ಕಾರವಾರ: ನಗರದ ಲಂಡನ್ ಬ್ರೀಡ್ಜ್ ಬಳಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ನಿರ್ಮಿಸಲಾದ ಸುರಂಗ ಮಾರ್ಗದ ಬಳಿ ಮತ್ತೆ ಗುಡ್ಡ ಕುಸಿದಿದೆ. ಪರಿಣಾಮ ಮುಂಜಾಗೃತಾ ಕ್ರಮವಾಗಿ ಒಂದು ಸುರಂಗ ಮಾರ್ಗದಲ್ಲಿ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಗುಡ್ಡ ಕುಸಿತದಿಂದ ಈ ಹಿಂದೆ ಕೆಲವು ದಿನ ಬಂದ್ ಆಗಿದ್ದ ಸುರಂಗ ಮಾರ್ಗದ ಇನ್ನೊಂದು ಬದಿಯಲ್ಲಿ ಶನಿವಾರ ಬೆಳಗ್ಗೆ ಮತ್ತೆ ಬಂಡೆಕಲ್ಲು ಹಾಗೂ ಮಣ್ಣು ಕುಸಿದಿದೆ. ಇದರಿಂದ ಅಂಕೋಲಾದಿಂದ ಕಾರವಾರ ನಗರಕ್ಕೆ ಸಂಪರ್ಕ ಕಲ್ಪಿಸುವ ಸುರಂಗದ ಒಂದು ಬದಿಯ ಸಂಚಾರ ಬಂದ್ ಮಾಡಲಾಗಿದೆ.
ಸದ್ಯ ಐಆರ್ಬಿ ಕಂಪನಿಯಿಂದ ಮಣ್ಣು, ಕಲ್ಲುಗಳ ತೆರವು ಮಾಡಿದ್ದು ಮುಂಜಾಗೃತಾ ಕ್ರಮವಾಗಿ ಈ ಮಾರ್ಗದ ಸಂಚಾರವನ್ನು ಬಂದ್ ಮಾಡಲಾಗಿದೆ. ಈ ಹಿಂದಿನ ಹಳೆಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
''ಐಆರ್ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸುರಂಗದ ಬಳಿ ಪದೆ ಪದೇ ಗುಡ್ಡ ಕುಸಿತವಾಗುತ್ತಿದೆ. ಮಣ್ಣು, ಕಲ್ಲು ಸಡಿಲಗೊಂಡು ಮಳೆಗಾಲದಲ್ಲಿ ಹೆದ್ದಾರಿಗೆ ಬೀಳುವುದರಿಂದ ನಿತ್ಯ ಸಂಚಾರ ಮಾಡುವ ಸವಾರರಿಗೆ ಜೀವ ಭಯ ಕಾಡುವಂತಾಗಿದೆ. ಕೂಡಲೇ ಈ ಭಾಗದಲ್ಲಿ ಗುಡ್ಡ ಕುಸಿಯುವುದನ್ನು ಗುತ್ತಿಗೆ ಪಡೆದ ಕಂಪನಿ ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳುವಂತೆ ನಗರಸಭೆ ಮಾಜಿ ಉಪಾಧ್ಯಕ್ಷ ಪಿ.ಪಿ ನಾಯ್ಕ ಆಗ್ರಹಿಸಿದ್ದಾರೆ.