ಚಿಕ್ಕಮಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತದಾನ ಮರು ಎಣಿಕೆಯ ನಂತರ ನಡೆದಿದ್ದ ಬೆಳವಣಿಗೆ ಕುರಿತು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಿಜೆಪಿಯ ಜೀವರಾಜ್ ಆಯ್ಕೆಗೆ ತಡೆ ನೀಡಿದ್ದಲ್ಲದೇ, ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರನ್ನೇ ಮರುಸ್ಥಾಪಿಸಿ ಆದೇಶ ಹೊರಡಿಸಿದೆ. ಮೇ 21ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು, ಅಂಚೆ ಮತ ಮರುಎಣಿಕೆ ಸದ್ಯಕ್ಕೆ ರಿಸಲ್ಟ್ ರದ್ದು ಮಾಡಿದೆ.
ಜಾಪ್ರಭುತ್ವವನ್ನು ಈ ರೀತಿ ಹೈಜಾಕ್ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, ಅಂಚೆ ಮತಗಳ ಮರು ಎಣಿಕೆಗೂ ಮುನ್ನ ಇದ್ದ ಸ್ಥಿತಿಯನ್ನೇ ಕಾಪಾಡುವಂತೆ ನಿರ್ದೇಶನ ನೀಡಿದೆ. ಕೋರ್ಟ್ನ ಆದೇಶದ ಪರಿಣಾಮ ರಾಜೇಗೌಡ ಅವರೇ ಇದೀಗ ಶೃಂಗೇರಿ ಶಾಸಕರಾಗಿ ಮುಂದುವರಿಯಲಿದ್ದಾರೆ. ಹಾಗಾಗಿ 2023ರ ಚುನಾವಣಾ ತಕರಾರು ಪ್ರಕರಣವು ಹೊಸ ತಿರುವು ಪಡೆದಿದೆ.
ಹೈಕೋರ್ಟ್ ಆದೇಶ ಹಾಗೂ ಮರು ಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು, ಚುನಾವಣಾ ಪ್ರಕ್ರಿಯೆಯಲ್ಲಿನ ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ವಿಚಾರಣೆ ವೇಳೆ, ಪ್ರಜಾಪ್ರಭುತ್ವವನ್ನು ಈ ರೀತಿ ಹೈಜಾಕ್ ಮಾಡಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಕರ್ನಾಟಕ ಸರ್ಕಾರ, ಚುನಾವಣಾ ಆಯೋಗ ಹಾಗೂ ಪ್ರತಿವಾದಿಗಳಿಗೆ ನೋಟಿಸ್ ಕೂಡ ಜಾರಿ ಮಾಡಿದೆ. ಈ ಮಧ್ಯಂತರ ಆದೇಶದಿಂದ ವಾರದ ಹಿಂದಷ್ಟೇ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿಯ ಡಿ.ಎನ್. ಜೀವರಾಜ್ ಅವರಿಗೆ ಹಿನ್ನಡೆಯಾಗಿದೆ.
ಸುಪ್ರೀಂ ಹೇಳಿದ್ದೇನು?:
ನಮ್ಮ ಮುಂದೆ ಮಂಡಿಸಲಾದ ದಾಖಲೆಗಳ ಪ್ರಕಾರ, ಚುನಾವಣಾಧಿಕಾರಿಯು ಅರ್ಜಿದಾರ ರಾಜೇಗೌಡ ಪರವಾಗಿ ಬಂದಿದ್ದ 562 ಮತಗಳಿಂದ 248 ಮತಗಳನ್ನು ಕಡಿತಗೊಳಿಸಿದ್ದಾರೆ ಮತ್ತು ಪ್ರತಿವಾದಿ ಜೀವರಾಜ್ ಪರವಾಗಿದ್ದ 689 ಮತಗಳಿಗೆ 2 ಮತಗಳನ್ನು ಸೇರಿಸಿದ್ದಾರೆ. ಕೋರ್ಟ್ ಆದೇಶಿಸಿದ ವ್ಯಾಪ್ತಿ ಮೀರಿ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಕ್ರಮಗಳು ಮೇಲ್ನೋಟಕ್ಕೆ ಯಾವುದೇ ಭದ್ರವಾದ ಅಡಿಪಾಯ ಹೊಂದಿಲ್ಲದ ಕಾರಣ, ಈ ನ್ಯಾಯಾಲಯದ ಹಸ್ತಕ್ಷೇಪದ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ತೀರ್ಪಿನ ಕುರಿತಾಗಿ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ಕೋರ್ಟ್ ಆದೇಶ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿದೆ. ಇದರಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂಬ ನಂಬಿಕೆಯಿಂದ ಇದ್ದೇನೆ. ನನಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯ ಡಿ.ಎನ್. ಜೀವರಾಜ್ ಪ್ರತಿಕ್ರಿಯೆ ನೀಡಿ, ನ್ಯಾಯಾಲಯದ ಈ ಆದೇಶ ಅಂತಿಮವಲ್ಲ. ಮೇ 21ಕ್ಕೆ ವಿಚಾರಣೆ ಇದೆ. ಅಲ್ಲಿಯವರೆಗೆ ಕಾಯುತ್ತೇನೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಆಶಾಭಾವದಲ್ಲಿದ್ದೇನೆ ಎಂದು ಹೇಳಿದ್ದಾರೆ.
ವಾದ - ಪ್ರತಿವಾದ:
ರಾಜೇಗೌಡರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿ ಮರು ಎಣಿಕೆಯ ವೇಳೆ ಪಾರದರ್ಶಕತೆಯನ್ನು ಗಾಳಿಗೆ ತೂರಲಾಗಿದೆ. ಚುನಾವಣಾ ಆಯೋಗದ ನಡವಳಿಕೆಯು ಅನುಮಾನಾಸ್ಪದವಾಗಿದೆ ಎಂದು ನ್ಯಾಯಾಲಯದ ಗಮನ ಸೆಳದರು.
ಜೀವರಾಜ್ ಪರ ಹಿರಿಯ ವಕೀಲ ವಿ.ಗಿರಿ ಅವರು, ಹೈಕೋರ್ಟ್ ಆದೇಶದಂತೆಯೇ ಮರುಎಣಿಕೆ ನಡೆದಿದೆ. ಜೀವರಾಜ್ ಈಗಾಗಲೇ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದ್ದರಿಂದ ಈ ಹಂತದಲ್ಲಿ ತಡೆ ನೀಡಬಾರದು ಎಂದು ಮನವಿ ಮಾಡಿದರು. ಆದರೆ, ಎರಡೂ ಕಡೆಯ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್, ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿ, ಮೇ 21ಕ್ಕೆ ವಿಚಾರಣೆಯನ್ನು ಮುಂದೂಡಿತು.
