ಚಾಮರಾಜನಗರ
ಮಕ್ಕಳ ಗುಣಾತ್ಮಕ ಮೌಲ್ಯಗಳು, ಜೀವನ ಶೈಲಿ ಹಾಗೂ ಜೀವನ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಲು ಬೇಸಿಗೆ ಶಿಬಿರಗಳು ಸಹಕಾರಿ ಎಂದು ಡಾಕ್ಟರ್ ಮಹೇಶ್ ಅಭಿಪ್ರಾಯಪಟ್ಟರು.
ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ನಡೆದ ಬಾಲ ವಿಕಾಸ ಬೇಸಿಗೆ ಶಿಬಿರದ ಸಮಾರೋಪ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿ ಮಾತನಾಡಿ, ಬಾಲ ವಿಕಾಸ ಶಿಬಿರವು ಮಕ್ಕಳ ಉತ್ತಮ ವ್ಯಕ್ತಿತ್ವ ಬೆಳವಣಿಗೆ ಬೆಳೆಸುವಲ್ಲಿ ನೆರವಾಗುತ್ತದೆ. ಆತ್ಮವಿಶ್ವಾಸ ವೃದ್ಧಿಸುತ್ತವೆ. ಸಂವಹನ ಕೌಶಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಬಾಲ ವಿಕಾಸ ಶಿಬಿರವು ಪೂರಕವಾಗಿದೆ ಎಂದರು.
ಮನೋಬಲ ತರಬೇತುದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ, ಇಂದಿನ ಮಕ್ಕಳಲ್ಲಿ ಮನೋಬಲವು ಕಡಿಮೆಯಾಗುತ್ತಿದ್ದು, ಸಣ್ಣಪುಟ್ಟ ಮಾತುಗಳಿಗೆ ಒತ್ತಡದಲ್ಲಿ ಸಿಲುಕಿ, ಮನೆ ಬಿಟ್ಟು ಹೋಗುವ, ಜೀವಘಾತ ಮಾಡಿಕೊಳ್ಳುವ ಸಂಕಲ್ಪಗಳಲ್ಲಿ ಸಿಲುಕಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದ್ದ ಅನೇಕ ಮಕ್ಕಳು ತಮ್ಮ ತಮ್ಮ ಅಳಲುಗಳನ್ನು ತೋಡಿಕೊಂಡಿದ್ದಾರೆ. ಮನೆಯಲ್ಲಿ ತಂದೆ ತಾಯಿಗಳು ಬೈಯುತ್ತಾರೆ ಹೊಡೆಯುತ್ತಾರೆ ಪರಸ್ಪರದಲ್ಲಿ ಜಗಳವಾಡುತ್ತಿರುತ್ತಾರೆ. ಆದ್ದರಿಂದ ಮನೆ ಬಿಟ್ಟು ಹೋಗಬೇಕು. ಸಾಯಬೇಕು ಎನಿಸುತ್ತದೆ ಎನ್ನುತ್ತಿರುತ್ತಾರೆ. ಇಂಥ ಕಾರ್ಯಕ್ಕೆ ಎಂದು ಕೈ ಹಾಕಬಾರದು ಅಂತ ಯಾವುದೇ ಪರಿಸ್ಥಿತಿಗಳು ಬಂದರೂ ಈಶ್ವರೀಯ ವಿಶ್ವವಿದ್ಯಾಲಯ, ಮಕ್ಕಳ ಬೆನ್ನೆಲುಬಾಗಿ ನಿಂತಿರುತ್ತದೆ. ಮನೋ ಬಲವನ್ನು ತುಂಬುತ್ತದೆ. ಧೈರ್ಯವಾಗಿ ಎದುರಿಸುವಂತಹ ಶಕ್ತಿಯನ್ನು ರಾಜಯೋಗ ಶಿಕ್ಷಣದ ಮೂಲಕ ಉಚಿತವಾಗಿ ನೀಡುತ್ತದೆ. ಅಂತ ಯಾವುದೇ ವಿಚಾರಗಳಿದ್ದರೂ, ಪೋಷಕರು ಸ್ನೇಹಿತರ ಜೊತೆಗೂ ಹೇಳಿಕೊಳ್ಳಲಾಗದಂತ ವಿಚಾರಗಳಿದ್ದರೆ, ಸಹ ನಮ್ಮೊಂದಿಗೆ ಹಂಚಿಕೊಂಡು ಅದರಿಂದ ಮುಕ್ತರಾಗುವಂತೆ ಸಲಹೆ ನೀಡಿದರು.
ಕೆಲವು ಮಕ್ಕಳು ಕೆಟ್ಟ ಚಟಗಳಿಗೆ ದಾಸರಾಗಿ, ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಒಳ್ಳೆಯ ಸಂಗತಿಗಳಿಂದ ದೂರ ಉಳಿಯುತ್ತಿದ್ದಾರೆ. ಕೆಟ್ಟ ಹವ್ಯಾಸಗಳಿಗೆ ಬೇಗನೆ ಬಲಿಯಾಗುತ್ತಿದ್ದಾರೆ ಅದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಒಳ್ಳೆಯ ವ್ಯಕ್ತಿಯಾಗಿ ರೂಪಿಸಲು ಪರಿವರ್ತನೆ ತರಬೇಕಾಗಿದೆ. ಆಧ್ಯಾತ್ಮಿಕ ಮಾರ್ಗದರ್ಶನ ಪಡೆದುಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸಸ್ನ ಬಿಕೆ ಆರಾಧ್ಯ, ನಾಗರಾಜ್, ಪ್ರಮೀಳಾ ಊದಗಡ್ಡಿ, ಆಶಾ, ಜಯಲಕ್ಷ್ಮಿ, ಶಿವಕಮಲ, ಶ್ರೀನಿವಾಸ ಮೂರ್ತಿ ಹಾಜರಿದ್ದರು.