ಯರಗಟ್ಟಿ : ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆದೇಶದಂತೆ ಸ್ಥಳೀಯ ಬಸವಾ ಅಭಿಮಾನಿಗಳು ಹಾಗೂ ಸತೀಶ ಜಾರಕಿಹೊಳಿ ಪೌಂಡೇಶನ್ ಆಶ್ರಯದಲ್ಲಿ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಸವ ಪಂಚಮಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದವು.
ನಾಗರ ಪಂಚಮಿಯಂದು ಕಲ್ಲುನಾಗರಗಳಿಗೆ ಹಾಗೂ ಮಣ್ಣಿನ ಹುತ್ತಕ್ಕೆ ಹಾಲು ಎರೆದು ವ್ಯರ್ಥ ಮಾಡಬಾರದೆಂಬ ಪರಿಕಲ್ಪನೆಯಲ್ಲಿ ಬೆಳಗ್ಗೆ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಬ್ರೆಡ್,ಬಿಸ್ಕೀಟ್ ವಿತರಿಸುವ ಮೂಲಕ ಬಸವ ಪಂಚಮಿಯನ್ನು ಜನಪರ ರೀತಿಯಲ್ಲಿ ಆಚರಿಸಲಾಯಿತು.
ಕರವೇ ಅಧ್ಯಕ್ಷ ರಫೀಕ ಡಿಕೆ ಮಾತನಾಡಿ, ಲಿಂಗಾಯತ ಧರ್ಮಗುರು ಮಹಾಮಾನವತಾವಾದಿ ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ವಿಶ್ವಗುರು ಬಸವಣ್ಣನವರು ಶ್ರಾವಣ ಶುದ್ಧ ಪಂಚಮಿಯೆಂದು ಉರಿಯುಂಡ ಕರ್ಪುರದಂತೆ ಮಹಾಬಯಲಿನಲ್ಲಿ ಬಯಲಾದರು. ಆ ಮಹಾಗುರುವಿನ ಸ್ಮರಣೆಯ ನಿಮಿತ್ತ ಬಸವಭಕ್ತರು, ಬಸವಾಭಿಮಾನಿಗಳು ಹಾಗೂ ಶರಣ ಸಾಹಿತ್ಯ ಆಸಕ್ತರು ಈ ದಿನವನ್ನು ಬಸವ ಪಂಚಮಿಯನ್ನಾಗಿ ಪ್ರತಿವರ್ಷ ಆಚರಿಸಿಕೊಂಡು ಬರಬೇಕು. ಅಂಡಜವಾದ ಹಾವು ಹಾಲು ಕುಡಿಯುವುದಿಲ್ಲ. ಹುತ್ತ,ಹಾವುಗಳಿಗೆ ವ್ಯರ್ಥವಾಗಿ ಹಾಲು ಎರೆಯುವ ಬದಲು ಆಸ್ಪತ್ರೆಯಲ್ಲಿ ರೋಗಿಗಳಿಗೆ,ಮಕ್ಕಳಿಗೆ ಹಾಲು ವಿತರಿಸಿದರೆ ರೋಗಿಗಳಿಗೂ,ಮಕ್ಕಳಿಗೂ ಹಿತವಾಗುತ್ತದೆ. ಹುತ್ತ,ಹಾವುಗಳಿಗೆ ಹಾಲು ಎರೆಯುವಂತಹ ಮೂಢನಂಬಿಕೆಗಳನ್ನು ತೊರೆದು ಪ್ರಗತಿಪರ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಈ ವೇಳೆ ಡಾ. ಸಚಿನ ಬೂದಿ ಲಕ್ಷ್ಮಣ ಕುಕಟಿರಪ್ಪಗೋಳ, ಸೋಮು ರೈನಾಪೂರ, ಸುನೀತಾ ಗಿರೇವ್ವಗೋಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.