ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೆ ಮುನ್ನಾ ದಿನವಾದ ಸೋಮವಾರ (ಜುಲೈ 22) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿದ್ದು, ಭಾರತದ ಆರ್ಥಿಕತೆಯು ಸಕಾರಾತ್ಮಕ ಏಳಿಗೆ ಹೊಂದುತ್ತಿದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ. ಭಾರತದ ಆರ್ಥಿಕತೆ, ವಿದೇಶಿ ನೇರ ಬಂಡವಾಳ ಹೂಡಿಕೆ, ಹಣದುಬ್ಬರ, ಉದ್ಯೋಗ ಸೇರಿ ಹಲವು ವಿಷಯಗಳನ್ನು ಆರ್ಥಿಕ ಸಮೀಕ್ಷೆಯು ಒಳಗೊಂಡಿದೆ
ಪ್ರಸಕ್ತ ಸಾಲಿನಲ್ಲಿ ಉತ್ತಮ ಮುಂಗಾರು, ನೀತಿ-ನಿರೂಪಣೆಗಳ ಬದಲಾವಣೆ ಇಲ್ಲದ ಕಾರಣ 2024-25ನೇ ಹಣಕಾಸು ವರ್ಷದಲ್ಲಿ ದೇಶದ ಹಣದುಬ್ಬರ ಪ್ರಮಾಣವು ಶೇ.4.5ರಿಂದ ಶೇ.4.1ಕ್ಕೆ ಇಳಿಕೆಯಾಗಲಿದೆ ಎಂಬುದಾಗಿ ಆರ್ಬಿಐ ಉಲ್ಲೇಖಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ವರದಿ ಕೂಡ ಹಣದುಬ್ಬರವು ಶೇ.4.2ಕ್ಕೆ ಇಳಿಯಲಿದೆ ಎಂಬುದಾಗಿ ತಿಳಿಸಿದೆ. ಇದರಿಂದಾಗಿ ದೇಶದ ಜನರ ಮೇಲಿನ ಹೊರೆ ಕಡಿಮೆಯಾಗಲಿದೆ.
ಕೊರೊನಾ ಬಿಕ್ಕಟ್ಟಿನ ನಂತರ ಭಾರತದ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಇದರಿಂದಾಗಿ ದೇಶದ ವಿತ್ತೀಯ ವ್ಯವಸ್ಥೆಯಲ್ಲಿ ಗಣನೀಯವಾಗಿ ಚೇತರಿಕೆ ಕಂಡಿದೆ. ಹಾಗಾಗಿ, 2024-25ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯು ಶೇ.6.5ರಿಂದ ಶೇ.7ಕ್ಕೆ ಏರಿಕೆಯಾಗುವ ಅಂದಾಜಿದೆ.
ಜಾಗತಿಕ ರಾಜಕೀಯ ಬಿಕ್ಕಟ್ಟು, ಆಕ್ರಮಣಗಳ ಹಿನ್ನೆಲೆಯಲ್ಲಿ ವಿದೇಶಿ ವ್ಯಾಪಾರ ಪ್ರಮಾಣವೂ ಇಳಿಕೆ ಕಂಡಿದೆ. 2023ನೇ ಸಾಲಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024ನೇ ಸಾಲಿನಲ್ಲಿ ವ್ಯಾಪಾರದ ಕೊರತೆಯು ಶೇ.0.07ರಷ್ಟಿದೆ.