ಜಮಖಂಡಿ; ಕಳೆದ 63 ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವ ಸ್ಥಾನ ನಿರ್ಮಿಸಬೇಕು, ಎಂ.ಬಿ.ಪಾಟೀಲ, ಎಚ್.ಕೆ. ಪಾಟೀಲ, ಅಥವಾ ಜೆ,ಟಿ,ಪಾಟೀಲ ಯಾರಾದರೂ ಒಬ್ಬ ಉತ್ತರ ಕರ್ನಾಟಕದ ನಾಯಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಈ ಭಾಗದ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆಗ್ರಹಿಸಿದರು. ನಗರದ ರಮಾನಿವಾಸ ನಿರೀಕ್ಷಣ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ತಜ್ಞ ಕೃಷ್ಣ ಕೊಲ್ಲಾರ ಕುಲಕರ್ಣಿ ಅವರ ಸಲಹೆಯಂತೆ ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂಧಿಸಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಶುಕ್ರವಾರ ಜಿಲ್ಲೆಯ ಬರಗಾಲ ಪರಿಸ್ಥಿತಿ ಅಧ್ಯಯನಕ್ಕೆಂದು ಬಾಗಲಕೊಟೆಗೆ ಆಗಮಿಸಲಿದ್ದಾರೆ, ಈ ಸಂರ್ಭದಲ್ಲಿ ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಯ ಕುರಿತು ಸೂಕ್ತ ನಿರ್ಧಾರ ಪ್ರಕಟಿಸಬೇಕು, ಕೂಡಲೇ 10 ಸಾವಿರ ಕೋಟಿರೂಗಳ ಅನುದಾನ ಬಿಡುಗಡೆ ಗೊಳಿಸುವ ಮೂಲಕ ಯುಕೆಪಿ ಸಂತ್ರಸ್ಥರಿಗೆ ಪರಿಹಾರ ನೀಡುವ ಕೆಲಸಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪರಿಹಾರದಲ್ಲಿ ತಾರತಮ್ಯ; ಬಿಡದಿಯ ಟೌನ್ಸಿಪ್ ನಿರ್ಮಾಣಕ್ಕೆ ಎಕರೆಗೆ 3 ಕೋಟಿ ನೀಡಲು ಮುಂದಾಗಿರುವ ಸರ್ಕಾರ ಉತ್ತರ ಕರ್ನಾಟಕದ ರೈತರಿಗೆ 40 ಲಕ್ಷ ನೀರಾವರಿ ಜಮೀನುಗಳಿಗೆ ಹಾಗೂ ಒಣ ಬೇಸಾಯಕ್ಕೆ ಪ್ರತಿ ಎಕರೆಗೆ 30 ಲಕ್ಷ ನೀಡಲು ಹಿಂದೇಟು ಹಾಕುತ್ತಿದೆ. ಸರ್ಕಾರಕ್ಕೆ ಅಂಗಲಾಚುತ್ತಿರುವ ಸಂತ್ರಸ್ಥ ರೈತರ ಧ್ವನಿ ತಲುಪುತ್ತಿಲ್ಲ. ಬಿಡದಿ ಹಾಗೂ ಕೃಷ್ಣಾ ತೀರದ ಜಮೀನು ಎರಡೂ ಒಂದೇ ಆಗಿದ್ದರೂ ಇಲ್ಲಿಯ ರೈತರ ಕಣ್ಣಿಗೆ ಸುಣ್ಣ ಒರೆಸಲಾಗುತ್ತಿದೆ ಎಂದು ದೂರಿದರು. ಸಿದ್ಧರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಬಳ್ಳಾರಿ ಯಿಂದ ಕೂಡಲಸಂಗಮದ ವರೆಗಿನ ಪಾದಯಾತ್ರೆಯಲ್ಲಿ 48 ಸಾವಿರ ಕೋಟಿ ರೂಗಳ ವಿಶೇಷ ಅನುದಾನ ಘೋಷಣೆ ಮಾಡಿದ್ದರು ಅದು ಬಿಡುಗಡೆ ಆಗಿಲ್ಲ. ಯುಕೆಪಿಯ ಪರಿಹಾರಕ್ಕೆ ಮೀಸಲಾಗಿರುವ 3 ಸಾವಿರ ಕೋಟಿ ಕರ್ಚು ಮಾಡುತ್ತಿಲ್ಲ. ಸರ್ವೆ ಕಾರ್ಯ ನಡೆದಿಲ್ಲ, ನ್ಯಾಯಾಲಯ ಮೆಟ್ಟಿಲೇರಿದ ಕೆಲ ರೈತರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ ಎಂದು ವಿವರಿಸಿದರು.
ಛಲಗಾರ; ಪಟ್ಟು ಸಡಿಲಿಸದ ಛಲಗಾರ ಖ್ಯಾತಿಯ ಸಿಎಂ ಡಿ,ಕೆ,ಶಿವಕುಮಾರ ಅವರು ಉತ್ತರ ಕರ್ನಾಟಕದ ರೈತರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು, ಯುಕೆಪಿಗೆ ಪ್ರತ್ಯೇಕ ಸಚಿವಸ್ಥಾನ, 10 ಸಾವಿರ ಕೋಟಿ ವಿಶೇಷ ಅನುದಾನ ಬಿಡುಗಡೆ, ತಕ್ಷಣ ಜಮೀನುಗಳಿಗೆ ಸರ್ವೇಗೆ ಆದೇಶ, ಸೇರಿದಂತೆ ಸಮಗ್ರ ಯೋಜನೆಯ ತನಿಖೆ ನಡೆಸಿ ತಮಗಿರುವ 1.5 ವರ್ಷದ ಅಧಿಕಾರದ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು,
ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ ಮಾತನಾಡಿ ಶುಕ್ರವಾರ ಬಾಗಲಕೊಟೆಗೆ ರೈತರ ನಿಯೋಗ ದೊಂದಿಗೆ ಮುಖ್ಯ ಮಂತ್ರಿಗಳ ಭೇಟಿ ಮಾಡಿ ಮನವಿ ಸಲ್ಲಿಸುವರಿದ್ದೇವೆ, ಪಕ್ಷಾತೀತವಾಗಿ ಎಲ್ಲ ಮುಖಂಡರು, ಚುನಾಯಿತ ಪ್ರತಿನಿಧಿಗಳು ಸಾಥ ನೀಡ ಬೇಕು ಎಂದು ಮನವಿ ಮಾಡಿದರು,ಯುಕೆಪಿ ಯೋಜನೆ ಆಮೆಗತಿಯಲ್ಲಿ ಸಾಗಿದೆ. ತಾಲುಕು ಪ್ರದೇಶದಲ್ಲಿ ಒಂದು ಗುಂಟೆ ಜಾಗಕ್ಕೆ 40 ಲಕ್ಷ ರೂ ದರ ನಿಗದಿ ಯಾಗಿರುವ ಸಂದರ್ಭದಲ್ಲಿ ಸರ್ಕಾರ ಎಚ್ಚೆತ್ತು ಕೊಂಡು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು, ಮುಖಂಡರಾದ ಸಿ,ಟಿ, ಉಪಾಧ್ಯಾಯ ಮಾತನಾಡಿ ಯುಕೆಪಿ ಬಗ್ಗೆ ಜಿಓ ಆಗಿಲ್ಲ, ನಿಖರವಾದ ನಿರ್ಧಾರ ಪ್ರಕಟವಾಗಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ, ಜನಾಂದೋಲನ ಇಲ್ಲದ ಕಾರಣ ಯುಕೆಪಿ ನೆನಗುದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು, ಯೋಜನೆಯ ಲಾಭ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ತಲುಪಲಿದ್ದು 25 ಲಕ್ಷ ಎಕರೆಗೂ ಹೆಚ್ಚು ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು. ಸುರೇಶಗೌಡ ಪಾಟೀಲ, ಬಾಲು ನಾಗೋಡ ಇದ್ದರು.