ಮಹಾಲಿಂಗಪುರ,ಜು,೨೦ : ಕರ್ನಾಟಕ ಕಾರ್ಮಿಕ ಪತ್ರಕರ್ತರ ಸಂಘ ಶತಮಾನದ ಸಂಭ್ರಮದ ಸಮೀಪದಲ್ಲಿದೆ. ಸಂಘಟನಾ ಶಕ್ತಿಯೇ ಇದರ ಜೀವಾಳ ಎಂದು ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಈಶ್ವರ ಶೆಟ್ಟರ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಲಿಂಗಪುರ ಘಟಕದ ವತಿಯಿಂದ ಪುರಸಭಾ ಸಭಾಭವನದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಬಾಗಲಕೋಟೆ ಕಾನಿಪ ಸಂಘದ ಇತಿಹಾಸದಲ್ಲಿ ಇದುವರೆಗೂ ಒಂದೇ ಒಂದು ಚುನಾವಣೆ ನಡೆದಿಲ್ಲ, ಪ್ರತಿ ಬಾರಿಯೂ ಅವಿರೋಧ ಆಯ್ಕೆಯೇ ಆಗಿದೆ, ಇದು ರಾಜ್ಯದ ಎಲ್ಲ ಸಂಘಗಳಿಗೆ ಮಾದರಿ. ಭಿನ್ನಾಭಿಪ್ರಾಯಗಳು ಆರೋಗ್ಯಕರವಾಗಿರಬೇಕು, ಇನ್ನೊಬ್ಬರ ಚಾರಿ ವಧೆ, ಗುಂಪುಗಾರಿಕೆ ಮಾಡಿದರೆ ಸಮಾಜಕ್ಕೆ ನಾವೇನು ಸಂದೇಶ ಕೊಡಲು ಸಾಧ್ಯ, ಆದ್ದರಿಂದ ಭಿನ್ನಾಭಿಪ್ರಾಯ, ಪೈಪೋಟಿಗಳಿದ್ದರೆ ಅವು ಸಮಾಜಮುಖಿ ಮತ್ತು ಸುಧಾರಣೆಯ ವಿಚಾರದಲ್ಲಿರಲಿ ಎಂದರು.
ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಅಂಗಡಿ ಮಾತನಾಡಿ, ಸಂಘದ ಸದಸ್ಯತ್ವ ಬ್ಲಾಕ್ ಮೇಲ್ ಗೆ ಉಪಯೋಗವಾಗಬಾರದು, ಸಮಾಜಮುಖಿ ಕೆಲಸಗಳಿಗೆ ಉಪಯೋಗವಾಗಬೇಕು ಎಂದರು.
ಇಟಗಿ ಮಹೇಶ್ವರ ಪಪೂ ಕಾಲೇಜು ಪ್ರಾಚಾರ್ಯ ಗಂಗಾಧರ ಅವಟೇರ ಮಾತನಾಡಿ, ಪತ್ರಕರ್ತರು ತಮ್ಮ ಭ್ರಮೆಗಳನ್ನು ಸಾರ್ವಜನಿಕರ ಮೇಲೆ ಹೇರಬಾರದು, ಪತ್ರಕರ್ತನಿಗೆ ಕೋಪವಿರಬೇಕು ಆದರೆ ಈರ್ಷೆ, ದ್ವೇಷ, ಮತ್ಸರ ಇರಬಾರದು, ಲೋಕಾನುಭವದಿಂದ ವ್ಯಕ್ತಿತ್ವ ಗಟ್ಟಿಯಾಗುತ್ತದೆ, ವರ್ಷ ಬಿಡಿ ಸಮಾಜ ಸೇವೆಯನ್ನು ಮಾಡುವ ಪತ್ರಕರ್ತರ ದಿನಾಚರಣೆಯನ್ನು ಸಮಾಜವೇ ಮಾಡಬೇಕು ಎಂದರು.
ಸಿಪಿಐ ಆರ್.ಆರ್. ಪಾಟೀಲ ಮಾತನಾಡಿ , ಸಾಹಿತಿ ಭಾವಜೀವಿಯಾಗಿರುತ್ತಾನೆ. ಸಮಾಜ ಪ್ರಜಾಪ್ರಭುತ್ವ ಉಳಿವಿಗೆ ಪತ್ರಕರ್ತ ಒಬ್ಬ ಒಳ್ಳೆಯ ಸಾಹಿತಿಯಾಗಬೇಕು, ಪತ್ರಕರ್ತರ ಜ್ಞಾನ ಮತ್ತು ದುಡಿಮೆಗೆ ತಕ್ಕ ಫಲ ಸಿಗುತ್ತಿಲ್ಲ ಸಮಾಜ ಸರ್ಕಾರ ಅವರ ಬೆನ್ನಿಗೆ ನಿಲ್ಲಬೇಕು ಎಂದರು.
ಅಳಿಯ ಘಟಕದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಎನ್.ಎ.ಲಮಾಣಿ, ಕಾನಿಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಮೋರೆ, ಕಾರ್ಯದರ್ಶಿ ಮೀರಾ ತಟಗಾರ ಇದ್ದರು.
ಮಹಾಲಕ್ಷ್ಮಿ ಗುಳದಳ್ಳಿ ಪ್ರಾರ್ಥಿಸಿ, ರಾಜೇಂದ್ರ ನಾವಿ ಸ್ವಾಗತಿಸಿ, ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾರನಗೌಡ ಉತ್ತಂಗಿ ನಿರೂಪಿಸಿ, ಇಲಾಹಿ ಜಮಖಂಡಿ ವಂದಿಸಿದರು.
ಸಂಘದ ಸದಸ್ಯರಾದ ಎಸ್.ಎಸ್.ಈಶ್ವರಪ್ಪಗೋಳ, ಮಹೇಶ ಆರಿ, ಹನಮಂತ ನಾವಿ, ಹನೀಫ್ ಚಿಕ್ಕೋಡಿ, ಲಕ್ಷ್ಮಣ ಕಿಶೋರಿ ಇದ್ದರು.
ಗಂಗಾಧರ ಅವಟೇರ ಅವರ ಮಾರ್ಗದರ್ಶನದಂತೆ ಪತ್ರಕರ್ತರಿಗಾಗಿ ದತ್ತಿನಿಧಿ ಸ್ಥಾಪಿಸಲು ಮುಖಂಡರಾದ ಜಿ.ಎಸ್.ಗೊಂಬಿ ೨೦ ಸಾವಿರ, ಬರಗಿ, ಚನ್ನಬಸು ಹುರಕಡ್ಲಿ, ಸಂಗಪ್ಪ ಹಲ್ಲಿ ತಲಾ ಹತ್ತು ಸಾವಿರ ರೂ. ಒಟ್ಟು ೫೦ ಸಾವಿರ ನೀಡುವುದಾಗಿ ಘೋಷಿಸಿದರು.