೆ ನಿರ್ಮಾಣ ಮಾಡಬೇಕು. ಪೈಪ್ಲೈನ್ಗಳನ್ನು ಭೂಮಿಯೊಳಗೆ ಅಳವಡಿಸಬೇಕಾಗಿರುವುದರಿಂದ ಈಗಾಗಲೇ ನಿರ್ಮಿಸಿರುವ ಸಿಸಿ ರಸ್ತೆಯನ್ನು ಮತ್ತೆ ಕತ್ತರಿಸುವ ಪರಿಸ್ಥಿತಿ ಎದುರಾಗುತ್ತದೆ ಹಣ ವ್ಯರ್ಥವಾಗುತ್ತದೆ ಎಂದರು.
ದೂರದೃಷ್ಟಿಯ ಅಭಿವೃದ್ಧಿ ಅಗತ್ಯ : ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಕನಿಷ್ಠ ಸಾಮಾನ್ಯ ಜ್ಞಾನ ಹಾಗೂ ದೂರದೃಷ್ಟಿ ಅಗತ್ಯ. ಸಾರ್ವಜನಿಕರ ಹಣದಲ್ಲಿ ನಿರ್ಮಿಸುವ ಕಾಮಗಾರಿಗಳು ದೀರ್ಘಕಾಲ ಜನರಿಗೆ ಉಪಯೋಗವಾಗುವಂತಿರಬೇಕು. ಒಂದು ಕಾಮಗಾರಿ ಪೂರ್ಣಗೊಂಡ ನಂತರ ಮತ್ತೊಂದು ಕಾಮಗಾರಿಗಾಗಿ ಅದನ್ನು ಒಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಶಾಸಕ ನಾಡಗೌಡ ಹೇಳಿದರು.
ಡೋಣಿ ಸೇತುವೆ ನಿರ್ಮಾಣಕ್ಕೆ ಆದ್ಯತೆ : ತಾಳಿಕೋಟೆ ಭಾಗದಲ್ಲಿ ಹಿಂದೆ ಉಂಟಾದ ಪ್ರವಾಹದ ಸಂದರ್ಭದಲ್ಲಿ ಪಟ್ಟಣದ ಸಂಪರ್ಕ ಕಡಿತಗೊಂಡಿದ್ದ ಪರಿಸ್ಥಿತಿಯನ್ನು ಸ್ಮರಿಸಿದ ಅವರು, ಡೋಣಿ ನದಿಗೆ ಸೇತುವೆ ನಿರ್ಮಾಣದ ಅಗತ್ಯವನ್ನು ಮನಗಂಡು ಸರ್ಕಾರದ ಗಮನಕ್ಕೆ ತರಲಾಗಿತ್ತು. ಅದರಂತೆ ಹಡಗಿನಾಳ ರಸ್ತೆಯ ಡೋಣಿ ನಧಿಗೆ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಜನರ ಸಂಚಾರಕ್ಕೆ ಅನುಕೂಲವಾಗಿದೆ ಎಂದರು. ವಿಜಯಪುರ ರಸ್ತೆಯ ಡೋಣಿ ನಧಿಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಕೆಲವು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ ಶಾಸಕ ಸಿ.ಎಸ್.ನಾಡಗೌಡರು ಸಮಗ್ರ ಅಭಿವೃದ್ದಿ ದೃಷ್ಠಿಕೋನದಿಂದ ಅಭಿವೃದ್ದಿ ಕಾಮಗಾರಿಗಳು ಕೈಗೊಳ್ಳುತ್ತಿದ್ದಾರೆ ಮುಮದಿನ ವಾರದಲ್ಲಿ ಸುಮಾರು ೮ ಕೋಟಿಗೂ ಅಧಿಕ ಅಭಿವರದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ತಾಳಿಕೋಟೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಈ ಸಮಯದಲ್ಲಿ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಗ್ಯಾರೆಂಟಿ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ, ಸೈಯದಶಕೀಲಹ್ಮದ ಖಾಜಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಹಿಬೂಬ ಚೋರಗಸ್ತಿ, ಎಂ.ಜಿ.ಪಾಟೀಲ, ಶ್ರೀಮತಿ ನೀಲಮ್ಮ ಪಾಟೀಲ, ಸಿದ್ದನಗೌಡ ಪಾಟೀಲ(ನಾವದಗಿ), ಬಿ.ಎನ್.ಹಿಪ್ಪರಗಿ, ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಎಂ.ಎಚ್.ಬಿಳಗಿ, ಪುರಸಭೆ ಮುಖ್ಯಾಧಿಕಾರಿ ಸುನೀಲ್ ಪಾಟೀಲ, ಗುತ್ತಿಗೆದಾರ ವಿಭೂತಿಮಠ, ಸಂಗನಗೌಡ ಅಸ್ಕಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಚೌದ್ರಿ, ಮಹಿಬೂಬ ಕೇಂಭಾವಿ, ಮಂಜೂರ ಬೇಪಾರಿ, ಫಯಾಜ್ ಉತ್ನಾಳ, ಮೊದಲಾದವರು ಉಪಸ್ಥಿತರಿದ್ದರು.