ತಾಳಿಕೋಟೆ, ನಮ್ಮ ಮತಕ್ಷೇತ್ರದ ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳನ್ನು ನಿಯಮಾನುಸಾರ ಬರಪಟ್ಟಿಯಲ್ಲಿ ಸೇರಿಸುವುದು ಜಿಲ್ಲಾ ಮಂತ್ರಿಗಳ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಾನು ಅನ್ಯಾಯವಾಗಿದ್ದನ್ನು ಪ್ರಶ್ನಿಸುವುದು ನನ್ನ ಕರ್ತವ್ಯವಾಗಿದೆ. ಅದನ್ನು ನಾನು ಕೇಳಿದ್ದೇನೆ. ಜತೆಗೆ ಒತ್ತಾಯಿಸಿದ್ದೇನೆ. ಈ ಕುರಿತು ನಾನು ನಮಗಾದ ಅನ್ಯಾದ ವಿರುದ್ಧ ಸತ್ಯಾಗ್ರಹ ಮಾಡುವುದಾಗಿ ನೀಡಿದ ನನ್ನ ಹೇಳಿಕೆಗೆ ಚಡಪಡಿಸಿ ಒದ್ದಾಡುತ್ತಿರುವ ತಮ್ಮ ಬಗ್ಗೆ ನಾನೇನು ಹೊಸದಾಗಿ ಹೇಳಬೇಕಿಲ್ಲ ಎಂದು ಕೆಎಸ್ಡಿಎಲ್ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದ್ದಾರೆ.
ಬರಪಟ್ಟಿಗೆ ಮುದ್ದೇಬಿಹಾಳ ಮತಕ್ಷೇತ್ರವನ್ನು ಸೇರಿಸುವಲ್ಲಿ ಆಗಿರುವ ತಾರತಮ್ಯದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಸಿ.ಎಸ್.ನಾಡಗೌಡ ಅವರು ಈ ಕುರಿತು ಸ್ಪಷ್ಟನೆ ರೂಪದ ಪತ್ರಿಕಾ ಪ್ರಕಟಣೆಯನ್ನು ಭಾನುವಾರ ನೀಡಿದ್ದಾರೆ. ಜತೆಗೆ ಸಚಿವ ಎಂ.ಬಿ.ಪಾಟೀಲರ ಟೀಕೆಗಳಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ರಾಜಕಾಣರದ ಬಗ್ಗೆ ಗೊತ್ತಿರುವವರಿಗೆಲ್ಲ ನಿಮ್ಮ ಷಡ್ಯಂತ್ರ ಬಗ್ಗೆ ಗೊತ್ತಿರುವುದು ಹೊಸದೇನಲ್ಲ. ಹಲವಾರು ವಿರೋಧ ಪಕ್ಷದವರ ಜೊತೆಗೂಡಿ ನೀವು ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರಿಗಿಂತ, ನಾಯಕರಿಗಿಂತ ಹಲವರೊಂದಿಗೆ ಮಧುರ ಬಾಂಧವ್ಯದಲ್ಲಿದ್ದಿರಿ. ತನಗಾಗದವರನ್ನು ಸ್ವಪಕ್ಷೀಯರು ಅಂತಲೂ ನೋಡದೇ ವಾಮಮಾರ್ಗದಿಂದ ಹಣಿಯಲು ಪ್ರಯತ್ನಿಸುತ್ತಿರುವುದನ್ನೆಲ್ಲ ಎಳೆ ಎಳೆಯಾಗಿ ನಾನು ಸೇರಿದಂತೆ ಜಿಲ್ಲೆಯ ಇತರೆ ನಾಯಕರು ಕೂಡ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಹೈಕಮಾಂಡ್ ತಿಳಿಹೇಳಿದ್ದರಿಂದ ರಾಜಕೀಯ ವಿಷಯದಲ್ಲಿ ನಾವೆಲ್ಲರೂ ತಾಳ್ಮೆಯಿಂದ ಇದ್ದೇವೆ. ಆದರೆ ಭೀಕರ ಬರಗಾಲ ಬಂದು ನನ್ನ ಕ್ಷೇತ್ರದ ಅನ್ನದಾತ ಸಂಕಟದಲ್ಲಿರುವ ಸಮಯದಲ್ಲೂ ನಾನು ಮೌನವಾಗಿದ್ದರೆ ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಸಮಯದಲ್ಲಿ ನೀವು ಎಸಗಿರುವ ಅನ್ಯಾಯದ ವಿರುದ್ಧ ಅದುಮಿಟ್ಟುಕೊಂಡು ಸುಮ್ಮನಿರಲು ಹೇಗೆ ಸಾಧ್ಯ? ನಮ್ಮ ರೈತರ ಹಿತಕ್ಕಿಂತ ವೈಯಕ್ತಿಕ ಪ್ರತಿಷ್ಠೆ ಏನೂ ದೊಡ್ಡದಲ್ಲ. ತಾವೆಷ್ಟು ಷಡ್ಯಂತ್ರವಾದಿಗಳೆಂದು ಜಿಲ್ಲೆ ನಾಯಕರಿಗೆ, ಜನತೆಗೆ ಹಾಗೂ ರೈತರಿಗೆ ತಿಳಿದಿದೆ. ಇನ್ನು ಮುಂದೆಯಾದರೂ ತಮ್ಮ ದ್ವಂದ ಹೇಳಿಕೆಗಳನ್ನು ನಿಲ್ಲಿಸಿ ಎಂದು ಖಾರವಾಗಿ ಹೇಳಿದ್ದಾರೆ.
ನಮ್ಮ ವರಿಷ್ಠರು ದೆಹಲಿಗೆ ಆಗಮಿಸುವಂತೆ ಕರೆ ಮಾಡಿದ್ದರಿಂದಾಗಿ ನಾನು ಆ.೫ ರಂದು ಸಂಜೆ ೫ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ. ನಂತರ ಬೆಂಗಳೂರಿಂದ ದೆಹಲಿಗೆ ಪ್ರಯಾಣ ಬೆಳೆಸಿ ನಂತರ ಆ.೭ ರಂದು ರಾತ್ರಿ ಮರಳಿದ್ದೇನೆ. ತದನಂತರ ಆ.೧೦ ರಂದು ನನ್ನ ಸ್ವಕ್ಷೇತ್ರ ಮುದ್ದೇಬಿಹಾಳಕ್ಕೆ ೧೧.೮.೨೦೨೬ರಂದು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮುದ್ದೇಬಿಹಾಳ ಹೋಬಳಿ ಹಾಗೂ ಢವಳಗಿ ವ್ಯಾಪ್ತಿಯ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದ್ದೇನೆ. ಜತೆಗೆ ಬರಗಾಲದ ಕುರಿತು ಮಾಹಿತಿ ಕಲೆ ಹಾಕಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ತಿಳಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಆದರೆ ತಾವು ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳನ್ವಯ ರಾಜ್ಯದ ವಿಪತ್ತು ಕೋಶದವರು ಕಾಲ ಕಾಲಕ್ಕೆ ಸ್ಯಾಟ್ಲೈಟ್ ಮೂಲಕ ಮಾಹಿತಿ ಪಡೆದು ಪ್ರತಿವಾರ ಮಳೆಯಾಧಾರಿತ ಮತ್ತು ಬೆಳೆಯಾಧಾರಿತ ಭೂಮಿಯ ತೇವಾಂಶವನ್ನು ಆಧರಿಸಿ ಘೋಷಿಸುತ್ತಾರೆ ಎಂಬುದು ನನಗೂ ಅರಿವಿದೆ. ಆದರೆ ಇವೆಲ್ಲ ನಿಯಮವನ್ನು ಬರಪಟ್ಟಿಯಲ್ಲಿ ಸೇರದಿರಲು ಕಾರಣವೇನು? ಆದರೆ ನೀವು ತಮ್ಮ ತಪ್ಪನ್ನು ಮರೆಮಾಚಲು ನಾನು ದೆಹಲಿಯಲ್ಲಿದ್ದೇನೆ ಎಂದು ಜನರಿಗೆ ಹಾಗೂ ರೈತರಿಗೆ ತಪ್ಪು ಸಂದೇಶ ನೀಡುತ್ತಿದ್ದಿರಿ ಎಂದು ಹೇಳಿದ್ದಾರೆ.