ಮಹಾಲಿಂಗಪುರ, ಜೂ. ೨೫: ಶರೀರದ ಎಲ್ಲ ಅವಯವಗಳಲ್ಲಿ ಕಣ್ಣಿಗೆ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯವಿದ್ದು, ಅದರ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ವೆಂಕಟೇಶ (ಕನಕರೆಡ್ಡಿ) ಆಸ್ಪತ್ರೆ ಆವರಣದಲ್ಲಿ ಗುರುವಾರ ನಡೆದ ’ಐಸಿರಿ’ ನೇತ್ರ ಚಿಕಿತ್ಸಾಲಯದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
"ಶರೀರದ ಇತರ ಅವಯವಗಳಲ್ಲಿ ಏನಾದರೂ ತೊಂದರೆಯಾದರೆ ಅದನ್ನು ಸರಿಪಡಿಸಿಕೊಳ್ಳಬಹುದು. ಆದರೆ ಕಣ್ಣಿನ ದೃಷ್ಟಿ ಕಳೆದುಕೊಂಡರೆ ಇಡೀ ಜೀವನವೇ ಅಂಧಕಾರಮಯವಾಗುತ್ತದೆ. ಆದ್ದರಿಂದ ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಣ್ಣಿನ ತೊಂದರೆಗಳಿಂದ ಬಳಲುವವರಿಗೆ ಚಿಕಿತ್ಸೆ ನೀಡಿ ಹೊಸ ಬೆಳಕನ್ನು ನೀಡುವ ವೈದ್ಯರ ಸೇವೆ ಅತ್ಯಂತ ಶ್ರೇಷ್ಠವಾದುದು" ಎಂದು ಅವರು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಈವರೆಗೆ ನೇತ್ರ ಚಿಕಿತ್ಸೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿಗಾಗಿ ಸ್ಥಳೀಯರು ದೊಡ್ಡ ನಗರಗಳಿಗೆ ತೆರಳಬೇಕಾಗುತ್ತಿತ್ತು. ಈಗ ಮಹಾಲಿಂಗಪುರದಲ್ಲೇ ಆಧುನಿಕ ಸೌಲಭ್ಯಗಳೊಂದಿಗೆ ನೇತ್ರ ಚಿಕಿತ್ಸಾ ಕೇಂದ್ರ ಆರಂಭಗೊಂಡಿರುವುದು ಜನತೆಗೆ ಅನುಕೂಲಕರವಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನಿಶಾಂತ ಮಹಾಸ್ವಾಮಿಗಳು ಆಶೀರ್ವಚನ ನೀಡಿ, "ದೇವರು ನೀಡಿರುವ ಪ್ರತಿಯೊಂದು ಅಂಗವೂ ಅಮೂಲ್ಯ. ಅವುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಕಣ್ಣು ಎಂಬ ಜ್ಯೋತಿಯಿಂದಲೇ ನಾವು ಪ್ರಪಂಚದ ಸೌಂದರ್ಯವನ್ನು ಕಾಣುತ್ತೇವೆ. ಕಣ್ಣಿನ ದೃಷ್ಟಿಯನ್ನು ಮರಳಿ ನೀಡುವ ವೈದ್ಯರ ಸೇವೆ ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗಿದೆ" ಎಂದು ಹೇಳಿದರು.
ವೆಂಕಟೇಶ ಆಸ್ಪತ್ರೆಯ ಚೇರ್ಮನ್ ಡಾ. ಅಜೀತ್ ಕನಕರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, "ನಮ್ಮ ಪಾಲಕರ ಕನಸಿನಂತೆ ಆರೋಗ್ಯ ಸೇವೆಯ ಎಲ್ಲ ವಿಭಾಗಗಳನ್ನು ಮಹಾಲಿಂಗಪುರದಲ್ಲೇ ಲಭ್ಯವಾಗಿಸುವ ಉದ್ದೇಶದಿಂದ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಸ್ಥಳೀಯರಿಗೆ ದೂರದ ನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯುವ ಅನಿವಾರ್ಯತೆಯನ್ನು ತಪ್ಪಿಸಲು ’ಐಸಿರಿ’ ನೇತ್ರ ಚಿಕಿತ್ಸಾ ವಿಭಾಗವನ್ನು ಆರಂಭಿಸಲಾಗಿದೆ" ಎಂದು ತಿಳಿಸಿದರು.
ನೇತ್ರ ತಜ್ಞರಾದ ಡಾ. ಬಾಹುಬಲಿ ಎನ್. ಶೆಟ್ಟಿ, ಡಾ. ಧರೆಪ್ಪ ಚೌಗಲಾ ಹಾಗೂ ಡಾ. ಗಿರೀಶ ನರಗೊಂಡ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಜನತೆಗೆ ಗುಣಮಟ್ಟದ ನೇತ್ರ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಮಹಾಲಿಂಗೇಶ್ವರ ದೇವಸ್ಥಾನದ ರಾಜೇಂದ್ರ ಶ್ರೀಗಳು ಆಸ್ಪತ್ರೆಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ’ಐಸಿರಿ’ ನೇತ್ರ ಚಿಕಿತ್ಸಾಲಯವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಮಲ್ಲಪ್ಪ ಹುಕ್ಕೇರಿ, ವಿಶ್ವನಾಥ ಗುಂಡಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಅಜೀತ್ ಕನಕರೆಡ್ಡಿ ವಹಿಸಿದ್ದರು. ಶೈಲಾ ರವಿ ಕೋಕರಿ ಕಾರ್ಯಕ್ರಮ ನಿರೂಪಣೆ ನಡೆಸಿದರೆ, ವಿವೇಕ್ ಢಪಳಾಪೂರ ಸಹಕರಿಸಿದರು.
ಚಿತ್ರದಲ್ಲಿ: ಮಹಾಲಿಂಗಪುರದ ವೆಂಕಟೇಶ (ಕನಕರೆಡ್ಡಿ) ಆಸ್ಪತ್ರೆಯಲ್ಲಿ ಆರಂಭಗೊಂಡ ’ಐಸಿರಿ’ ನೇತ್ರ ಚಿಕಿತ್ಸಾಲಯವನ್ನು ಶಾಸಕ ಸಿದ್ದು ಸವದಿ ಹಾಗೂ ಗಣ್ಯರು ಉದ್ಘಾಟಿಸಿದ ಕ್ಷಣ.
