ಅಥಣಿ: ಪಟ್ಟಣದ 27 ವಾರ್ಡ್ ಗಳಲ್ಲಿ ಸ್ವಚ್ಛತೆ ವ್ಯವಸ್ಥೆ ಸಮರ್ಪಕವಾಗಿ ನಡೆಯದ ಪರಿಣಾಮ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಬ್ಬಿರ ಸಾತಬಚ್ಚೆ ಆರೋಪಿಸಿದ್ದಾರೆ.
ಪಟ್ಟಣದ ಕರವೆ ಕಛೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅಧ್ಯಕ್ಷ ಶಬ್ಬೀರ ಸಾತಬಚ್ಚೆ ಮಾತನಾಡಿ ನಾಲಬಂದ್ ಗಲ್ಲಿ, ಪೆಂಡಾರ ಮಸೀದಿ ಗಲ್ಲಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡುಬರುತ್ತಿದ್ದು, ಚರಂಡಿಗಳಲ್ಲಿ ಕೊಳಚೆ ನೀರು ತುಂಬಿ ನಿಂತಿದೆ. ಹಲವು ದಿನಗಳಿಂದ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದರಿಂದ ದುರ್ವಾಸನೆ ಹರಡುತ್ತಿದೆ. ಇದರ ಪರಿಣಾಮ ಸೊಳ್ಳೆಗಳ ಸಂತತಿ ಹೆಚ್ಚಾಗಿ, ಸಂಜೆ ಹಾಗೂ ರಾತ್ರಿ ವೇಳೆ ಮನೆಗಳಲ್ಲಿ ಜನರು ನೆಮ್ಮದಿಯಿಂದ ಇರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮಲೇರಿಯಾದಂತಹ ರೋಗಗಳು ಜನಸಾಮಾನ್ಯರಲ್ಲಿ ಹರಡು ಆತಂಕ ಎದುರಾಗಿದೆ. ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಪುರಸಭೆ ಆಡಳಿತವು ನಿಯಮಿತವಾಗಿ ಕಸ ಸಂಗ್ರಹಣೆ, ಚರಂಡಿ ಸ್ವಚ್ಛತೆ ಹಾಗೂ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆದರೆ ಅಧಿಕಾರಿಗಳು ಈ ಸಮಸ್ಯೆಗಳತ್ತ ಸಮರ್ಪಕ ಗಮನ ಹರಿಸುತ್ತಿಲ್ಲ. ಕಸದ ರಾಶಿಗಳನ್ನು ತೆರವುಗೊಳಿಸಿ, ಕೊಳಚೆ ನೀರು ನಿಲ್ಲದಂತೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಅಗತ್ಯವಿರುವ ಔಷಧಿ ಸಿಂಪಡಣೆ ಹಾಗೂ ಫಾಗಿಂಗ್ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಹೋರಾಟ ನಡೆಸಲಾಗುವುದು ಎಂದು ಶಬ್ಬೀರ ಸಾತಬಚ್ಚೆ ಎಚ್ಚರಿಸಿದರು
ಪುರಸಭೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯಾತ್ಮಕ ಪ್ರದೇಶಗಳ ಪಟ್ಟಿಯನ್ನು ಸಿದ್ಧಪಡಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸೊಳ್ಳೆಗಳ ಹಾವಳಿ ಮತ್ತು ಅಸ್ವಚ್ಛತೆಯಿಂದ ಸಾರ್ವಜನಿಕ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕರವೇ ಎಚ್ಚರಿಸಿದೆ.
ಈಗಾಗಲೇ ನಾನು ಮತ್ತು ಕಾರ್ಮಿಕರು ಸೇರಿಕೊಂಡು ಪಟ್ಟಣದಲ್ಲಿ ಹಲವು ಕಡೆ ಸೂತವರದು ಸ್ವಚ್ಛತೆ ಕೈ ಗೊಂಡಿದವೆ, ಹಾಗೂ ಸೊಳ್ಳೆ ಕಾಟದ ಬಗ್ಗೆ ಜನರಿಗೆ ಸಮಸ್ಯೆಯಾಗುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದೆ, ಅಧ್ಯಕ್ಷರ ಹಾಗೂ ಮುಖ್ಯಾಧಿಕಾರಿ ಮತ್ತು ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಪಟ್ಟಣದ 27 ವಾರ್ಡುಗಳಲ್ಲಿ ಫಾಗಿಂಗ್ ಹಾಗೂ ಸೊಳ್ಳೆನಾಶಕ ಪುಡಿ ಸಿಂಪಡಿಸಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುವುದು.