ಮೂಡಲಗಿ : ಇಂದಿನ ಸ್ಪರ್ಧಾತ್ಮಕ ಮತ್ತು ಒತ್ತಡಭರಿತ ಯುಗದಲ್ಲಿ ಶಿಕ್ಷಕರು, ತಮ್ಮ ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಕಾಯಾ-ವಾಚಾ-ಮನಸಾ ಸಮರ್ಪಣಾ ಭಾವದಿಂದ ಆತ್ಮತೃಪ್ತಿಗಾಗಿ ವೃತ್ತಿಯನ್ನು ನಿರ್ವಹಿಸಬೇಕು ಎಂದು ಶಿಕ್ಷಕರು, ಅಧ್ಯಾತ್ಮ ಪ್ರವಚನಕಾರರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಎಸ್.ಆರ್.ಬೆಳಗಲಿ ಹೇಳಿದರು.
ತಾಲೂಕಿನ ಜೋಕಾನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯೋಗಿಸಿದ್ದೇಶ್ವರ ತೋಟ, ಶಾಲೆಯಲ್ಲಿ ಆಯೋಜಿಸಲಾದ ವಾರದ ಅತಿಥಿ ಕಾರ್ಯಕ್ರಮದ ಅಂಗವಾಗಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಮುಖ್ಯ ಆತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕರ ವ್ಯಕ್ತಿತ್ವ, ನಡವಳಿಕೆ ಮತ್ತು ಮೌಲ್ಯಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ವಿದ್ಯಾರ್ಥಿಗಳು ಕೂಡ ಗುರುವಿನ ಮೇಲೆ ವಿಶ್ವಾಸ, ಗೌರವ ಮತ್ತು ಭಕ್ತಿಯನ್ನು ಬೆಳೆಸಿಕೊಂಡು ನಿರಂತರ ಅಭ್ಯಾಸ, ಶಿಸ್ತು, ಸಮಯಪಾಲನೆ ಮತ್ತು ಸಕಾರಾತ್ಮಕ ಚಿಂತನೆಯಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸುತ್ತ, ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನದ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು.
ಕಾರ್ಯಗಾರದಲ್ಲಿ ಶಿಕ್ಷಕರಾದ ಈರಣ್ಣ ನಿಡುಗುಂದಿ, ಜಯಶ್ರೀ ಪೂಜಾರಿ, ಚೈತ್ರ ಗಿರೆನ್ನವರ, ನಿರ್ಮಲಾ ಯಡ್ರಾವಿ ಹಾಗೂ ಸವಿತಾ ಮಾದರ ಉಪಸ್ಥಿತರಿದ್ದರು. ಶಿಕ್ಷಕರ ವೃತ್ತಿಪರ ಕೌಶಲ್ಯ, ಮಾನವೀಯ ಮೌಲ್ಯಗಳು ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನಗಳ ಕುರಿತು ನಡೆದ ಚರ್ಚೆಗಳು ಕಾರ್ಯಗಾರಕ್ಕೆ ವಿಶೇಷ ಮೆರುಗು ನೀಡಿದವು.