ತಾಳಿಕೋಟೆ,ಅ,೨೪ : ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಹಾಗೂ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರರಂದು ಶಾಲಾ ವಿದ್ಯಾರ್ಥಿನಿಯರಿಗಾಗಿ ಸ್ತ್ರೀ ಆರೋಗ್ಯ, ಪೌಷ್ಟಿಕ ಆಹಾರ ಪದ್ಧತಿ, ಮಾಸಿಕ ಋತುಚಕ್ರ ಹಾಗೂ ಆರೋಗ್ಯಯುತ ಜೀವನಶೈಲಿ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮೂದಾಯ ಆರೋಗ್ಯ ಕೇಂದ್ರದ ಮಹಿಳಾ ವೈಧ್ಯರಾದ ಡಾ.ವಿಜಯಲಕ್ಷ್ಮೀ ಹಜೇರಿ ಅವರು ವಿದ್ಯಾರ್ಥಿನಿಯರಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಸರಳವಾಗಿ ಹಾಗೂ ವೈಜ್ಞಾನಿಕವಾಗಿ ಮಾಹಿತಿ ನೀಡಿದರಲ್ಲದೇ ವಿಶೇಷವಾಗಿ ಮಾಸಿಕ ಋತುಚಕ್ರದ ಸಂದರ್ಭದಲ್ಲಿ ವಹಿಸಬೇಕಾದ ಸ್ವಚ್ಛತೆ, ಸರಿಯಾದ ಆಹಾರ ಪದ್ಧತಿ, ವೈಯಕ್ತಿಕ ಆರೋಗ್ಯ, ಸ್ತ್ರೀಯರಲ್ಲಿ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳನ್ನು ನಿರ್ಲಕ್ಷಿಸದೆ ಸೂಕ್ತ ಸಮಯದಲ್ಲಿ ವೈದ್ಯರ ಸಲಹೆ ಪಡೆಯುವ ಅಗತ್ಯ ಕುರಿತು ಉಪಯುಕ್ತ ಮಾರ್ಗದರ್ಶನ ನೀಡಿದರು.
ಮಹಿಳಾ ವೈಧ್ಯರಾದ ಡಾ. ಮಧು ಅಗರವಾಲ ಡಾ. ಗಂಗಾಂಬಿಕಾ ಪಾಟೀಲ, ಅವರು ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡಿ, ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಸೇವನೆ, ನಿಯಮಿತ ದೈಹಿಕ ಚಟುವಟಿಕೆ, ವೈಯಕ್ತಿಕ ಸ್ವಚ್ಛತೆ ಮತ್ತು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ತಿಳಿಸಿದರಲ್ಲದೇ ಜೊತೆಗೆ ಬೊಜ್ಜು ತಡೆಗಟ್ಟುವಿಕೆ ಹಾಗೂ ಆರೋಗ್ಯಕರ ತೂಕ ಕಾಪಾಡಿಕೊಳ್ಳುವಲ್ಲಿ ಆಹಾರ ಮತ್ತು ದೈಹಿಕ ಚಟುವಟಿಕೆಯ ಪಾತ್ರದ ಕುರಿತು ವಿವರಿಸಿದರು.
ಡಾ. ಪ್ರಿಯಾ ಭಟ್ ಸೇರಿದಂತೆ ಸ್ತ್ರೀರೋಗ ತಜ್ಞರು ವಿದ್ಯಾರ್ಥಿನಿಯರಿಗೆ ಆರೋಗ್ಯ ಸಂಬಂಧಿತ ವಿಚಾರಗಳ ಕುರಿತು ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮವನ್ನು ಹಿರಿಯ ಮಹಿಳಾ ವೈಧ್ಯರಾದ ಡಾ. ಸರೋಜಾ ಕಾರ್ಚಿ ಅವರು ಉದ್ಘಾಟಿಸಿದರು.
ಈ ಸಮಯದಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿದ್ಧನಗೌಡ ಮಂಗಳೂರ ಹಾಗೂ ಮುಖ್ಯಗುರುಗಳಾದ ಸಂತೋಷ ಪವಾರ ಉಪಸ್ಥಿತರಿದ್ದರು. ಕುಮಾರಿ ಸ್ವಪ್ನ ದೇಸಾಯಿ ಹಾಗೂ ಕುಮಾರಿ ಸ್ವರ್ಣ ಕುಲಕರ್ಣಿ ಪ್ರಾರ್ಥಿಸಿದರು. ಶಿಕ್ಷಕರಾದ ರಾಜು ಜವಳಗೇರಿ ನಿರೂಪಿಸಿ, ವಂದಿಸಿದರು. ಇದೇ ಸಮಯದಲ್ಲಿ ವಿದ್ಯಾರ್ಥಿನಿಯರು ಆರೋಗ್ಯ ಸಂಬಂದಿತ ಕೆಲವು ಪ್ರಶ್ನೇಗಳನ್ನು ವ್ಯಕ್ತಪಡಿಸಿ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.