ಚೆನ್ನೈ, ಸೆಪ್ಟೆಂಬರ್ 28: ನಿನ್ನೆ ಶನಿವಾರ ತಮಿಳುನಾಡಿನ ಕರೂರಿನಲ್ಲಿ 40ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡು ಕಾಲ್ತುಳಿತ ಪ್ರಕರಣದಲ್ಲಿ ಅಲ್ಲಿಯ ಪೊಲೀಸರು ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ರ್ಯಾಲಿ ಆಯೋಜಕರು ಸರಿಯಾಗಿ ನಿಯಮಗಳನ್ನು ಪಾಲಿಸದೇ ಇದ್ದದ್ದು ನೂಕುನುಗ್ಗಲಿಗೆ ಕಾರಣವಾಯಿತು ಎಂದು ಎಡಿಜಿಪಿ ಹೇಳಿದ್ದಾರೆ. ಇದೇ ವೇಳೆ, ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ಕಾಲ್ತುಳಿತ ಘಟನೆಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ.
ವಿಜಯ್ ವಿರುದ್ಧ ಈ ಹಿಂದೆ ಸಾಕಷ್ಟು ಬಾರಿ ಹರಿಹಾಯ್ದಿದ್ದ ಅಣ್ಣಾಮಲೈ ಅವರು ಈ ಪ್ರಕರಣದಲ್ಲಿ ದಳಪತಿಯ ದೂಷಣೆ ಮಾಡಲಿಲ್ಲ. ತಾನು ವಿಜಯ್ ಅವರನ್ನು ನೇರವಾಗಿ ದೂಷಿಸುತ್ತಿಲ್ಲ ಎಂದೇ ಅಣ್ಣಾಮಲೈ ಹೇಳಿದ್ದಾರೆ. ಘಟನೆಯ ಸಿಬಿಐ ತನಿಖೆ ಆಗಬೇಕೆಂದೂ ಅಣ್ಣಾಮಲೈ ಈ ವೇಳೆ ಆಗ್ರಹಿಸಿದ್ದಾರೆ.