ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಅವರ ವಿರುದ್ಧ ಕೇಳಿಬಂದಿರುವ ಆಸ್ತಿ ಹಾಗೂ ಆದಾಯ ಕುರಿತ ಆರೋಪಗಳ ಹಿನ್ನೆಲೆಯಲ್ಲಿ, ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಗರದ ರಹವಾಸಿಗಳು ಬುಧವಾರ ಕನ್ನಡ ಸಾಹಿತ್ಯ ಭವನದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ಸಾಮಾಜಿಕ ಹೋರಾಟಗಾರ ರಾಜಕುಮಾರ ಟೊಪ್ಪಣ್ಣವರ, ಶಾಸಕ ಅಭಯ್ ಪಾಟೀಲ ಅವರ ವಿರುದ್ಧ ರೈತರ ಭೂಮಿ ಕಬಳಿಕೆ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ಡಿ.ಎ. ಪ್ರಕರಣವೂ ದಾಖಲಾಗಿದೆ ಎಂದು ಆರೋಪಿಸಿದರು. ಇಂತಹ ಆರೋಪಗಳನ್ನು ಎದುರಿಸುತ್ತಿರುವ ಅವರು ಇತರರ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ನೈತಿಕ ಹಕ್ಕು ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಮೊದಲು ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
2012ರಿಂದಲೂ ಶಾಸಕ ಅಭಯ್ ಪಾಟೀಲ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ ಎಂದು ಆರೋಪಿಸಿದ ಅವರು, ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸುವ ಮೊದಲು ತಮ್ಮ ಪಕ್ಷದ ಶಾಸಕ ಅಭಯ್ ಪಾಟೀಲ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಹೋರಾಟಗಾರ ಸುಜೀತ್ ಮುಳಗುಂದ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಅಕ್ರಮ ಆಸ್ತಿ, ಭೂಮಿ ಕಬಳಿಕೆ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ನ್ಯಾಯಾಲಯದಲ್ಲಿ ಪ್ರಕರಣಗಳಿವೆ ಎಂದು ಆರೋಪಿಸಿದರು. ಬಿಜೆಪಿಗರು ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸುವ ಮುನ್ನ, ಶಾಸಕ ಅಭಯ್ ಪಾಟೀಲ ಅವರ ರಾಜೀನಾಮೆ ಪಡೆಯಬೇಕು. ಬಳಿಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರು.
ಅಲ್ಲದೆ, ಶಾಸಕ ಅಭಯ್ ಪಾಟೀಲ ಅವರನ್ನು ಬಿಜೆಪಿ ಪಕ್ಷದಿಂದ ಹೊರಹಾಕಬೇಕು ಎಂದು ಆಗ್ರಹಿಸಿದ ಅವರು, ಶೀಘ್ರದಲ್ಲೇ ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದಲೇ ಪಾದಯಾತ್ರೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವಾಗ ಎಲ್ಲರಿಗೂ ಒಂದೇ ಮಾನದಂಡ ಅನ್ವಯಿಸಬೇಕು. ಯಾವುದೇ ವ್ಯಕ್ತಿ ಅಥವಾ ಪಕ್ಷದ ಪರ-ವಿರೋಧ ಎಂಬ ಭೇದವಿಲ್ಲದೆ ಆರೋಪಗಳ ಕುರಿತು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ರಾಜಕುಮಾರ ಟೊಪ್ಪಣ್ಣವರ ಹಾಗೂ ಸುಜೀತ್ ಮುಳಗುಂದ ಆಗ್ರಹಿಸಿದರು.
ಇತರರ ಭ್ರಷ್ಟಾಚಾರದ ವಿರುದ್ಧ ಶಾಸಕ ಅಭಯ್ ಪಾಟೀಲ ಅವರು ಮಾತನಾಡುವುದು ಹಾಸ್ಯಾಸ್ಪದ. ಮೊದಲು ತಮ್ಮ ವಿರುದ್ಧದ ಆರೋಪಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಳಿಕ ಬೇರೆ ಪಕ್ಷದವರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸಲಿ ಎಂದು ಪ್ರತಿಭಟನಾಕಾರರು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಅನಿಲ್ ಉಪರಿ, ಯುವರಾಜ ತಳವಾರ, ಸದ್ದಾಂ ತಹಶಿಲ್ದಾರ, ಅಮಿತ್ ರಜಪೂತ್, ಸಿದ್ಧಾರ್ಥ ಚೌಹಾನ್, ಸಚಿನ್ ತಳವಾರ, ಸಲೀಂ ಸನದಿ, ಆನಂದ ಪೂಜಾರಿ, ಬಲರಾಮ ಸಂಗೋಳಿ, ಆಸೀಫ್ ಮುಲ್ಲಾ, ಆಶೀಷ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.