ಬೆಂಗಳೂರು, ಏಪ್ರಿಲ್ 12: ಕನ್ನಡಿಗರ ಮೇಲೆ ಮುನಿಸಿಕೊಂಡಿದ್ದ ವರುಣ ದೇವ ಈಗ ಒಂದಷ್ಟು ಕರುಣೆ ತೋರಿಸಿದ್ದು, ರಾಜ್ಯದಲ್ಲಿ ಬೇಸಿಗೆ ಬಿರು ಬಿಸಿಲಿನ ನಡುವೆ ಭಾರಿ ಮಳೆ ಶುರುವಾಗಿದೆ. ಉತ್ತರ ಕರ್ನಾಟಕದಲ್ಲಿ ಕೂಡ ಮಳೆ ಅಬ್ಬರಿಸಲು ಶುರು ಮಾಡಿದೆ. ಕೆಲ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಮಾರ್ಚ್ ಹಾಗೂ ಏಪ್ರಿಲ್ ಮೊದಲ ವಾರದವರೆಗೂ ಇನ್ನಿಲ್ಲದಂತೆ ತೀವ್ರ ತಾಪಮಾನ ಕಾಡಿತ್ತು. ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ 40 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚು ತಾಪಮಾನ ದಾಖಲಾಗಿತ್ತು.
ದೈನಂದಿನವಾಗಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಆದರೆ, ಕನಿಷ್ಠ ತಾಪಮಾನದಲ್ಲಿ ಇಳಿಕೆ ಆಗಿತ್ತು. ಇದರಿಂದ ಬೆಳಗ್ಗೆ 8ಗಂಟೆಯಿಂದ ಸಂಜೆ ವರೆಗೆ ಶಾಖದ ಅಲೆ ಬೀಸಿದರೆ, ರಾತ್ರಿ ಸೆಕೆಯ ವಾತಾವರಣ ಕಂಡು ಬರುತ್ತಿತ್ತು. ತಂಪು ವಾತಾವರಣವೇ ಇಲ್ಲದೇ ಹೈರಾಣಾಗಿದ್ದ ಜನರಿಗೆ ರಾಜ್ಯ ವಿವಿಧೆಡೆ ಮಳೆ ಸುರಿಯುವ ಮೂಲಕ ಕೂಲ್ ವಾತಾವರಣ ನಿರ್ಮಿಸಿದೆ.
ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿ ಕಲಬುರಗಿ ಭಾಗದಲ್ಲೂ ಭರ್ಜರಿ ಮಳೆ ಬಿದ್ದಿದೆ. ಇಂದು ಮತ್ತೆ ಕಲಬುರಗಿ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ಈ ಮೂಲಕ ಕನ್ನಡ ನಾಡಿನ ಜನತೆಗೆ ಭರ್ಜರಿ ಸುದ್ದಿ ಸಿಕ್ಕಿದೆ.
ಇನ್ನು ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಈ ವರ್ಷದಲ್ಲಿ ಮೊದಲ ಬಾರಿಗೆ ರಾಜ್ಯದ ಬಳ್ಳಾರಿ, ದಾವಣಗೆರೆ, ಗದಗ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
https://twitter.com/KarnatakaSNDMC/status/1778814452504141841?t=7804aGbS19BF6MiuMV__8A&s=19
ಈಗಿನ ಸ್ಥಿತಿ ನೋಡಿದರೆ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತಕ್ಷಣವೇ ಭರ್ಜರಿ ಮಳೆ ಬೀಳಬೇಕು. ಇಲ್ಲವಾದರೆ ನೀರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಹೀಗಿದ್ದಾಗ ಮಳೆಯ ಬಗ್ಗೆ ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿದೆ. ಇಂದು ಬೆಳಗ್ಗೆಯಿಂದಲೇ ಮಳೆ ಬರುವ ಸೂಚನೆ ಸಿಗುತ್ತಿದ್ದು, ಮೋಡಗಳು ಬೆಂಗಳೂರಿನ ಆಕಾಶದಲ್ಲಿ ಆವರಿಸಿವೆ.
ಹೀಗಾಗಿ ಏಪ್ರಿಲ್ 13 ಅಥವಾ ಏಪ್ರಿಲ್ 14ಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳುವ ನಿರೀಕ್ಷೆಗಳು ಈಗ ಮೂಡಿವೆ. ಅಕಸ್ಮಾತ್ ಬೆಂಗಳೂರಲ್ಲಿ ಭರ್ಜರಿ ಮಳೆ ಬೀಳದೆ ಇದ್ದರೆ ಸಮಸ್ಯೆಗೆ ಈಗ ಮತ್ತಷ್ಟು ಹೆಚ್ಚಾಗಲಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ಬೆಂ. ನಗರ, ಬೆಂ. ಗ್ರಾಮಾಂತರ, ರಾಮನಗರ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ ಜಿಲ್ಲೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಭಾರಿ ಬಿಸಿಲು ಇದೀಗ ಬೀಳುತ್ತಿದೆ. ಹೀಗಿದ್ದಾಗಲೇ ಮೆಲ್ಲಗೆ ಕರ್ನಾಟದಲ್ಲಿ ಕುಡ ಮಳೆಯ ಅಬ್ಬರ ಶುರುವಾಗಿರುವುದು ಒಂದಷ್ಟು ನೆಮ್ಮದಿ ತರುತ್ತಿದೆ.