ಪ್ರತಿವರ್ಷ ನಡೆಯುವ ಕೊಪ್ಪಳದ ಸುಪ್ರಸಿದ್ದ ಗವಿಸಿದ್ದೇಶ್ವರ ಮಠದ ಜಾತ್ರೆಯನ್ನು, ದಕ್ಷಿಣ ಭಾರತದ ಕುಂಬಮೇಳ ಅಂತಲೇ ಕರೆಯುತ್ತಾರೆ. ಈ ವರ್ಷ ಜನವರಿ 15 ರಂದು ಗವಿಮಠದ ರಥೋತ್ಸವ ನಡೆಯುತ್ತದೆ. ಜನವರಿ 12 ರಿಂದ ಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ.
ನಾಡಿನ ಅನೇಕ ಕಡೆಯಿಂದ ಬರುವ ಭಕ್ತರು ಗವಿಸಿದ್ದೇಶ್ವರ ಮಠದ ಜಾತ್ರೆಯನ್ನು ಕಣ್ತುಂಬಿಕೊಂಡು, ಕೃತಾರ್ಥರಾಗುತ್ತಾರೆ. ಆದರೆ, ಕೇವಲ ಜಾತ್ರೆ ಮಾಡಿ, ರಥ ಎಳೆದು, ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸಾಲದು, ಜಾತ್ರೆಗಳ ಮುಖಾಂತರ ಅರಿವನ್ನು ಮೂಡಿಸುವ ಮತ್ತು ಸಾಮಾಜಿಕ ಕಳಕಳಿಯನ್ನು ಸಾರುವ ಕೆಲಸವಾಗಬೇಕು ಎಂಬುವುದು ಕೊಪ್ಪಳ ಗವಿಮಠದದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ (Abhinava Gavisiddeshwara Swamiji) ಕಳಕಳಿಯಾಗಿದೆ. ಹೀಗಾಗಿ ಕಳೆದ ಒಂದು ದಶಕದಿಂದ ಜಾತ್ರೆ ಜೊತೆಗೆ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ನಾಡಿನ ಜ್ವಲಂತ ಸಮಸ್ಯೆಗಳ ಪೈಕಿ, ಪ್ರತಿವರ್ಷ ಒಂದೊಂದು ಸಮಸ್ಯೆಗಳನ್ನು ಎತ್ತಿಕೊಂಡು, ಅವುಗಳ ನಿವಾರಣೆಗಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುವುದು ಮಠದ ಸಂಪ್ರದಾಯವಾಗಿ ಬೆಳೆದುಕೊಂಡು ಬರುತ್ತಿದೆ.
ಇಂದು (ಜನವರಿ 11) ಮಠದವತಿಯಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ಈ ವರ್ಷ ಸಕಲಚೇತನ ಎಂಬ ಶಿರ್ಷಿಕೆಯಡಿ, ವಿಕಲಚೇತನರ ನಡೆ ಸಕಲಚೇತನದ ಕಡೆ ಎಂಬ ಘೋಷವಾಕ್ಯದೊಂದಿಗೆ ಜಾತ್ರೆ ಹಮ್ಮಿಕೊಂಡಿದ್ದು ವಿಶೇಷವಾಗಿದೆ. ಈ ಜಾಗೃತಿ ಜಾಥಾಕ್ಕೆ ಕೊಪ್ಪಳ ನಗರದ ತಾಲೂಕು ಕ್ರೀಂಡಾಗಣದಲ್ಲಿ ಚಾಲನೆ ನೀಡಲಾಯಿತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ, ಅಧಿಕಾರಿಗಳು, ಜನಪ್ರತಿನಿಧಿಗಳು ಜಾಥಾಕ್ಕೆ ಚಾಲನೆ ನೀಡಿದರು. ನಗರದ ಅನೇಕ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಬಾಗಿಯಾಗಿ, ತಾಲೂಕು ಕ್ರೀಡಾಗಂಣದಿಂದ ಮಠದವರಗೆ ನಡೆದ ಜಾಥಾದಲ್ಲಿ ಬಾಗಿಯಾಗಿದ್ದು ವಿಶೇಷವಾಗಿತ್ತು.