ಬಳ್ಳಾರಿ. ಆ. 27: ನಗರದ ಕೌಲ್ಬಜಾರ್ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಈದ್ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು.
ಈದ್ಮಿಲಾದ್ ಅಂಗವಾಗಿ ಕುಣಿಟಾನಿ ಮಸೀದಿಯಿಂದ ದಿವಾನೆ ಮಸ್ತಾನ್ ದರ್ಗಾವರೆಗೆ ಭವ್ಯ ರ್ಯಾಲಿ ನಡೆಯಿತು. ರ್ಯಾಲಿಯಲ್ಲಿ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಮತ್ತು ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ, ನಾತ್ ಶರೀಫ್ ಪಠಿಸುತ್ತಾ ಪ್ರವಾದಿ ಮಹಮ್ಮದ್ (ಸ) ಅವರ ಮೇಲಿನ ಭಕ್ತಿ ಹಾಗೂ ಗೌರವವನ್ನು ವ್ಯಕ್ತಪಡಿಸಿದರು.
ರ್ಯಾಲಿ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಹಾಗೂ ಭಾಗವಹಿಸಿದ್ದವರಿಗೆ ಊಟ, ಫಲಹಾರ ಮತ್ತು ಜ್ಯೂಸ್ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆ ಜನರು ರ್ಯಾಲಿಯನ್ನು ವೀಕ್ಷಿಸಿ, ಪರಸ್ಪರ ಈದ್ಮಿಲಾದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಸಮುದಾಯದ ಮುಖಂಡರು, ಯುವಕರು, ಹಿರಿಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡು ಶಾಂತಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ಮಾನವೀಯತೆಯ ಸಂದೇಶದೊಂದಿಗೆ ಹಬ್ಬವನ್ನು ಆಚರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿತ್ತು. ರ್ಯಾಲಿ ಸಾಗಿದ ಪ್ರಮುಖ ಮಾರ್ಗಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಸಂಚಾರ ಮತ್ತು ಭದ್ರತೆಯ ಮೇಲೆ ನಿಗಾ ವಹಿಸಲಾಗಿತ್ತು. ಪೊಲೀಸರ ಮುನ್ನೆಚ್ಚರಿಕೆ ಕ್ರಮಗಳಿಂದ ಭವ್ಯ ರ್ಯಾಲಿಯು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆಯಿತು.