ಜಮಖಂಡಿ: ಆಲಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕುಂಚನೂರು ವಲಯ ಮಟ್ಟದ ಪ್ರೌಢಶಾಲೆಗಳ 17 ವರ್ಷದೊಳಗಿನ ವಯೋಮಾನದ ಕ್ರೀಡಾಕೂಟದಲ್ಲಿ ಕುಂಬಾರಹಳ್ಳ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಬಾಲಕಿಯರ ವಾಲಿಬಾಲ್ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.
ಅದೇ ರೀತಿ ತ್ರೋಬಾಲ್ ಸ್ಪರ್ಧೆಯಲ್ಲಿ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದೆ. ಬಾಲಕರ 100 ಮೀಟರ್ ಓಟದಲ್ಲಿ ಶಿವಾನಂದ ನಾಗನೂರ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರ 3000 ಮೀಟರ್ ಓಟದಲ್ಲಿ ಶಾಲೆಯ ವಿದ್ಯಾರ್ಥಿನಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ತಿಳಿಸಿದ್ದಾರೆ.
ವಾಲಿಬಾಲ್ ತಂಡದಲ್ಲಿ ಅಮೃತಾ ಸವದಿ (ನಾಯಕಿ), ಸ್ಫೂರ್ತಿ ನರಸನ್ನವರ, ಗಂಗಾ ಕಾಖಂಡಕಿ, ಕಲಾವತಿ ಪೂಜಾರಿ, ಶ್ರೇಯಾ ಗುಗ್ಗರಿ, ಸೃಷ್ಟಿ ಕೆಮ್ಮನವರ, ಭುವನೇಶ್ವರಿ ಪೂಜಾರಿ ಹಾಗೂ ಸೃಷ್ಟಿ ಮಟ್ಟಿ ಭಾಗವಹಿಸಿ ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಬಸಣ್ಣವರ, ದೈಹಿಕ ಶಿಕ್ಷಣ ಪರಿವೀಕ್ಷಕಿ ಪಂಚಾಕ್ಷರಿ ನಂದೇಶ, ದೈಹಿಕ ಶಿಕ್ಷಣ ಶಿಕ್ಷಕ ಬಾಹುಬಲಿ ಮುತ್ತೂರ, ತಂಡದ ವ್ಯವಸ್ಥಾಪಕ ಚಂದ್ರಕಾಂತ ಪೊಲೀಸ್, ಶಾರದಾ ಮಠ ಹಾಗೂ ಶಿಕ್ಷಕರಾದ ಸಂಗಮೇಶ ಉಟಗಿ, ಸವಿತಾ ಬೆನಕಟ್ಟಿ, ಆಶಿಫಾ ಭಾನು ಮೋಮಿನ, ಅಶೋಕ ಬಿರಾದಾರ ಪಾಟೀಲ, ಶಕುಂತಲಾ ಬಿರಾದಾರ ಸೇರಿದಂತೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.
ಅಲ್ಲದೆ, ಪಂಚಾಯತ್, ಪಿಕೆಪಿಎಸ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಊರಿನ ಹಿರಿಯರು ಮತ್ತು ಶಿಕ್ಷಣ ಪ್ರೇಮಿಗಳು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಮುಂದಿನ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ.