ಬಳ್ಳಾರಿ,ಜು.24: ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಮತ್ತು ಛಲ ಅಡಗಿರುತ್ತದೆ. ಈ ವಯಸ್ಸು ಮತ್ತೆ ತಿರುಗಿ ಬರುವುದಿಲ್ಲ. ಹಾಗಾಗಿ ಶಿಕ್ಷಣ, ಕ್ರೀಡೆ ಮತ್ತು ಕಲೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶ್ರದ್ಧೆ, ಭಕ್ತಿ ಹಾಗೂ ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಮುನ್ನಡೆದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ಬಿ.ಪಿ.ಎಸ್.ಸಿ. ಶಾಲಾ ಹಾಗೂ ಕಾಲೇಜಿನ ಶರಣ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ “ಯುವ ಸೌರಭ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಮಾಳ ವಾದ್ಯ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹೆತ್ತ ತಂದೆ-ತಾಯಿಗಳು ಅಪಾರ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅವರ ಆಸೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ನಾನು ಸಹ 1988ರಿಂದ ಯುವಕ ಸಂಘವನ್ನು ಕಟ್ಟಿ, ಅದರ ಮೂಲಕ ಸಮಾಜ ಸೇವೆ ಮತ್ತು ಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿದ್ದೇನೆ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಸರ್ಕಾರವು ಯುವಜನರಲ್ಲಿರುವ ಕಲಾ ಪ್ರತಿಭೆ ಮತ್ತು ಕ್ರೀಡಾ ಕೌಶಲ್ಯವನ್ನು ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಕಲಾಪ್ರೇಮಿಗಳು ಮತ್ತು ಕ್ರೀಡಾಪಟುಗಳು ಒಂದೆಡೆ ಸೇರಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸರ್ಕಾರ ವೇದಿಕೆ ಕಲ್ಪಿಸಿದ್ದು, ಇದನ್ನು ಪ್ರತಿಯೊಬ್ಬರೂ ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಯುವಜನತೆ ಇಂತಹ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ತಮ್ಮ ಕಲಾಪ್ರತಿಭೆಯನ್ನು ಪಸರಿಸಿ, ದೇಶಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಪೀಳಿಗೆಯಲ್ಲಿ ನಾಡಿನ ಕಲೆ, ಸಂಸ್ಕೃತಿ ಮತ್ತು ಜಾನಪದದ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಯುವ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಹೆಮ್ಮೆಯ ಕಲೆ ಮತ್ತು ಸಂಸ್ಕೃತಿ, ಜಾನಪದ ಕಲೆ, ನಾಟಕ, ಸಂಗೀತ ಹಾಗೂ ನೃತ್ಯ ಮುಂತಾದ ಕಲಾ ಪ್ರಕಾರಗಳನ್ನು ಪರಿಚಯಿಸಿ, ಅವರಲ್ಲಿ ಕಲಾ ಆಸಕ್ತಿಯನ್ನು ಜಾಗೃತಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಡಿನ ವೈವಿಧ್ಯಮಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಹಲವು ಪ್ರದರ್ಶನಗಳು ನೆರವೇರಿದವು.
ಸುಗಮ ಸಂಗೀತ: ಬಳ್ಳಾರಿ ತಾಲ್ಲೂಕಿನ ಡಿ. ಕಗ್ಗಲ್ ಗ್ರಾಮದ ಕು. ಪುಟ್ಟರಾಜು .ಕೆ ಅವರು ಗಾಯನದ ಮೂಲಕ ನೆರೆದಿದ್ದ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.
ಸಮೂಹ ನೃತ್ಯ: ಬಳ್ಳಾರಿಯ ಶಾರದ ನಾಟ್ಯ ಅಕಾಡೆಮಿ ‘ಕಲಾವೃಕ್ಷ' ತಂಡದ ಪ್ರದರ್ಶಿಸಿದ ಅತ್ಯಾಕರ್ಷಕ ಸಮೂಹ ನೃತ್ಯವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಜಾನಪದ ಗೀತೆಗಳು: ಕಂಪ್ಲಿ ತಾಲ್ಲೂಕಿನ ಮೆಟ್ರಿ ಗ್ರಾಮದ ಕು. ಮುದ್ದಮ್ಮ ಅವರು ತಮ್ಮ ಗಂಭೀರ ಧ್ವನಿಯಲ್ಲಿ ಜಾನಪದ ಸೊಗಡಿನ ಗೀತೆಗಳನ್ನು ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಕAಸಾಳೆ: ಕುರುಗೋಡು ತಾಲ್ಲೂಕಿನ ಗುತ್ತಿಗನೂರು ಗ್ರಾಮದ ಶಿವಪ್ಪ .ಸಿ ಮತ್ತು ಸಂಗಡಿಗರು ಕಂಸಾಳೆ ಕಲೆಯ ರೋಮಾಂಚನಕಾರಿ ಪ್ರದರ್ಶನ ನೀಡಿದರು.
ವೀರಗಾಸೆ: ಸಂಡೂರು ತಾಲ್ಲೂಕಿನ ತಾರಾನಗರದ ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಂಗಡಿಗರು ವೀರಗಾಸೆಯ ಶೌರ್ಯಪೂರ್ಣ ಕುಣಿತದ ಮೂಲಕ ನೆರೆದಿದ್ದವರಲ್ಲಿ ರೋಮಾಂಚನ ಮೂಡಿಸಿದರು.
ಸ್ಥಳೀಯ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ನಮ್ಮ ಜಾನಪದ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಪೂರಕವಾಗಿವೆ ಎಂದು ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾತಂಡಗಳಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಟಿಇಹೆಚ್ಆರ್ಡಿ ಟ್ರಸ್ಟ್ ಹಾಗೂ ಬಿ.ಪಿ.ಎಸ್.ಸಿ. ಶಾಲಾ ಮತ್ತು ಕಾಲೇಜಿನ ಅಧ್ಯಕ್ಷ ಡಾ. ಎಸ್.ಜಿ.ವಿ.ಮಹಿಪಾಲ್, ನಿವೃತ್ತ ವರದಿಗಾರರು ಹಾಗೂ ತಬಲ ಕಲಾವಿದರಾದ ಅಹಿರಾಜ್.ಎಂ., ಹಿಂದೂಸ್ತಾನಿ ಗಾಯಕ ದೊಡ್ಡಬಸಪ್ಪ ಗವಾಯಿ, ಜಾನಪದ ಗಾಯಕ ಹುಲುಗಪ್ಪ ಎಸ್.ಎಂ., ನಿವೃತ್ತ ಪಿಎಸ್ಐ ಹುಸೇನ್ ಸಾಬ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
