ತಾಳಿಕೋಟೆ, ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸಾರ್ವಜನಿಕರಿಗೆ ಶಾಸಕರನ್ನು ಸುಲಭವಾಗಿ ಸಂಪರ್ಕಿಸಲು ಅನುಕೂಲವಾಗುವ ಉದ್ದೇಶದಿಂದ ತಾಳಿಕೋಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಶಾಸಕರ ಸಂಪರ್ಕ ಕಚೇರಿಯನ್ನು ಮಂಗಳವಾರ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ಉದ್ಘಾಟಿಸಿದರು.
ಈ ಸಮಯದಲ್ಲಿ ಮಾತನಾಡಿದ ಅವರು ತಾಲೂಕಿನ ವಿವಿಧ ಗ್ರಾಮಗಳಿಂದ ತಮ್ಮ ಕೆಲಸ-ಕಾರ್ಯಗಳಿಗಾಗಿ ತಾಳಿಕೋಟೆಗೆ ಆಗಮಿಸುವ ಸಾರ್ವಜನಿಕರಿಗೆ ಈ ಸಂಪರ್ಕ ಕಚೇರಿ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಗ್ರಾಮಗಳಲ್ಲಿನ ರಸ್ತೆ, ಕುಡಿಯುವ ನೀರು, ವಿದ್ಯುತ್, ಮೂಲಸೌಕರ್ಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರಲು ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಈ ಕಚೇರಿ ಸಹಕಾರಿಯಾಗಲಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ತಿಳಿಸಿ, ಮನವಿಗಳನ್ನು ಸಲ್ಲಿಸಿ ಅಗತ್ಯ ಪರಿಹಾರ ಹಾಗೂ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಕಚೇರಿ ನೆರವಾಗಲಿದೆ. ತಾಲೂಕಿನ ಜನರು ತಮ್ಮ ಯಾವುದೇ ಸಮಸ್ಯೆ, ಅಹವಾಲು ಅಥವಾ ತೊಂದರೆಗಳಿದ್ದರೂ ಸಂಪರ್ಕ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕಚೇರಿಯಲ್ಲಿ ಪ್ರತಿನಿತ್ಯ ಸಿಬ್ಬಂದಿ ಹಾಗೂ ಕಾರ್ಯಕರ್ತರು ಕರ್ತವ್ಯ ನಿರ್ವಹಿಸಲಿದ್ದು, ಜನರಿಂದ ಬರುವ ಮನವಿ ಹಾಗೂ ಸಮಸ್ಯೆಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ತಾಲೂಕಿನ ಜನರು ಈ ಸಂಪರ್ಕ ಕಚೇರಿಯ ಸದುಪಯೋಗ ಪಡೆದುಕೊಂಡು ತಮ್ಮ ಸಮಸ್ಯೆಗಳನ್ನು ತಿಳಿಸುವಂತೆ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ಮನವಿ ಮಾಡಿದರು.
ನಂತರ ಕಚೇರಿಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಗೆ, ಸರಸ್ವತಿ ದೇವಿಗೆ ಮಹಾ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಪ್ರಭುಗೌಡ ಮದರಕಲ್ಲ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ, ಸೈಯದಶಕೀಲಹ್ಮದ ಖಾಜಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಹಿಬೂಬ ಚೋರಗಸ್ತಿ, ಎಂ.ಜಿ.ಪಾಟೀಲ, ಶ್ರೀಮತಿ ನೀಲಮ್ಮ ಪಾಟೀಲ, ಸಿದ್ದನಗೌಡ ಪಾಟೀಲ(ನಾವದಗಿ), ಬಿ.ಎನ್.ಹಿಪ್ಪರಗಿ, ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಎಂ.ಎಚ್.ಬಿಳಗಿ, ಪುರಸಭೆ ಮುಖ್ಯಾಧಿಕಾರಿ ಸುನೀಲ್ ಪಾಟೀಲ, ಗುತ್ತಿಗೆದಾರ ವಿಭೂತಿಮಠ, ಸಂಗನಗೌಡ ಅಸ್ಕಿ, ಮಹಿಬೂಬ ಕೇಂಭಾವಿ, ಮಂಜೂರ ಬೇಪಾರಿ, ಫಯಾಜ್ ಉತ್ನಾಳ, ಮೊದಲಾದವರು ಉಪಸ್ಥಿತರಿದ್ದರು.