ಬೆಂಗಳೂರು, ಏಪ್ರಿಲ್ 23: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರಿಂದ ಗುಂಡಿನ ದಾಳಿ ನಡೆದಿದ್ದು, ಕರ್ನಾಟಕದ ಅನೇಕ ಪ್ರವಾಸಿಗರು ಸದ್ಯ ಅಲ್ಲಿ ಸಿಲುಕಿದ್ದಾರೆ. ಅವರನ್ನು ಕರೆತರಲು ಕರ್ನಾಟಕ ಸರ್ಕಾರ 2 ತಂಡಗಳನ್ನು ಕಳುಹಿಸಿದೆ. ಸಚಿವ ಅನಿಲ್ ಲಾಡ್ ಅವರ ನೇತೃತ್ವದಲ್ಲಿ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಇದೀಗ ಕರ್ನಾಟಕ ಸರ್ಕಾರ ಸಹಾಯವಾಣಿ
ಸಂಖ್ಯೆಗಳನ್ನು ಆರಂಭಿಸಿದೆ. ರಾಜ್ಯದ ಪ್ರವಾಸಿಗರ ಸಂಬಂಧಿಕರು, ಕುಟುಂಬಸ್ಥರು ಈ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.
ಕನ್ನಡಿಗರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಜಮ್ಮು ಮತ್ತು ಕಾಶ್ಮೀರ ಪ್ರವಾಸಕ್ಕೆ ತೆರಳಿದವರ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರ ಮಾಹಿತಿ ನೀಡಲು ರಾಜ್ಯ ಸರ್ಕಾರ ಮನವಿ ಮಾಡಲಾಗಿದೆ.
ಕಾಶ್ಮೀರ ಉಗ್ರ ದಾಳಿ: ಕರ್ನಾಟಕ ಸಹಾಯವಾಣಿ ಸಂಖ್ಯೆಗಳು
- 080-43344334
- 080-43344335
- 080-43344336
- 080-43344342
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದ ವೇಳೆ ಜಮ್ಮು ಪ್ರವಾಸದಲ್ಲಿ ಇದ್ದ ಹಾವೇರಿ ಜಿಲ್ಲೆಯ ಎರಡು ಕುಟುಂಬಗಳು ಸುರಕ್ಷಿತವಾಗಿವೆ ಎಂಬುದು ತಿಳಿದುಬಂದಿದೆ. ಹಾವೇರಿಯ ವಿರೇಶ್ ದಂಪತಿ ಹಾಗೂ ಶಿಗ್ಗಾವಿಯ ನಾಗರಾಜ್ ದಂಪತಿ ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಸದ್ಯ ಇವರು ಸದ್ಯ ಜಮ್ಮುವಿನ ಕತ್ರಾದಲ್ಲಿದ್ದಾರೆ.