ಬೆಳಗಾವಿ: ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿಗೆ ನಾಲ್ಕು ವರ್ಷಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ನಾಲ್ಕನೇ ವರ್ಷದ ಸ್ಥಾಯಿ ಸಮಿತಿಗಳ ಸಭೆಗಳು ನಡೆಯುತ್ತಿದ್ದರೂ, ಪಾಲಿಕೆಯ ಕೆಲ ಅಧಿಕಾರಿಗಳು ಸಭೆಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದೇ ಹಾಗೂ ಅಗತ್ಯ ಮಾಹಿತಿಯೊಂದಿಗೆ ಸಿದ್ಧರಾಗಿ ಬಾರದಿರುವುದಕ್ಕೆ ನಗರ ಸೇವಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಸಭಾಭವನದಲ್ಲಿ ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೇಯಸ ನಾಕಾಡಿ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಯಿತು.
ಸಭೆಗೆ ಅಧಿಕಾರಿಗಳು ವಿಳಂಬವಾಗಿ ಆಗಮಿಸುವುದು ಹಾಗೂ ಸಂಪೂರ್ಣ ಮಾಹಿತಿಯಿಲ್ಲದೆ ಹಾಜರಾಗಿರುವುದು ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.
ಅಧಿಕಾರಿಗಳ ಅಶಿಸ್ತಿನ ವರ್ತನೆಗೆ ಕಿಡಿಕಾರಿದ ಮೇಯರ್, ಉಪಮೇಯರ್, ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, “ನಾವು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗುತ್ತಿದ್ದರೂ ಅಧಿಕಾರಿಗಳಿಗೆ ಸಭೆಯ ಸಮಯ ಮತ್ತು ಜವಾಬ್ದಾರಿಗಳ ಬಗ್ಗೆ ಪದೇಪದೇ ತಿಳಿಸಿ ಹೇಳುವ ಪರಿಸ್ಥಿತಿ ಎದುರಾಗಿದೆ. ನೋಟಿಸ್ ನೀಡಿದರೂ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗುತ್ತಿಲ್ಲ. ನಿಮ್ಮ ಈ ವರ್ತನೆಯಿಂದ ಪಾಲಿಕೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಅಧಿಕಾರಿಗಳ ತಪ್ಪಿನಿಂದ ಜನರ ಮುಂದೆ ನಾವು ಕೆಟ್ಟವರಾಗಿ ಕಾಣುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ನಗರ ಸೇವಕರಿಗೆ ಸಮರ್ಪಕವಾಗಿ ನೀಡದೇ ಇರುವುದು, ಸಭೆಗೆ ಅಗತ್ಯ ಸಿದ್ಧತೆಯಿಲ್ಲದೆ ಆಗಮಿಸುವುದು ಹಾಗೂ ಸಭೆಗಳಿಗೆ ವಿಳಂಬವಾಗಿ ಬರುವುದು ಸರಿಯಲ್ಲ ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
“ಈಗಾಗಲೇ ಪಾಲಿಕೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿದೆ ಎಂಬ ಮಾತುಗಳು ಹೊರಗಡೆ ಕೇಳಿಬರುತ್ತಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ನಗರ ಸೇವಕರೊಂದಿಗೆ ಸಹಕರಿಸಿ ಅಭಿವೃದ್ಧಿಪರ ಕಾರ್ಯಗಳನ್ನು ಕೈಗೊಳ್ಳಬೇಕು. ಪಾಲಿಕೆ ಸೂಪರ್ಸೀಡ್ ಆಗುವ ಪರಿಸ್ಥಿತಿ ಬರಬಹುದು ಎಂಬ ಕಾರಣಕ್ಕೆ ಚುನಾಯಿತ ಪ್ರತಿನಿಧಿಗಳ ಮಾತು ಕೇಳಬಾರದು ಎಂದುಕೊಳ್ಳುವುದು ತಪ್ಪು. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು” ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಿಷತ್ ಕಾರ್ಯದರ್ಶಿ ಹಾಗೂ ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮೀ ನಿಪ್ಪಾಣಿಕರ, ಅಧಿಕಾರಿಗಳು ಸಭೆಗೆ ಸಮಯಕ್ಕೆ ಸರಿಯಾಗಿ ಹಾಜರಾಗದೇ ಇರುವುದು ಸಭೆಗೆ ಅಗೌರವ ತೋರಿದಂತಾಗುತ್ತದೆ. ಕೆಎಂಸಿ ಕಾಯ್ದೆಯನ್ವಯ ಚುನಾಯಿತ ಆಡಳಿತ ಮಂಡಳಿ ನಿರ್ಣಯ ಕೈಗೊಂಡಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಅಧಿಕಾರಿಗಳು ಸಭೆಯ ಗೌರವ ಕಾಪಾಡಬೇಕು ಹಾಗೂ ಸಭೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸೂಕ್ತ ಮಾಹಿತಿಯೊಂದಿಗೆ ಸಿದ್ಧರಾಗಿ ಬರಬೇಕು ಎಂದು ಸೂಚಿಸಿದರು.
ಗಣೇಶೋತ್ಸವ ಸಿದ್ಧತೆ ಕುರಿತು ಚರ್ಚೆ
ಸಭೆಯಲ್ಲಿ ಮುಂಬರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಕೈಗೊಳ್ಳಲಾಗುತ್ತಿರುವ ಸಿದ್ಧತಾ ಕಾರ್ಯಗಳ ಕುರಿತು ಚರ್ಚಿಸಲಾಯಿತು. ರಸ್ತೆ, ಬೀದಿ ದೀಪಗಳು ಹಾಗೂ ವಿದ್ಯುತ್ ತಂತಿಗಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇದೇ ವೇಳೆ ಕಳೆದ ಅಗಸ್ಟ್ 01ರ ಸಭೆಯ ನಡಾವಳಿಗಳನ್ನು ಓದಿ ದೃಢೀಕರಿಸಲಾಯಿತು. ಕಾನೂನು ಸಲಹೆಗಾರರ ಅನುಪಸ್ಥಿತಿ ಹಾಗೂ ಕಂದಾಯ ವಿಭಾಗದಿಂದ ಪೂರ್ಣ ಪ್ರಮಾಣದ ಮಾಹಿತಿ ಲಭ್ಯವಾಗದ ಕಾರಣ ಕೆಲವು ವಿಷಯಗಳನ್ನು ಮುಂದಿನ ಸಭೆಗೆ ಮುಂದೂಡಲಾಯಿತು.
ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರು, ಮೇಯರ್, ಉಪಮೇಯರ್, ಆಡಳಿತ ಪಕ್ಷದ ನಾಯಕರು, ಸಮಿತಿ ಸದಸ್ಯರು ಹಾಗೂ ನಗರ ಸೇವಕರು ಸೇರಿದಂತೆ ಪರಿಷತ್ ಕಾರ್ಯದರ್ಶಿ, ಕಂದಾಯ ಅಧಿಕಾರಿ, ಮುಖ್ಯ ಲೆಕ್ಕಾಧಿಕಾರಿ, ನಗರ ಯೋಜನಾಧಿಕಾರಿ, ಆಡಳಿತ ವಿಭಾಗದ ವ್ಯವಸ್ಥಾಪಕರು, ಅಭಿವೃದ್ಧಿ ವಿಭಾಗದ ಅಭಿಯಂತರರು, ಆರೋಗ್ಯಾಧಿಕಾರಿ, ವಿದ್ಯುತ್ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.