ತಾಳಿಕೋಟೆ, ವಿಜಯಪುರ ಜಿಲ್ಲೆಯ ೧೩ ತಾಲ್ಲೂಕುಗಳ ಪೈಕಿ ೧೦ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ತಾಳಿಕೋಟೆ, ಇಂಡಿ ಹಾಗೂ ಚಡಚಣ ತಾಲ್ಲೂಕುಗಳನ್ನು ಕೈಬಿಟ್ಟಿರುವ ಸರ್ಕಾರವು ರೈತರಿಗೆ ಅನ್ಯಾಯವೆಸಗಲು ಹೋರಟಿದೆ ಎಂದು ರೈತ ಮುಖಂಡರು ಹಾಗೂ ಬಿಜೆಪಿ ಮಾಜಿ ಜಿಲ್ಲಾಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.
ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಳಿಕೋಟೆ ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ೧೫ ದಿನದಂದು ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತ ಸಂಘಟನೆಗಳ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲೆಯ ೧೩ ತಾಲ್ಲೂಕುಗಳ ಪೈಕಿ ೧೦ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ತಾಳಿಕೋಟೆ ಸೇರಿದಂತೆ ಮೂರು ತಾಲ್ಲೂಕುಗಳನ್ನು ಕೈಬಿಟ್ಟಿರುವುದು ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ತಾಳಿಕೋಟೆ ತಾಲೂಕು ಬರಪೀಡಿತ ತಾಲೂಕೆಂದು ಘೋಷಿಸಬೇಕು ಇಲ್ಲದಿದ್ದರೆ ತಾಲೂಕಿನ ಎಲ್ಲ ರೈತರು ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಸರ್ಕಾರದ ಜನಪ್ರೀತಿನಿಧಿಗಳು ತಿರುಗಾಡುವದೇ ಕಷ್ಟಸಾದ್ಯವೆಂಬ ಪರಸ್ಥಿತಿ ಬರಲಿದೆ ಕೂಡಲೇ ಸರ್ಕಾರ ಏಚ್ಚೆತ್ತುಕೊಂಡು ರೈತರ ಪರವಾಗಿ ನಿಲ್ಲುವಂತಾಗಬೇಕೆಂದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಮಾತನಾಡಿ "ತಾಳಿಕೋಟೆ ತಾಲ್ಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲು ಸರ್ಕಾರ ಸೂಕ್ತ ಕಾರಣ ನೀಡಬೇಕು. ತಾಲ್ಲೂಕಿನಲ್ಲಿ ಸಮರ್ಪಕ ಮಳೆಯಾಗಿದ್ದು, ಬೆಳೆ ಉತ್ತಮವಾಗಿದೆ ಎಂಬುದನ್ನು ಸರ್ಕಾರ ಸಾಬೀತುಪಡಿಸಲಿ. ಸರ್ಕಾರಕ್ಕೆ ವಾಸ್ತವ ಸ್ಥಿತಿಯ ಬಗ್ಗೆ ಸಂಶಯವಿದ್ದರೆ ಮುಖ್ಯಮಂತ್ರಿ, ಕಂದಾಯ ಹಾಗೂ ಕೃಷಿ ಸಚಿವರು ಖುದ್ದಾಗಿ ತಾಳಿಕೋಟೆಗೆ ಆಗಮಿಸಿ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಲಿ" ಎಂದು ಆಗ್ರಹಿಸಿದ ಅವರು ಬೇಡಿಕೆ ಈಡೇರಿಸಲು ಸರ್ಕಾರ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಹಂತ ಹಂತವಾಗಿ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ತಾಲ್ಲೂಕು ಉಪಾಧ್ಯಕ್ಷ ರಾಮನಗೌಡ ಹಾದಿಮನಿ ಧರಣಿಯನ್ನುದ್ದೇಶಿಸಿ ಮಾತನಾಡಿದರು.
ಧರಣಿಯಲ್ಲಿ ಬಾಲಪ್ಪಗೌಡ ಲಿಂಗದಳ್ಳಿ, ದೊಡ್ಡಪ್ಪಗೌಡ ಹೊಸಳ್ಳಿ, ಸಂಗನಗೌಡ ಟಕ್ಕಳಕಿ, ಭೀಮನಗೌಡ ಬಿರಾದರ, ಸಿದ್ದನಗೌಡ ಬಿರಾದರ, ಶಿವಯ್ಯ ಹಿರೇಮಠ, ಚಂದ್ರಯ್ಯ ಹಿರೇಮಠ, ವಿರೂಪಾಕ್ಷಪ್ಪ ಹಿರೇಮಠ, ಲಿಂಗನಗೌಡ ಕಂಚಲಕಾಯಿ, ಮಲ್ಲನಗೌಡ ಪಡಗನೂರ, ಸುಭಾಷ ದುದಗಿ, ಹುಸೇನಿ ಇನಾಮದರ, ಮಲ್ಲಣ್ಣ ಸಾತಗಟ್ಟಿ, ರಮೇಶ ಬಡಿಗೇರ, ಅಲ್ಲಾಭಕ್ಷ ಇನಾಮದರ, ಲಿಂಗನಗೌಡ ಕಾಮರೆಡ್ಡಿ, ಅರುಣಗೌಡ ಬಿರಾದಾರ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.