ಕಾಗವಾಡ: ಕಾಗವಾಡ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಭವ್ಯ ಹಾಗೂ ದಿವ್ಯವಾಗಿ ಆಯೋಜಿಸಲಾಗಿದ್ದ ದಹಿ ಹಂಡಿ ಉತ್ಸವವು ಸೆ.7ರಂದು ಪಟ್ಟಣ ಪಂಚಾಯಿತಿ ಎದುರು ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಅದ್ಧೂರಿಯಾಗಿ ನಡೆಯಿತು.
ಜ್ಯೋತಿಕುಮಾರ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ಪುಷ್ಪಹಾರ ಅರ್ಪಿಸಿ ಉದ್ಘಾಟಿಸಿದರು. ಬಳಿಕ ಅವರು ಶ್ರೀಕೃಷ್ಣನ ಭಕ್ತಿಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.
ದಹಿ ಹಂಡಿ ಸ್ಪರ್ಧೆಯಲ್ಲಿ ವಿವಿಧ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದು, ರೋಚಕ ಪೈಪೋಟಿಯ ಬಳಿಕ ಜೈ ಮಹಾರಾಷ್ಟ್ರ ತಂಡವು ವಿಜೇತ ತಂಡವಾಗಿ ಹೊರಹೊಮ್ಮಿತು. ಯುವಕರ ಸಾಹಸಮಯ ಪ್ರದರ್ಶನಕ್ಕೆ ನೆರೆದಿದ್ದ ಸಾವಿರಾರು ಜನರು ಹರ್ಷೋದ್ಗಾರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಿಎಸ್ಐ ರಾಘವೇಂದ್ರ ಖೋತ,ಕಾಕಾಸಾಬ ಪಾಟೀಲ, ಅರುಣ ಫರಾಂಡೆ , ಓಂಪ್ರಕಾಶ ಪಾಟೀಲ ,ಪೂಜಾ ಕಾಂಬಳೆ, ಮಲ್ಲಿಕಾರ್ಜುನ ಕಾಂಬಳೆ,ಬಾಳಾಸಾಬ ಕಲ್ಲೋಳೆ, ಜನಾರ್ಧನ್ ಧೋಡಾರೆ, ವಿದ್ಯಾಧರ ಧೋಡಾರೆ, ಶಿವರಾಜ ಪಾಟೀಲ ವಿನಾಯಕ ಚೌಗಲೆ,,ಸೇರಿದಂತೆ ಕಾಗವಾಡ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸಿದ್ದರು.
ಸಾರ್ವಜನಿಕರ ಹೆಚ್ಚಿನ ಸಂಖ್ಯೆಯ ಉಪಸ್ಥಿತಿಯಿಂದ ಕಾರ್ಯಕ್ರಮವು ಹಬ್ಬದ ವಾತಾವರಣದಲ್ಲಿ ಕಳೆಗಟ್ಟಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಗವಾಡ ಪೊಲೀಸ್ ಠಾಣೆಯ ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.