ಅಥಣಿ: ಭಕ್ತಿ–ಶ್ರದ್ಧೆ, ಸಂಭ್ರಮ–ಸಡಗರ ಹಾಗೂ ಧಾರ್ಮಿಕ ವೈಭವದೊಂದಿಗೆ ಕನಕ ನಗರದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ. ಕಳಸಾರೋಹಣ. ಕಾರ್ಯಕ್ರಮವು ವಿಶೇಷ ಹೋಮ್ ಹವನದೊಂದಿಗೆ ಅದ್ದೂರಿಯಾಗಿ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕುಂಭಮೇಳ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ಭಕ್ತರ ಗಮನ ಸೆಳೆಯಿತು.
ಜಾತ್ರೆಯ ಅಂಗವಾಗಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸಲಾಯಿತು. ಮಂಗಳವಾದ್ಯಗಳ ನಾದ ಹಾಗೂ ದೇವಿಯ ನಾಮಸ್ಮರಣೆಯೊಂದಿಗೆ ನಡೆದ ಕುಂಭಮೇಳದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಭಕ್ತಿಭಾವ ಮೆರೆದರು.
ಈ ಸಂದರ್ಭದಲ್ಲಿ ಕನಕ ನಗರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಮಿಟಿ ಅಧ್ಯಕ್ಷ ಪರಶುರಾಮ ಚುಬಚಿ ಮಾತನಾಡಿ ಮಹಾಲಕ್ಷ್ಮಿ ದೇವಿಯನ್ನು ಸಂಪತ್ತು, ಸೌಭಾಗ್ಯ, ಐಶ್ವರ್ಯ ಹಾಗೂ ಸಮೃದ್ಧಿಯ ಆಧಿ ದೇವತೆಯಾಗಿ ಪೂಜಿಸಲಾಗುತ್ತದೆ. ವಿಶೇಷವಾಗಿ ಶುಕ್ರವಾರದಂದು ಮಹಿಳೆಯರು ಹಾಗೂ ಭಕ್ತರು ಮನೆಗಳಲ್ಲಿ ಮಹಾಲಕ್ಷ್ಮಿ ದೇವಿಯ ಪೂಜೆ ನೆರವೇರಿಸಿ, ದೀಪ ಬೆಳಗಿಸಿ, ಹೂವು-ಹಣ್ಣುಗಳನ್ನು ಸಮರ್ಪಿಸಿ ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಸ್ಥಾನವಿದ್ದು, ದೇವಿಯ ಆರಾಧನೆ ಹಾಗೂ ಪೂಜೆಯಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ದೊರೆಯುತ್ತದೆ. ದೇವಿಯ ಪೂಜೆಯ ಸಂದರ್ಭದಲ್ಲಿ ಕುಟುಂಬದ ಸುಖ-ಶಾಂತಿ, ಆರೋಗ್ಯ, ಸಂತೋಷ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸುವುದು ವಾಡಿಕೆಯಾಗಿದೆ. ಭಕ್ತಿಯಿಂದ ದೇವಿಯನ್ನು ಸ್ಮರಿಸುವುದರಿಂದ ಮನಸ್ಸಿಗೆ ಧೈರ್ಯ, ಆತ್ಮಸ್ಥೈರ್ಯ ಹಾಗೂ ಸಕಾರಾತ್ಮಕ ಚಿಂತನೆ ಮೂಡುತ್ತದೆ ಎಂದ ಅವರು ಭಕ್ತಿ ಮತ್ತು ನಂಬಿಕೆಯಿಂದ ಶ್ರೀ ಮಹಾಲಕ್ಷ್ಮಿ ದೇವಿಯನ್ನು ಆರಾಧಿಸುವ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆ ಹೆಚ್ಚಲಿ, ಶ್ರೀ ಮಹಾಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಸದಾ ಎಲ್ಲರ ಮೇಲಿರಲಿ ಎಂದರು.
"ಮುತ್ತೈದೆಯರಿಗೆ ಉಡಿ ತುಂಬಿದ ಮಹಿಳೆಯರು"
ಜಾತ್ರಾ ಮಹೋತ್ಸವ ಹಾಗೂ ಕಳಸಾರೋಹಣದ ಅಂಗವಾಗಿ ನಡೆದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದರು. ಅರಿಶಿನ, ಕುಂಕುಮ, ಹೂವು, ಬಳೆ ಸೇರಿದಂತೆ ಸಾಂಪ್ರದಾಯಿಕ ವಸ್ತುಗಳನ್ನು ಒಳಗೊಂಡ ಉಡಿಯನ್ನು ತುಂಬಿ ಮುತ್ತೈದೆಯರಿಗೆ ಗೌರವ ಸಲ್ಲಿಸಲಾಯಿತು.
"ಭಕ್ತರ ಸಾಗರ; ಕಳೆಗಟ್ಟಿದ ಜಾತ್ರಾ ಸಂಭ್ರಮ"
ಕುಂಭಮೇಳದಲ್ಲಿ ಸಾಂಪ್ರದಾಯಿಕವಾಗಿ ಅಲಂಕರಿಸಿಕೊಂಡ ಮಹಿಳೆಯರು ಕುಂಭ ಹೊತ್ತು ಸಾಗಿದ ದೃಶ್ಯ ಮನಮೋಹಕವಾಗಿತ್ತು. ಮಂಗಳವಾದ್ಯಗಳ ನಾದ, ದೇವಿಯ ನಾಮಸ್ಮರಣೆ ಹಾಗೂ ಭಕ್ತರ ಜಯಘೋಷದಿಂದ ಜಾತ್ರಾ ಆವರಣ ಭಕ್ತಿಮಯವಾಗಿತ್ತು. ಜಾತ್ರಾ ಮಹೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗಾಗಿ ಪ್ರಸಾದ ಹಾಗೂ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಶೆಟ್ಟರ ಮಠದ ಮರಳು ಸಿದ್ದ ಮಹಾ ಸ್ವಾಮಿ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಮಿಟಿ ಕನಕ ನಗರ.
ಕಮಿಟಿಯ ಸರ್ವ ಸದಸ್ಯರಾದ ಭರಮಪ್ಪ ಆವೂಜಿ, ಎಸ್. ಎ ಮರನೂರ, ಜಿ. ಆರ್ ಜಾದವ, ಎಂ. ಬಿ ಪಾಟೀಲ, ಪಾಂಡುರಂಗ ಹೆಗಡೆ, ಎಂ. ಎಲ್ ಈಟಿ, ಅಣ್ಣಾಸಾಬ ಪಾಟೀಲ, ಸದಾಶಿವ ಒಡಗಾಲೆ, ಎಸ್. ಆರ್ ಪೂಜಾರಿ, ಅಮೋಘ ಖೋಬ್ರಿ, ಆರ್. ಡಿ ದೊಡಮನಿ, ಶಿವಾನಂದ ದೊಡಮನಿ, ತುಕಾರಾಂ ಸೂರವಂಶಿ, ರಮೇಶ ಬಾದವಾಡಗಿ, ರಾಜಕುಮಾರ ಬಡಿಗೇರ, ಪ್ರಕಾಶ ಪಟಣ್ಣಶೇಟಿ, ರಾಜು ತೇರದಾಳ, ಮಲ್ಲಪ್ಪ ಮಸ್ತಮರಡಿ, ಸಂತೋಷ ಬಯ್ಯೆನಾಯಿಕ, ಸೇರಿದಂತೆ ಕನಕ ನಗರದ ಮುಖಂಡರು ಮತ್ತು ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಮಿಟಿ ಮಹಿಳಾ ಸದಸ್ಯರು. ಸಾರ್ವಜನಿಕರು ಉಪಸ್ಥಿತರಿದ್ದರು