-
ತಾಳಿಕೋಟೆ, ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಗುರುವಾರರಂದು ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೆಟ್ಟಿ ನೀಡಿ ಶ್ರೀ ಮಠದ ಪೀಠಾಧಿಪತಿ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಂದಕೂರ ಅವರು ಶ್ರೀ ಸಿದ್ದಲಿಂಗದೇವರು ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ತಾವು ಚಿಕ್ಕವಯಸ್ಸಿನಲ್ಲಿಯೇ ಇದ್ದರು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಸರಳತೆ ಸೌಜನ್ಯ ಹಾಗೂ ಅಹಂಕಾರ ರಹಿತ ಸ್ವಭಾವದಿಂದ ಜನರ ವಿಶ್ವಾಸನ್ನು ಗಳಿಸಿಕೊಂಡಿದ್ದಾರೆಂದು ಹೇಳಿದರು.
ವಿಶೇಷವಾಗಿ ಗ್ರಾಮೀಣಮಟ್ಟದಲ್ಲಿ ನಡೆಯುತ್ತಿರುವ ವ್ಯಸನಮುಕ್ತ ಕಾರ್ಯಕ್ರಮಗಳು ಹಾಗೂ ಪ್ರವಚನ ಮೂಲಕ ಸನ್ಮಾರ್ಗಕ್ಕೆ ಕೊಂಡೊಯ್ಯುವಂತಹ ಕಾರ್ಯಕ್ರಮಗಳ ಕುರಿತು ಶ್ಲ್ಯಾಘಿಸಿದ ಶಾಸಕರು ಇಂತಹ ಅಭಿಯಾನದಿಂದ ಅನೇಕ ಜನರು ದುಚ್ಚಟಗಳಿಂದ ದೂರವಾಗಿ ತಮ್ಮ ತಮ್ಮ ಉತ್ತಮ ಜೀವನ ನಡೆಸುತ್ತಾ ಸಾಗಿದ್ದಾರೆ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ರಾಜ್ಯದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರಗೊಳ್ಳಬೇಕಾಗಿದೆ ಎಂದು ಆಶಿಸಿದರಲ್ಲದೇ ನಮ್ಮ ಮೇಲೆ ಶ್ರೀ ಮಠದ ತಮ್ಮ ಆಶೀರ್ವಾದ ಸದಾ ಇರಲಿ ಎಂದರು.
ನಂತರ ಶ್ರೀ ಖಾಸ್ಗತೇಶ್ವರ ಮಠದ ಸಿದ್ದಲಿಂಗದೇವರು ಮಾತನಾಡಿ ಶಾಸಕ ಶರಣಗೌಡ ಕುಂದಕೂರ ಅವರು ಉತ್ತಮ ನೀತಿ ನಡವಳಿಕೆ ಸರಳತೆಯ ಸ್ವಭಾವದೊಂದಿಗೆ ಜನತೆಯೊಂದಿಗೆ ಬೆರೆಯುವಂತಹ ಗುಣವೇ ಅವರನ್ನು ಉನ್ನತಮಟ್ಟಕ್ಕೆ ಕೊಂಡ್ಯೊಯ್ದಿದೆ ಎಂದು ಅಭಿಪ್ರಾಯಪಟ್ಟ ಶ್ರೀಗಳು ಕೂಡಲೇ ಶಾಸಕ ಶರಣಗೌಡ ಅವರಿಗೆ ಶ್ರೀ ಮಠದ ವತಿಯಿಂದ ಗೌರವಿಸಿದರು. ಪ್ರತಿಯಾಗಿ ಶಾಸಕರು ಶ್ರೀ ಸಿದ್ದಲಿಂಗದೇವರಿಗೆ ಸನ್ಮಾನಿಸಿ ಗೌರವಿಸಿದರು. ಶಾಸಕರ ಹಾಗೂ ಶ್ರೀಗಳ ಭೇಟಿಯು ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡುವಂತಾಯಿತು.
ಈ ಸಮಯದಲ್ಲಿ ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಸ ವಣಗೇರಾ, ಹಾಗೂ ವಿಜಯಪುರ ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಬಸನಗೌಡ ಮಾಡಗಿ, ಮಲ್ಲಿಕಾರ್ಜುನ ಅರುಣಿ, ಮಲ್ಲನಗೌಡ ಹೊಸಳ್ಳಿ, ನಿಂಗನಗೌಡ ಬಿರಾದಾರ, ಅಮರಯ್ಯಸ್ವಾಮಿ ಜಾಲಿಬೆಂಚಿ, ರಾಮನಗೌಡ ಕೆಸರಟ್ಟಿ, ನರಸಿಂಹರೆಡ್ಡಿ, ಶರಣು ಯಡಹಳ್ಳಿ ಮೊದಲಾದವರು ಉಪಸ್ತಿತರಿದ್ದರು.