ಅಥಣಿ: ಇಂದು ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲ ಕೊನೆಯಾಗಬೇಕಿದ್ದು, ಶಿಕ್ಷಕರು ಕೇವಲ ವೇತನಕ್ಕಾಗಿ ಕೆಲಸ ಮಾಡದೆ, ಗುರು ಎಂಬ ಪದದ ಗೌರವವನ್ನು ಹೆಚ್ಚಿಸುವಂತೆ ಕಾರ್ಯನಿರ್ವಹಿಸಿ, ಮಾನವೀಯ ಮೌಲ್ಯಗಳೊಂದಿಗೆ ಬೋಧನೆ ಮಾಡಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಹಾಕಬೇಕು ಎಂದು ಅಥಣಿ ಬಿಇಒ ಎಂ.ಆರ್.ಮುಂಜಿ ಕರೆ ನೀಡಿದರು.
ತೇಲಸಂಗ ಗ್ರಾಮದ ಸರಕಾರಿ ಶಾಸಕರ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಬೈ ಮತ್ತು ಸೂರತ್ನ ಸೇಠ್ ತಾಪಿದಾಸ್ ತುಳಸಿದಾಸ್ ಹಾಗೂ ವೃಜದಾಸ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಳ್ಳಲಾಗಿದ್ದ ಶಾಲಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡ ಸರಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮುಂಬೈ ಮತ್ತು ಸೂರತ್ನ ಸೇಠ್ ತಾಪಿದಾಸ್ ತುಳಸಿದಾಸ್ ಹಾಗೂ ವೃಜದಾಸ ಚಾರಿಟೇಬಲ್ ಟ್ರಸ್ಟ್, ಸೇಠ್ ಶ್ರೀ ಸಂದೀಪ್ ಮರ್ಚೆಂಟ್ ಅವರ ಸೌಜನ್ಯದಿಂದ ಹಾಗೂ ನಿವೃತ್ತ ವೈಜ್ಞಾನಿಕ ಅಧಿಕಾರಿ ವಿ. ಎಂ. ಸಿಂದಗಿ ಅವರ ಸಹಕಾರದೊಂದಿಗೆ ಅಥಣಿ ತಾಲ್ಲೂಕಿನ ೧೯೫ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ೧೯,೩೫೮ ನೋಟ್ಬುಕ್ಗಳನ್ನು ಉಚಿತವಾಗಿ ವಿತರಿಸಿದ್ದು ಮಾತ್ರವಲ್ಲದೆ, ಸಂಸ್ಥೆಯು ಕಂಪ್ಯೂಟರ್, ಪ್ರಿಂಟರ್, ಧ್ವನಿವರ್ಧಕ, ಸ್ಮಾರ್ಟ್ ಬೋರ್ಡ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ ಅವರು, ಸರ್ಕಾರಿ ಶಾಲೆಯ ಮಕ್ಕಳು ಮಣ್ಣಿನಲ್ಲಿ ಆಟವಾಡಿ ಕಬಡ್ಡಿ, ಕುಸ್ತಿಯಂತಹ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬೆಳೆಯುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸದ ಜೊತೆಗೆ ಶಾರೀರಿಕ ಕ್ಷಮತೆ, ಗಟ್ಟಿತನ ಹಾಗೂ ಮಾನಸಿಕ ಸದೃಢತೆಯನ್ನು ನೀಡುವ ನೈಜ ಶಿಕ್ಷಣ ದೊರೆಯುತ್ತದೆ. ಒಂದು ಮಗು ಶಿಕ್ಷಣದೊಂದಿಗೆ ಜೀವನದ ಪ್ರತಿಯೊಂದು ಸವಾಲನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಒಳ್ಳೆಯದು-ಕೆಟ್ಟದ್ದನ್ನು ಗ್ರಹಿಸಿ, ಆಟ-ಪಾಠಗಳೊಂದಿಗೆ ಕಠಿಣ ಶ್ರಮವಹಿಸಿ ಬೆಳೆದಾಗ ಮಾತ್ರ ಬದುಕನ್ನು ಸಮರ್ಥವಾಗಿ ಎದುರಿಸುವ ಧೈರ್ಯ ಬರುತ್ತದೆ ಎಂದರು.
ನಿವೃತ್ತ ವೈಜ್ಞಾನಿಕ ಅಧಿಕಾರಿ ವಿ. ಎಂ. ಸಿಂದಗಿ ಕ್ಷೇತ್ರ ಸಮನ್ವಯಧಿಕಾರಿ ಜಿ.ಎ.ಖೋತ, ಎಸ್.ಜಿ.ಹೈಬತ್ತಿ, ಎಸ್.ಟಿ.ಗಸ್ತಿ, ಜಿ. ಎಮ್. ಹೀರೆಮಠ, ಬಿ.ಎಲ್.ಪೂಜಾರಿ, ಎಸ್.ಜಿ.ಭಜಂತ್ರಿ, ಸುರೇಶ ಕುಂಬಾರ, ಯಾಸೀನ್ ಕರಜಗಿ, ಮೋನೇಶ ಬಡಿಗೇರ, ವಿ.ಎಸ್.ಶೆಲೆಪ್ಪಗೋಳ, ಎಸ್.ಪಿ.ಹಡಪದ, ಪಿ.ಎ.ಕಂದಾರೆ, ಸುರೇಶ ರಜಪೂತ, ಎಸ್.ಡಿ.ಪೂಜಾರಿ, ಎಸ್.ಬಿ.ಇಸರಗೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.