ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ''ಇದು ಜನವಿರೋಧಿ ಬಜೆಟ್. ಯಾರಿಗೂ ನ್ಯಾಯ ಸಿಕ್ಕಿಲ್ಲ. ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡಿದ್ದಾರೆ, ಆದರೆ ವಿಶೇಷ ಸ್ಥಾನಮಾನ ನೀಡಿಲ್ಲ. ಇದೊಂದು ಮೋಸದ ಬಜೆಟ್. ಇದರಿಂದ ಜನತೆಗೆ ಅನ್ಯಾಯವಾಗಿದೆ'' ಎಂದು ದೂರಿದರು. ಇದೇ ವೇಳೆ, ಇತರ ಸಂಸದರು 'ನಮಗೆ ಭಾರತದ ಬಜೆಟ್ ಬೇಕು. ಎನ್ಡಿಎ ಬಜೆಟ್ ಅಲ್ಲ. ಬಜೆಟ್ನಲ್ಲಿ ಎನ್ಡಿಎಯು ಭಾರತಕ್ಕೆ ದ್ರೋಹ ಬಗೆದಿದೆ' ಎಂಬ ಭಿತ್ತಿಫಲಕಗಳ ಹಿಡಿದು ಘೋಷಣೆ ಕೂಗಿದರು.
ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ, ಸಂಸದ ಕೆ. ಸಿ. ವೇಣುಗೋಪಾಲ್, ''ನಿನ್ನೆಯ ಬಜೆಟ್ ಮೂಲಕ ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಎಲ್ಲ ತತ್ವಗಳನ್ನು ಉಲ್ಲಂಘಿಸಿದೆ. ಸರ್ಕಾರವನ್ನು ರಕ್ಷಿಸಿಕೊಳ್ಳುವುದೇ ಈ ಬಜೆಟ್ನ ಉದ್ದೇಶವಾಗಿದೆ. ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಹಣ ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಕೇವಲ ಎರಡು ರಾಜ್ಯಗಳಿಗೆ ಇಷ್ಟು ಸೊಪ್ಪು ಹಾಕಿರುವುದು ಸರಿಯಲ್ಲ. ಇತರ ರಾಜ್ಯಗಳಿಗೂ ನ್ಯಾಯ ಸಿಗಬೇಕು. ಅದಕ್ಕಾಗಿಯೇ ನಾವು ಆಂದೋಲನ ನಡೆಸುತ್ತಿದ್ದೇವೆ. ಬಜೆಟ್ ಬಗ್ಗೆ ಜನ ಕೂಡ ರೊಚ್ಚಿಗೆದ್ದಿದ್ದಾರೆ'' ಎಂದರು.
ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ''ಬಜೆಟ್ನಲ್ಲಿ ಯುವಕರಿಗೆ ಕೇವಲ ಸುಳ್ಳು ಭರವಸೆಗಳನ್ನು ನೀಡಲಾಗಿದೆ'' ಎಂದು ವಾಗ್ದಾಳಿ ನಡೆಸಿದರು. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ''ನಮ್ಮ ರಾಜ್ಯ ಉತ್ತರ ಪ್ರದೇಶಕ್ಕೆ ತಾರತಮ್ಯ ಮಾಡಲಾಗಿದೆ. ಅಲ್ಲದೇ, ಯುವಕರ ಉದ್ಯೋಗಗಳನ್ನು ಕಿತ್ತುಕೊಂಡು, ಈಗ ಅವರಿಗೆ ಶಿಷ್ಯವೇತನ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ'' ಎಂದು ಟೀಕಿಸಿದರು.