ಬೀಳಗಿ 17: - ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಜೆ.ಟಿ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಅಣವಿರಯ್ಯ ಪ್ಯಾಟಿಮಠ ಮತ್ತು ಪಪಂ ಮಾಜಿ ಅಧ್ಯಕ್ಷ ಅನೀಲ ಗಚ್ಚಿನಮನಿ ಆಗ್ರಹಿಸಿದರು.
ಪಟ್ಟಣದ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ವಿವಿಧ ಸಮಾಜಗಳ ಮುಖಂಡರು ಸಮ್ಮುಖದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಳಗಿ ಕ್ಷೇತ್ರದಿಂದ ಇಲ್ಲಿಯವರೆಗೆ ಕಾಂಗ್ರೆಸ್ನಿಂದ ಆಯ್ಕೆಯಾದ ಯಾವುದೇ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ.ನಾಲ್ಕು ಭಾರಿ ಶಾಸಕರಾಗಿರುವ ಹಿರಿಯ ರಾಜಕಾರಣಿಯಾದ ಜೆ.ಟಿ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ನೀರಾವರಿ ಯೋಜನೆಗಳು ವೇಗವಾಗಿ ಪೂರ್ಣಗೊಳ್ಳಲಿವೆ ಎಂಬ ಭರವಸೆ ಜಿಲ್ಲೆಯ ಜನರಿಗಿದೆ ಎಂದರು.
ಪ್ರಭಾವಿ ನಾಯಕ ನಿರಾಣಿ ಸೋಲಿಸಿದ ಪಾಟೀಲರಿಗೆ ಸಿಗಲಿ ಸ್ಥಾನ: ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಂಬಿತರಾಗಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಸೋಲಿಸಿ ಜೆ.ಟಿ. ಪಾಟೀಲ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಜಿಲ್ಲೆಯ ಅತ್ಯಂತ ಹಿರಿಯ ಶಾಸಕರಾಗಿರುವ ಅವರಿಗೆ ಮೊದಲ ಅವಧಿಯಲ್ಲೇ ಸಚಿವ ಸ್ಥಾನ ಸಿಗಬೇಕಿತ್ತು. ಈಗಲಾದರೂ ಎರಡನೇ ಅವಧಿಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಹೇಳಿದ ಅವರು ಬರುವ ದಿ 21 ರಂದು ಬೀಳಗಿ ಮತಕ್ಷೇತ್ರದ ಎಲ್ಲಾ ಜಿಪಂ ಕ್ಷೇತ್ರಗಳಿಂದ ತಲಾ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರ ನಿಯೋಗ ಬೆಂಗಳೂರು ಹೋಗಿ ಕಾಂಗ್ರೆಸ್ ಹೈಕಮಾಂಡ್ ಮುಖಂಡರಿಗೆ ಮನವಿ ಸಲ್ಲಿಸಿ ಕ್ಷೇತ್ರದ ಜನರ ಆಶೆ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.
ಇದೇ ವೇಳೆ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗುವ ನೀರಾವರಿ ಜಮೀನುಗಳಿಗೆ ತಲಾ ₹40 ಲಕ್ಷ ಹಾಗೂ ಒಣ ಬೇಸಾಯದ ಜಮೀನುಗಳಿಗೆ ತಲಾ ₹30 ಲಕ್ಷ ಪರಿಹಾರವನ್ನು ಫಲಾನುಭವಿಗಳಿಗೆ ಕೊಡಿಸಲು ಶಾಸಕ ಜೆ.ಟಿ. ಪಾಟೀಲ್ ಅವರು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರು ಎಂದು ಅವರು ವಿವರಿಸಿದರು.
ಮುಖಂಡರಾದ, ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಸಿದ್ದು ಮೇಟಿ ಹಾಸಿನಪಿರ ಮುಜಾವರ, ಯೂಸುಫ್ ವಾಚಮೇಕರ, ಮುಜಾವರ ಚೆರಮನ್,ಕ್ರಷ್ಣಾ ಬಾಲಗಾವಿ, ಅಬ್ಬುಷಾಮ ಖಾಜಿ, ಮಾಯಪ್ಪ ಬಿದರಿ, ಶ್ಯಾಮಾ ಮುಲ್ಲಾ, ಹನಮಂತ ಗಚ್ಚಿನಮನಿ, ರಾಹುಲ ಚಲವಾದಿ, ಸಾಗರ ಚಲವಾದಿ, ಇಮಾಮ ಬಾಗವಾನ, ಮಹಮ್ಮದ ರಫಿಕ ಮುಜಾವರ, ಸುನಿಲ ಗಚ್ಚಿನಮನಿ, ಪರಸು ಕಳ್ಳಿಮನಿ, ಉಪಸ್ಥಿತರಿದ್ದರು.
ಜೆ.ಟಿ. ಪಾಟೀಲ ಅವರು ಯಾವುದೇ ಕಳಂಕವಿಲ್ಲದ ಕ್ಲೀನ್ ಇಮೇಜ್ ಹೊಂದಿರುವ ಹಿರಿಯ ಶಾಸಕರು. ಈ ಬಾರಿ ಕಾರ್ಯಕರ್ತರು ಅತ್ಯಂತ ಹುಮ್ಮಸ್ಸಿನಿಂದ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಒಂದು ವೇಳೆ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು. ಅವರಿಗೆ ಸಚಿವ ಸ್ಥಾನ ನೀಡಿದರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಆನೆ ಬಲ ಬಂದಂತಾಗುತ್ತದೆ."
— ಸಂಗಪ್ಪ ಕಂದಗಲ್, ಕಾಂಗ್ರೆಸ್ ಮುಖಂಡರು.
