ಹಸಿರು ಕ್ರಾಂತಿ ವರದಿ ವಿಜಯಪುರ
ಶೈಕ್ಷಣಿಕ ಸಾಧನೆಯಲ್ಲಿ ಪ್ರಾಂಶಪಾಲರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳ, ಪ್ರಾಧ್ಯಾಪಕರ, ಆಡಳಿತ ಸಿಬ್ಬಂದಿಯವರ ನಡುವಿನ ಕೊಂಡಿಯಾಗಿ ಮಹತ್ವದ ಕೆಲಸ ಮಾಡುವವರೇ ಪ್ರಾಂಶುಪಾಲರು ಎಂದು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಕನ್ನಡಿಗ-2024ರ ಪ್ರಶಸ್ತಿ ಪುರಸ್ಕೃತ ಹಾಗೂ ದೈಹಿಕ ಶಿಕ್ಷಣ ನಿವೃತ್ತ ನಿರ್ದೇಶಕ ಡಾ.ಅಶೋಕಕುಮಾರ ರಾ.ಜಾಧವ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜೀನ ನಿವೃತ್ತ ಪ್ರಾಂಶುಪಾಲ ಡಾ.ಆರ್.ಎಸ್.ಕಲ್ಲೂರಮಠ ನಿವೃತ್ತರಾದ ಹಿನ್ನೆಲೆಯಲ್ಲಿ ಗುರುಪಾದೇಶ್ವರ ನಗರದ ಜಗದ್ಗುರು ತೋಂಟದಾರ್ಯ ಕಲ್ಯಾಣಮಂಟಪದಲ್ಲಿ ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಳಗ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕಲ್ಲೂರಮಠ ಅಭಿಮಾನ ಬಳಗ ವತಿಯಿಂದ ಡಾ.ಆರ್.ಎಸ್.ಕಲ್ಲೂರಮಠ ಅವರಿಗೆ ನಡೆದ ಗೌರವ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ವೃತ್ತಿಯಿಂದ ನಿವೃತ್ತಿಯಾಗುವುದು ಸರ್ವೇ ಸಾಮಾನ್ಯ. ಆದರೆ, ತಮ್ಮ ಸೇವಾ ಅವಧಿಯಲ್ಲಿ ಮಾಡಿರುವ ಕೆಲಸ, ಕಾರ್ಯಗಳು, ಸಹದ್ಯೋಗಿಗಳೊಂದಿಗಿನ ಬಾಂಧವ್ಯ ಹಾಗೂ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುವುದು ಮಾತ್ರ ಯಾವುದೇ ಕಾರಣಕ್ಕೂ ನಿವೃತ್ತಿಯಾಗುವುದೇ ಇಲ್ಲ ಎನ್ನುವುದಕ್ಕೆ ಡಾ.ಆರ್.ಎಸ್.ಕಲ್ಲೂರಮಠರವರು ಗಳಿಸಿರುವ ಪ್ರೀತಿ, ಗೌರವವೇ ಸಾಕ್ಷಿ ಎಂದು ಬಣ್ಣಿಸಿದರು.
ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ಸುಧಾರಣೆ ಮಾಡುವ ಜೊತೆಗೆ ಉಪನ್ಯಾಸಕರೊಂದಿಗೆ ಉತ್ತಮ ಕಾರ್ಯಯೋಜನೆ ರೂಪಿಸಿ ಉತ್ತಮ ಫಲಿತಾಂಶ ರೂಪಿಸುವ ದಿಕ್ಕಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗೆಯೇ ಆಡಳಿತಾತ್ಮಕ ಕೆಲಸ ನಿರ್ವಹಿಸಬೇಕಾಗುತ್ತದೆ. ಅಂತಹ ಕ್ರೀಯಾತ್ಮಕ ಕಾರ್ಯಗಳನ್ನು ಮಾಡಿರುವ ಮೂಲಕ ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಜನ, ಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತೆ ಕೆಲಸ ಮಾಡಿರುವವರು ಡಾ.ಆರ್.ಎಸ್.ಕಲ್ಲೂರಮಠರವರು. ಅವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜೀನ ನಿವೃತ್ತ ಪ್ರಾಂಶುಪಾಲ ಡಾ.ಆರ್.ಎಸ್.ಕಲ್ಲೂರಮಠ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಕಾಲದಲ್ಲಿ ಸರ್ಕಾರಿ ಕೆಲಸ ದೇವರ ಕೆಲಸವೆಂಬವುದು ತುಂಬಾ ಶೃದ್ಧೆ ಹಾಗೂ ಭಕ್ತಿಯ ಸಂಕೇತವಾಗಿತ್ತು. ಏಕೆಂದರೇ ಸರ್ಕಾರಿ ಕೆಲಸ ಸಿಗುವುದು ಕಷ್ಟ ಹಾಗೂ ಅಷ್ಟೇ ಗೌರವ ಹುದ್ದೆಯಾಗಿತ್ತು. ಸುಮಾರು 36 ವರ್ಷದ ಸೇವೆಯು ನನಗೆ ತೃಪ್ತಿ ತಂದಿದ್ದು ಹಾಗೂ ನಿವೃತ್ತಿ ಹೊಂದಿರುವುದು ತುಂಬಾ ಖುಷಿಯಾಗಿದೆ. ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಅವಕಾಶ ನೀಡಿದ್ದ ಕಾಲೇಜು ಶಿಕ್ಷಣ ಇಲಾಖೆಗೆ ಹಾಗೂ ನನ್ನ ಸಹದ್ಯೋಗಿಗಳಿಗೆ, ಆತ್ಮೀಯ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ನಾಗಠಾಣದ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರರು ಸಾನ್ನಿಧ್ಯ ವಹಿಸಿದ್ದರು. ಡಾ.ಆರ್.ಎಸ್.ಕಲ್ಲೂರಮಠ ದಂಪತಿಗೆ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಪ್ರೌಢಶಾಲೆಯ ನಿವೃತ್ತ ಪ್ರಾಚಾರ್ಯ ಪ್ರಭುದೇವ ಕಲ್ಲೂರಮಠ, ನಗರಸಭೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿದ್ದಣ್ಣ ಬೀಡಗೊಡ, ಬೀದರಿನ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ರಾಜಕುಮಾರ ಮೋಚಿ, ಮನಗೂಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಆರ್.ಜೋಶಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಕಣಕಾಲಮಠ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಿವೃತ್ತ ಪ್ರಾಂಶುಪಾಲ ಡಾ.ಎಂ.ಪಿ.ನಾಯಕ, ಪ್ರೊ.ಎಸ್.ಕೆ.ಬಾಗಿ, ಅಶೋಕ ಮುದಕಣ್ಣವರ, ಅಶೋಕ ಹೆಗಡೆ, ಪ್ರಾಂಶುಪಾಲ ಡಾ.ಎ.ಐ.ಹಂಜಗಿ, ಡಾ.ಎಂ.ಆರ್.ಹೂಗಾರ, ಡಾ.ಚಂದ್ರಕಾಂತ, ಡಾ.ಎಸ್.ಎನ್.ಬಜಂತ್ರಿ, ಡಾ.ಆನಂದ ಎಸ್.ಕುಲಕರ್ಣಿ, ಪ್ರೊ.ಬಿ.ಜಿ.ಪತ್ತಾರ, ಡಾ.ಜಹೀದ್ ಮಕಾನದಾರ, ಡಾ.ಎಂ.ಆರ್.ಕೆಂಭಾವಿ, ಡಾ.ವಿವೇಕಾನಂದ ಉಘಡೆ, ಡಾ.ಸಂತೋಷ ಕಬಾಡೆ ಅಲ್ಲದೇ ಬೇರೆ ಬೇರೆಯ ಜಿಲ್ಲೆಗಳ ಪ್ರಾಧ್ಯಾಪಕರು ಮತ್ತು ಡಾ.ಕಲ್ಲೂರಮಠ ಅಭಿಮಾನಿಗಳು, ಕುಟುಂಬಸ್ಥರು ಉಪಸ್ಥಿತರಿದ್ದರು.
ವಿಶ್ರಾಂತ ಪ್ರಾಂಶುಪಾಲ ಡಾ.ಆರ್.ಎಸ್.ಕಲ್ಲೂರಮಠ ವಂದಿಸಿದರು. ಕ್ರೀಡಾಧಿಕಾರಿ ಡಾ.ರಾಜಶೇಖರ ಬೆನಕನಹಳ್ಳಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಲಕ್ಷ್ಮೀ ಮೊರೆ ನಿರೂಪಿಸಿದರು.
