ಕೊಪ್ಪಳ ಸೆಪ್ಟೆಂಬರ್ 17 : ಸೆಪ್ಟೆಂಬರ್ 28 ರಂದು ಆಚರಿಸಲಾಗುವ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಕೊಪ್ಪಳ ನಗರದ ವಿವಿಧ ಶಾಲೆಗಳಲ್ಲಿ ಬುಧವಾರ (ಸೆ. 16) ರೇಬಿಸ್ ರೋಗದ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಶೇಷ ಜಾಗೃತಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ಸ್ಥಳೀಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಪಾಲಿಕ್ಲಿನಿಕ್ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶಾಂತಿನಿಕೇತನ ಹೈಸ್ಕೂಲ್, ನಂದೀಶ್ವರ ಶಾಲೆ ಹಾಗೂ ನಿವೇದಿತಾ ಹೈಸ್ಕೂಲ್ಗಳಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರೇಬಿಸ್ ರೋಗದ ಮೂಲ, ಹರಡುವ ವಿಧಾನ, ಲಕ್ಷಣಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಾಯಿತು.
ಕೊಪ್ಪಳ ಪಾಲಿಕ್ಲಿನಿಕ್ನ ಮುಖ್ಯ ಪಶುವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಜಿ. ಅವರು ಉಪನ್ಯಾಸ ನೀಡಿ, "ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದ ತಕ್ಷಣವೇ ಗಾಯವನ್ನು ಸೋಪು ಮತ್ತು ಹರಿಯುವ ನೀರಿನಿಂದ ಸ್ವಚ್ಛಗೊಳಿಸಿ, ವಿಳಂಬ ಮಾಡದೆ ಆಸ್ಪತ್ರೆಗೆ ತೆರಳಿ ರೇಬಿಸ್ ನಿರೋಧಕ ಲಸಿಕೆ (Anti-Rabies Vaccine) ಪಡೆಯಬೇಕು. ಈ ರೋಗದ ಬಗ್ಗೆ ಜಾಗೃತಿ ವಹಿಸುವುದೊಂದೇ ಜೀವ ಉಳಿಸಲು ಇರುವ ಏಕೈಕ ಮಾರ್ಗ ಎಂದು ವಿವರಿಸಿದರು.
ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಡಾ. ವೀರಣ್ಣ ಕೆ. ಕಮತರ್ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತ ವೈಜ್ಞಾನಿಕ ಮಾಹಿತಿಯನ್ನು ತಮ್ಮ ಕುಟುಂಬ ಮತ್ತು ಸುತ್ತಮುತ್ತಲಿನ ಜನರಿಗೆ ತಲುಪಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲಿಕ್ಲಿನಿಕ್ ಉಪ ನಿರ್ದೇಶಕರಾದ ಡಾ. ಎಸ್.ಜಿ. ರೋಣ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಯಮನಪ್ಪ ಬಿ. ಕೋಳಿಹಾಳ್, ಪಶುವೈದ್ಯಕೀಯ ಪರೀಕ್ಷಕ ಶರಣಪ್ಪ ಕೊರಗಲ್, ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ. ಮಹೇಶ್ವರ ಶಾಸ್ತ್ರಿ, ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯ ರವಿತೇಶ್ ಅಬ್ಬಿಗೇರಿ ಸೇರಿದಂತೆ ಪಾಲಿಕ್ಲಿನಿಕ್ ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
“ರೇಬಿಸ್ ತಡೆಗಟ್ಟಬಹುದು – ಜಾಗೃತಿಯಿಂದ ಜೀವ ಉಳಿಸಬಹುದು” ಎಂಬ ಮಹತ್ವದ ಸಂದೇಶವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಯಿತು.
****