ಮುದ್ದೇಬಿಹಾಳ,ಸೆ,೦೭: ವಿಜಯಪುರ ಜಿಲ್ಲೆಯ ೧೩ ತಾಲೂಕುಗಳಲ್ಲೂ ಮಳೆ ಕೊರತೆ ಹಾಗೂ ಬೆಳೆ ಹಾನಿಯಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಂತ ಹಂತವಾಗಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ರೈತ ಮೋರ್ಚಾ ವತಿಯಿಂದ ಬೀದಿ ಹೋರಾಟ, ಪತ್ರಿಕಾಗೋಷ್ಠಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಲಾಗಿದೆ. ಆದರೆ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಸೆ.೭ರಿಂದ ಅನಿರ್ದಿಷ್ಟಾವಧಿ ಧರಣಿ : ಸೆ.೭ರಿಂದ ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರೈತರನ್ನು ಒಳಗೊಂಡಂತೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು. ಬಿದರಕುಂದಿಯಲ್ಲಿ ಕೂಡಲಸಂಗಮನಾಥನಿಗೆ ಪೂಜೆ ಸಲ್ಲಿಸಿದ ಬಳಿಕ ವಿವಿಧ ಗ್ರಾಮಗಳ ರೈತರು ಎತ್ತಿನಬಂಡಿ ಹಾಗೂ ಪಾದಯಾತ್ರೆಯ ಮೂಲಕ ಬಿದರಕುಂದಿ ಕ್ರಾಸ್ನಿಂದ ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಹೋರಾಟಕ್ಕೆ ವಿವಿಧ ಬಿಜೆಪಿ ಮೋರ್ಚಾಗಳಿಗೆ ದಿನವಾರು ಜವಾಬ್ದಾರಿ ನೀಡಲಾಗಿದೆ. ರೈತ ಮೋರ್ಚಾ, ಯುವ ಮೋರ್ಚಾ, ಎಸ್ಟಿ ಮೋರ್ಚಾ ಹಾಗೂ ಮಹಿಳಾ ಮೋರ್ಚಾಗಳ ನೇತೃತ್ವದಲ್ಲಿ ಹೋರಾಟ ಮುಂದುವರಿಯಲಿದೆ. ಸೆ.೧೨ರಂದು ಮುದ್ದೇಬಿಹಾಳ ನಗರ ಬಂದ್ಗೆ ಕರೆ ನೀಡಲಾಗಿದೆ ಎಂದು ನಡಹಳ್ಳಿ ತಿಳಿಸಿದರು.
೭ ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಬೇಕು : ಈಗಾಗಲೇ ಆರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ವೈಜ್ಞಾನಿಕ ಮಾನದಂಡ ಹಾಗೂ ಸರ್ಕಾರದ ದಾಖಲೆಗಳ ಆಧಾರದ ಮೇಲೆ ಬಾಕಿ ಇರುವ ಏಳು ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಬೇಕು. ತಾಳಿಕೋಟೆ-ಮುದ್ದೇಬಿಹಾಳ ಸೇರಿದಂತೆ ವಿಜಯಪುರ ಜಿಲ್ಲೆಯ ಸಮಗ್ರ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಸೆ.೧೨ರವರೆಗೆ ಶಾಂತಿಯುತ ಹೋರಾಟ ನಡೆಸಲಾಗುವುದು. ಇದಕ್ಕೂ ಸ್ಪಂದನೆ ಸಿಗದಿದ್ದಾಗ ದಿ. ೧೩ ರಂದು ಮುದ್ದೇಬಿಹಾಳ ಸಂಪೂರ್ಣ ಬಂದ್ಗೆ ಕರೆ ನೀಡಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಶಾಸಕರು ವಾಸ್ತವ ಸ್ಥಿತಿ ಅಧ್ಯನ ನಡೆಸಬೇಕಿತ್ತು : ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಅವರು ರೈತರ ಸಂಕಷ್ಟದ ಬಗ್ಗೆ ಮಾತನಾಡುತ್ತಿದ್ದಾರೆ ಶಾಸಕರು ಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ವಾಸ್ತವ ಸ್ಥಿತಿಯ ಅಧ್ಯಯನ ನಡೆಸಬೇಕಿತ್ತು. ಶಾಸಕರು ಸರ್ಕಾರದ ಭಾಗವಾಗಿದ್ದು, ಶಾಸಕರು ರೈತರ ಪರವಾಗಿ ಪಕ್ಷಾತೀತ ಹೋರಾಟಕ್ಕೆ ಮುಂದಾದರೆ ಎಲ್ಲರೂ ಹೋರಾಟಕ್ಕೆ ಕೈಜೋಡಿಸಲಿದ್ದಾರೆ ರೈತರ ವಿಷಯದಲ್ಲಿ ರಾಜಕಾರಣ ಮಾಡಲು ನಾನು ಹೋಗುವದಿಲ್ಲಾವೆಂದರು. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಜಿಲ್ಲೆಯ ಉಳಿದ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಪ್ರಭು ಕಡಿ, ಮಲಿಕೇಂದ್ರಾಯಗೌಡ ಪಾಟೀಲ, ಕೆಂಚೆಪ್ಪ ಬಿರಾದಾರ, ಜಗದೀಶ ಪಂಪಣ್ಣವರ, ಡಾ.ವೀರೇಶ ಪಾಟೀಲ, ಹಣಮಂತ ನಾಯಕಮಕ್ಕಳ, ಸಂಗಣ್ಣ ಹತ್ತಿ, ಗೀರಿಶಗೌಡ ಪಾಟೀಲ(ಮುರಾಳ), ಶಂಕತಗೌಡ ಶಿವಣಗಿ, ಸುಭಾಸ ಕಾಳಗಿ, ರೇಖಾ ಕೊಂಡಗೂಳಿ, ಗೌರಮ್ಮ ಹುನಗುಂದ, ಶಿವು ಕನ್ನೊಳ್ಳಿ, ಹರೀಶ ನಾಟೀಕಾರ, ನಾಗೇಶ ಕವಡಿಮಟ್ಟಿ, ಮಸೂತಿ, ಕಾರ್ಯಕರ್ತರು ಉಪಸ್ಥಿತರಿದ್ದರು.