ಹಸಿರು ಕ್ರಾಂತಿ ವರದಿ ವಿಜಯಪುರ
ಪೋಲಿಯೋ ಮಾರಣಾಂತಿಕ ಕಾಯಿಲೆಯಾಗಿದ್ದು, ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಈ ಕಾಯಿಲೆಗೆ ತುತ್ತಾಗುವುದರಿಂದ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋದಿಂದ ಮಕ್ಕಳನ್ನು ಕಾಪಾಡೋಣ ಎಂದು ಎಐಸಿಸಿ ಮಾಜಿ ಸದಸ್ಯೆ ಹಾಗೂ ಕಾಂಗ್ರೆಸ್ ಯುವ ನಾಯಕಿ ಶ್ರೀದೇವಿ ಉತ್ಲಾಸರ ಹೇಳಿದರು.
ಶಾಂತಿ ನಗರದ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ಲಿಸಿಕಾ ಕಾರ್ಯಕ್ರಮದಲ್ಲಿ ಪೋಲಿಯೋ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 1953 ರಲ್ಲಿ ಪೋಲಿಯೋ ಲಸಿಕೆ ಅಭಿವೃದ್ಧಿಪಡಿಸಿದ ನಂತರ ಪೋಲಿಯೊ ಪ್ರಕರಣಗಳು ಗಮನಾರ್ಹ ಇಳಿಕೆ ಕಂಡಿವೆ. ಕೆಲವು ದೇಶಗಳಲ್ಲಿ ಪೋಲಿಯೋ ಇನ್ನೂ ಜೀವಂತವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ಸರ್ಕಾರಗಳು ಅಗತ್ಯ ಎಚ್ಚರಿಕಾ ಕ್ರಮಗಳನ್ನು ವಹಿಸಿರುವುದರಿಂದ ಪೋಲಿಯೋ ಲಸಿಕಾ ಕಾರ್ಯಕ್ರಮಗಳು ಮುಂದುವರೆದಿವೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೇ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ವಿರುದ್ಧ ಹೋರಾಡಲು ಮಕ್ಕಳ ಆತ್ಮಬಲ ಹೆಚ್ಚಿಸೋಣ ಎಂದು ಮನವಿ ಮಾಡಿದರು.
ಡಾ.ಶ್ರೀಧರ ಓತಗೇರಿ ಮಾತನಾಡಿ, ನರಮಂಡಲದ ಮೇಲೆ ಪರಿಣಾಮ ಬೀರುವ ಪೋಲಿಯೋ ವೈರಸ್ ಸೋಂಕಿತ ವ್ಯಕ್ತಿಯ ಬೆನ್ನುಹುರಿ ಮತ್ತು ಮೆದುಳಿನ ಮೇಲೆ ದಾಳಿ ಮಾಡುವ ಪರಿಣಾಮ ಮಗುವಿನ ದೇಹದ ಕೆಲವು ಭಾಗಗಳನ್ನು ಚಲಿಸಲು ಸಾಧ್ಯವಾಗದ ಕಾರಣ ಪಾರ್ಶ್ವವಾಯು ಉಂಟಾಗುತ್ತದೆ. ಪೋಲಿಯೋ ವೈರಸ್ನಿಂದ ಸೋಂಕಿಗೆ ಒಳಗಾದ ಕೆಲವರು ಪಾರ್ಶ್ವವಾಯು (ಅಬಾರ್ಟಿವ್ ಪೋಲಯೋ) ಕ್ಕೆ ಕಾರಣವಾಗದ ಒಂದು ರೀತಿಯ ಪೋಲಿಯೋಗೆ ತುತ್ತಾಗುತ್ತಾರೆ. ಸಾಮಾನ್ಯವಾಗಿ ಇದು ಇತರ ವೈರಲ್ ರೋಗಗಳ ವಿಶಿಷ್ಟವಾದ ಸೌಮ್ಯ, ಜ್ವರ ತರಹದ ಚಿಹ್ನೆಗಳು ಮತ್ತು ರೋಗ ಲಕ್ಷಣಗಳನ್ನುಂಟು ಮಾಡುತ್ತದೆ ಎಂದು ವಿವರಿಸಿದರು.
ಈ ವೇಳೆ ಪಿಎಚ್ಸಿಒ ರತ್ನ ಪೂಜಾರ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ನಗರ ನಿವಾಸಿಗಳು ಉಪಸ್ಥಿತರಿದ್ದರು.
ಮಕ್ಕಳನ್ನು ಪೋಲಿಯೋ ಮುಕ್ತಗೊಳಿಸುವ ನಿಟ್ಟಿನಲ್ಲಿ ಪಾಲಕರು 5 ವರ್ಷದೊಳಗಿನ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸಬೇಕು. ಮಗುವಿನ ಮುಂದಿನ ಆರೋಗ್ಯಕರ ಭವಿಷ್ಯದ ದೃಷ್ಟಿಯಿಂದ ಪೋಲಿಯೋ ಹನಿ ಹಾಕಿಸುವುದು ಬಹಳಷ್ಟು ಅವಶ್ಯವಾಗಿದೆ.
-ಶ್ರೀದೇವಿ ಉತ್ಲಾಸರ, ಯುವ ನಾಯಕಿ.
