ಇಂಡಿ : ಇಂಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರೋಡಗಿ ಗ್ರಾಮದಲ್ಲಿ ಖೇಡಗಿ, ಮಿರಗಿ ಹಾಗೂ ಶಿವಪೂರ ಗ್ರಾಮಗಳ ನೂರಾರು ರೈತರು ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಶಿವಲಿಂಗೇಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಬಿ.ಡಿ. ಪಾಟೀಲ ಅವರು ರೈತರ ಪರವಾಗಿ ಮಾತನಾಡಿ, "ಬತ್ತಿರುವ ಭೀಮಾ ಮತ್ತೆ ಉಕ್ಕಿ ಹರಿಯಲಿ. ರೈತರ ಬದುಕು ಹಸನಾಗಲಿ. ಮೇಘರಾಜನ ಕೃಪೆ ಈ ಬರಪೀಡಿತ ನಾಡಿನ ಮೇಲೆ ಸುರಿದು ಸಮೃದ್ಧಿ ನೆಲೆಸಲಿ" ಎಂದು ಭೀಮಾ ನದಿಯ ದಡದಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಅವರು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ, ಬಳಗಾನೂರ ಕೆರೆಯಿಂದ ನವಲಿ ಹಳ್ಳದ ಮೂಲಕ ಭೀಮಾ ನದಿಗೆ ನೀರು ಹರಿಸುವ ವ್ಯವಸ್ಥೆಯನ್ನು ತಕ್ಷಣ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದರಿಂದ ಇಂಡಿ ತಾಲ್ಲೂಕಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಅದೇ ರೀತಿ, ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ, ಭೀಮಾ ನದಿಗೆ ನೀರು ಹರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಇಂಡಿ ತಾಲ್ಲೂಕಿನ ರೈತರ ಪರವಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಿದಾನಂದ ಗಚ್ಚಿನಮಠ, ಶಂಕರಗೌಡ ಬಂಡಿ, ಮಂಜು ಶಾಹಾಬಾದಿ, ಡಾ. ಹಣಮಂತ ಮೋಸಲಗಿ, ಗಂಗಪ್ಪ ಬಡದಾಳ, ಶಿವಮೂರ್ತಿ ಮಾಲಗಿ, ಶರಣಗೌಡ ಪಾಟೀಲ, ಬಸುಸಾವಕಾರ ಕೋರೆ, ಹಣಮಂತ ಸೋನ್ನ, ವಿಠಲ ಪೂಜಾರಿ, ಸಲ್ಲು ನದಾಪ್ಪ, ಶ್ರೀಶೈಲ ಲಬ್ಬಾ, ಶಂಕರ ಮಡಗೋಂಡ, ಗಜಾನನ ಪಾಟೀಲ, ನಿಯಾಝ್ ಅಗರಖೇಡ, ದುಂಡು ಬಿರಾದಾರ, ಫಜಲು ಮುಲ್ಲಾ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ರೈತರು ಭೀಮಾ ನದಿಗೆ ಶೀಘ್ರ ನೀರು ಹರಿಸಿ ಬರಪೀಡಿತ ಪ್ರದೇಶದ ಕೃಷಿ ಹಾಗೂ ಜನಜೀವನವನ್ನು ಉಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.