ಮಹಾಲಿಂಗಪುರ: ನಗರದ ಸ್ವಚ್ಛತೆ ಹಾಗೂ ಆರೋಗ್ಯ ಸಂರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಲಯನ್ಸ್ ಕ್ಲಬ್ ಆಫ್ ಮಹಾಲಿಂಗಪುರ ಟೌನ್, ಪುರಸಭೆಯ ಪೌರಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಮಾನವೀಯ ಸೇವೆಗೆ ಮಾದರಿಯಾಗಿದೆ.
ಶಿಬಿರದಲ್ಲಿ ೧೦೦ಕ್ಕೂ ಅಧಿಕ ಪೌರಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಲಾಯಿತು. ಸುಮಾರು ೫೦ ಜನರಿಗೆ ಇಸಿಜಿ ಪರೀಕ್ಷೆ ಮಾಡಲಾಗಿದ್ದು, ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆ ಹಾಗೂ ಚಿಕಿತ್ಸೆಯನ್ನು ನೀಡಿದರು.
ಆರೋಗ್ಯವೇ ನಿಜವಾದ ಸಂಪತ್ತು: ಡಾ. ವಿಶ್ವನಾಥ ಗುಂಡಾ
ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಡಾ. ವಿಶ್ವನಾಥ ಗುಂಡಾ ಮಾತನಾಡಿ, ಇಂದಿನ ಬದಲಾದ ಜೀವನಶೈಲಿಯಿಂದ ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚುತ್ತಿವೆ. ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮುನ್ನೆಚ್ಚರಿಕೆಯಾಗಿ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಪೌರಕಾರ್ಮಿಕರು ನಗರದ ಸ್ವಚ್ಛತೆಗಾಗಿ ನಿರಂತರವಾಗಿ ದುಡಿಯುತ್ತಿದ್ದು, ಅವರ ಆರೋಗ್ಯದ ಕಾಳಜಿ ವಹಿಸುವುದು ನಮ್ಮ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಪೌರಕಾರ್ಮಿಕರ ಸೇವೆ ಶ್ಲಾಘನೀಯ: ನಾಮದೇವ ಲಮಾಣಿ
ಪುರಸಭೆಯ ಮುಖ್ಯಾಧಿಕಾರಿ ನಾಮದೇವ ಲಮಾಣಿ ಮಾತನಾಡಿ, ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು. ಪ್ರತಿದಿನ ಸಾರ್ವಜನಿಕರ ಆರೋಗ್ಯಕ್ಕಾಗಿ ದುಡಿಯುವ ಅವರ ಆರೋಗ್ಯದ ಬಗ್ಗೆಯೂ ಸಮಾಜ ಕಾಳಜಿ ವಹಿಸಬೇಕು. ಲಯನ್ಸ್ ಕ್ಲಬ್ ವತಿಯಿಂದ ಪೌರಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಸೇವಾ ಕಾರ್ಯವಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ಲಯನ್ ಡಾ. ಮಾರುತಿ ಮೇದಾರ, ಡಾ. ಅಶೋಕ್ ದಿನ್ನಿಮನಿ, ಡಾ. ರಮೇಶ್ ಪತ್ತಾರ, ಡಾ. ವೆಂಕಟೇಶ್ ಬುರುಡ, ಡಾ. ವಿಶ್ವನಾಥ ಗುಂಡಾ, ಡಾ. ಉಮಾ ಗುಂಡಾ, ಡಾ. ವಿದ್ಯಾ ದಿನ್ನಿಮನಿ, ಡಾ. ಸುರೇಖಾ ಚನ್ನಾಳ, ಡಾ. ಅನುಪ್ ಹಂಚಿನಾಳ ಹಾಗೂ ಡಾ. ಅಪೂರ್ವ ಹಂಚಿನಾಳ ಅವರು ಭಾಗವಹಿಸಿ ಆರೋಗ್ಯ ತಪಾಸಣೆ ಹಾಗೂ ಸಲಹೆ ನೀಡಿದರು.
ಲಯನ್ ಅರ್ಚನಾ ಕಡಪಟ್ಟಿ ಪ್ರಾರ್ಥನಾ ಗೀತೆ ಹಾಡಿದರು. ಡಾ. ವಿದ್ಯಾ ದಿನ್ನಿಮನಿ ವಂದನಾರ್ಪಣೆ ಸಲ್ಲಿಸಿದರು. ಲಯನ್ ಶ್ರೀಶೈಲ ಕೋಳಿಗುಡ್ಡ ಅವರು ತಮ್ಮ ಧರ್ಮಪತ್ನಿ ಲಯನ್ ಅಶ್ವಿನಿ ಕೋಳಿಗುಡ್ಡ ಅವರ ಜನ್ಮದಿನದ ಅಂಗವಾಗಿ ಶಿಬಿರಕ್ಕೆ ಪ್ರಾಯೋಜಕತ್ವ ವಹಿಸಿದ್ದರು.
ಲಯನ್ ಸೋಮಶೇಖರ ಸಂಶಿ, ಲಯನ್ ರಾಮು ಕೆಳಗಡೆ, ಲಯನ್ ವಿ?ಗೌಡ ಪಾಟೀಲ, ಲಯನ್ ಉಮೇಶ್ ಸಿದ್ನಾಳ, ಲಯನ್ ರಾಜು ಮುಗಳಖೋಡ, ಲಯನ್ ಉಮೇಶ್ ಬೆನವಡೆ, ಲಯನ್ ಸತೀಶ ಅಂದೆನ್ನವರ, ಲಯನ್ ಸಂಜೀವ ಶಿರೋಳ, ಖಜಾಂಚಿ ಲಯನ್ ವಿದ್ಯಾ ಶಿರೋಳ, ಲಯನ್ ಪರಿಣಿತಾ ಹಾಗೂ ಲಯನ್ ಸಚಿನ್ ಗುಂಡಾ ಸೇರಿದಂತೆ ಲಯನ್ಸ್ ಕ್ಲಬ್ ಸದಸ್ಯರು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಪೌರಕಾರ್ಮಿಕರ ಆರೋಗ್ಯದ ಕಾಳಜಿಯೊಂದಿಗೆ ನಡೆದ ಈ ಸೇವಾ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.