ಧಾರವಾಡ ವಿಶ್ವಕ್ಕೆ ಭಗವದ್ಗೀತೆಯ ಸಂದೇಶವನ್ನು ನೀಡಿದ ಭಗವಾನ್ ಶ್ರೀಕೃಷ್ಣನ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಭಗವದ್ಗೀತೆಯನ್ನು ಹಿಡಿದು ಪ್ರಮಾಣ ಸ್ವೀಕರಿಸುವ ಮೂಲಕ ಶ್ರೀಕೃಷ್ಣನ ಸಂದೇಶವನ್ನು ಸ್ಮರಿಸಲಾಗುತ್ತಿದೆ ಎಂದು ಹುಬ್ಬಳ್ಳಿ - ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಅವರು ಹೇಳಿದರು.
ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಭಗವಾನ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಸಮಾಜದ ಯುವಕ-ಯುವತಿಯರಲ್ಲಿ ಕಂಡುಬರುತ್ತಿರುವ ಜಾಗೃತಿ ಹಾಗೂ ಉತ್ಸಾಹ ಸಂತಸ ಮತ್ತು ಆತ್ಮವಿಶ್ವಾಸ ಮೂಡಿಸುತ್ತಿದೆ. ಯುವಜನರು ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದು, ಇಂತಹ ಕಾರ್ಯಕ್ರಮಗಳನ್ನು ಸ್ವತಃ ಸಂಘಟಿಸುವ ಮಟ್ಟಕ್ಕೆ ಬೆಳೆಯಬೇಕು. ಸರಕಾರವು ಸಮಾಜದೊಂದಿಗೆ ಕೈಜೋಡಿಸಿ ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದ್ದು, ಅದರ ಸದುಪಯೋಗವನ್ನು ಸಮಾಜ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಉತ್ತಮ ಬೆಳವಣಿಗೆಯಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜದ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯಲು ಹಿರಿಯರು ಪ್ರೋತ್ಸಾಹಿಸಬೇಕು. ಮಕ್ಕಳ ಭವಿಷ್ಯವೇ ಅತ್ಯಂತ ಮುಖ್ಯವಾಗಿದ್ದು, ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಸಮಾಜ ಮಂದಿರ ನಿರ್ಮಾಣವಾದ ಬಳಿಕ ಅದನ್ನು ಕೇವಲ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಮಕ್ಕಳಿಗೆ ಕೋಚಿಂಗ್ ತರಗತಿಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಇಂದಿನ ಕಾಲದಲ್ಲಿ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಹೊಸ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿದ್ದು, ಮಕ್ಕಳಿಗೆ ಇವುಗಳ ಕುರಿತು ಅಗತ್ಯವಾದ ಅರಿವು ಮೂಡಿಸಬೇಕು. ನಮ್ಮ ಮಕ್ಕಳು ಈಗಾಗಲೇ ನಮಗಿಂತ ಮುಂದೆ ಸಾಗುತ್ತಿದ್ದಾರೆ. ಅವರಿಗೆ ಸರಿಯಾದ ಜಾಗೃತಿ, ಮಾರ್ಗದರ್ಶನ ಹಾಗೂ ರಕ್ಷಣೆ ನೀಡುವುದು ಹಿರಿಯರ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬೆಂಬಲ ನೀಡುವ ಮೂಲಕ ಅವರ ಭವಿಷ್ಯವನ್ನು ಉತ್ತಮಗೊಳಿಸಬೇಕು. ಸಮಾಜದ ಹಿರಿಯರು ಮಕ್ಕಳ ಬೆನ್ನಿಗೆ ನಿಂತು ಅವರ ಶಿಕ್ಷಣ ಮತ್ತು ಅಭಿವೃದ್ಧಿಗೆ ಅಗತ್ಯವಾದ ನೆರವು ನೀಡಬೇಕು. ಇಡೀ ಭೂಮಂಡಲಕ್ಕೆ ಜಾಗೃತಿಯ ಸಂದೇಶ ನೀಡಿದ ಭಗವಾನ್ ಶ್ರೀಕೃಷ್ಣನ ಜಯಂತಿಯ ಸಂದರ್ಭದಲ್ಲಿ ಸರಕಾರವೂ ಸಮಾಜದೊಂದಿಗೆ ಕೈಜೋಡಿಸಿ ನಿಂತಿದೆ. ಸರಕಾರದಿಂದ ದೊರೆಯುವ ಅವಕಾಶಗಳು ಹಾಗೂ ಸೌಲಭ್ಯಗಳನ್ನು ಸಮಾಜದ ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಅವರು ಮಾತನಾಡಿ, ಶ್ರೀಕೃಷ್ಣ ಜಯಂತಿಯನ್ನು ಯಾವುದೇ ಒಂದು ಸಮಾಜಕ್ಕೆ ಸೀಮಿತಗೊಳಿಸದೆ, ವಿವಿಧ ಸಮಾಜಗಳ ಜನರು ಭಕ್ತಿಭಾವದಿಂದ ಶ್ರೀಕೃಷ್ಣ ಪರಮಾತ್ಮನನ್ನು ಸ್ಮರಿಸುತ್ತಾರೆ. ಭಗವಾನ್ ಶ್ರೀ ಸತ್ಯನಾರಾಯಣನ ಅವತಾರ ಪುರುಷರಾದ ಶ್ರೀಕೃಷ್ಣರು ಧರ್ಮದ ರಕ್ಷಣೆಗಾಗಿ ಅವತರಿಸಿದವರು ಎಂಬ ನಂಬಿಕೆ ಇದೆ. ಯಾರಿಗೆ ಕಷ್ಟ ಬಂದಾಗಲೂ, ಅವರು ಧರ್ಮದ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ಅಂತಹವರಿಗೆ ಶ್ರೀಕೃಷ್ಣ ಪರಮಾತ್ಮ ಸಹಾಯ ಮಾಡುತ್ತಾನೆ ಎಂಬ ನಂಬಿಕೆ ಇದೆ. ಅಧರ್ಮ ಹೆಚ್ಚಾದ ಸಂದರ್ಭದಲ್ಲಿ ಧರ್ಮವನ್ನು ಕಾಪಾಡಲು ಹಾಗೂ ಅಧರ್ಮವನ್ನು ನಾಶಪಡಿಸಲು ಶ್ರೀಕೃಷ್ಣ ಜನ್ಮತಾಳಿದ್ದಾರೆ ಎಂದು ಅವರು ಹೇಳಿದರು.
ಪ್ರತಿಯೊಬ್ಬರೂ ಧರ್ಮದ ರೀತಿಯಲ್ಲಿ ನಡೆದುಕೊಂಡು ಹೋಗಬೇಕು. ಧರ್ಮದ ಮಾರ್ಗದಲ್ಲಿ ನಡೆದರೆ ಯಾವಾಗಲೂ ಜಯ ಸಿಗುತ್ತದೆ. ಆದರೆ ಅಧರ್ಮದ ಮಾರ್ಗದಲ್ಲಿ ಸಾಗುವವರಿಗೆ ಅಪಜಯ ಉಂಟಾಗುತ್ತದೆ. ಧರ್ಮದ ಹಾದಿಯಲ್ಲಿ ನಡೆದುಕೊಂಡು ಹೋಗುವುದರಿಂದ ಜೀವನದಲ್ಲಿ ಸುಖ ಮತ್ತು ನೆಮ್ಮದಿ ದೊರೆಯುತ್ತದೆ. ಇದೇ ಸಂದರ್ಭದಲ್ಲಿ ಸಮಾಜದ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ನೀಡಿದರು.
10ನೇ ತರಗತಿ ಸೇರಿದಂತೆ ವಿವಿಧ ಹಂತಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ, ಮಕ್ಕಳು ಇನ್ನೂ ಹೆಚ್ಚಿನ ಶ್ರಮ ವಹಿಸಿ ಉತ್ತಮವಾಗಿ ಅಭ್ಯಾಸ ಮಾಡಬೇಕು. ಉನ್ನತ ಶಿಕ್ಷಣ ಪಡೆದು ಎಂಜಿನಿಯರ್, ವೈದ್ಯರು ಸೇರಿದಂತೆ ವಿವಿಧ ಕೋರ್ಸ್ಗಳನ್ನು ಪೂರ್ಣಗೊಳಿಸಿ, ಮುಂದೆ ತಮ್ಮ ಸಮಾಜದ ಸೇವೆಗೆ ಮುಂದಾಗಬೇಕು. ಶ್ರೀಕೃಷ್ಣ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಧರ್ಮದ ಮಾರ್ಗದಲ್ಲಿ ನಡೆಯುವ ಸಂಕಲ್ಪದೊಂದಿಗೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಇಸ್ಕಾನ್ ದೇವಾಸ್ಥಾನ ರಾಯಾಪುರ ರಣಧೀರ ರಾಮದಾಸ್ ಅವರು ಭಗವಾನ ಶ್ರೀ ಕೃಷ್ಣ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗದ ಮುಖಂಡರಾದ ವಸಂತ ಅರ್ಕಾಚಾರಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್. ಎಸ್. ಎಲ್. ಸಿ ಮತ್ತು ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶೇ. 95 ಕ್ಕಿಂತ ಹೆಚ್ಚಿನ ಅಂಕ ಪಡೆದವರಿಗೆ ಸನ್ಮಾನಿಸಿ, ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯಾದವ ಸಂಘದ ಅಧ್ಯಕ್ಷೆ ನೇತ್ರಾವತಿ ಗೊಲ್ಲರ, ಗೌರವಾಧ್ಯಕ್ಷ ಕಾಕಾ ರಂಗಸ್ವಾಮಿ, ಉಪಾಧ್ಯಕ್ಷ ನಾಗರಾಜ ಯಾದವ, ಗೌಳಿ ಸಮಾಜ ಮುಖಂಡರು ಬುರಾನ ಗೌಳಿ, ಇಮಾಮ ಕಾನೆವಾಲೆ, ವಿಶಾಲ್ ಗೌಳಿ, ಯಾದವ ಸಮಾಜದ ಮುಖಂಡರು ಆರ್.ಎಸ್ ಪಾಟೀಲ್, ಎಚ್ ಪರಮೇಶ್ವರಪ್ಪ, ಯಾದವ ಸಂಘದ ಉಪಾಧ್ಯಕ್ಷ ನಾಗರಾಜ ಯಾದವ, ಸಮಾಜ ಮುಖಂಡರಾದ ಆನಂದ ಜಾಧವ ಸೇರಿದಂತೆ ಜಿಲ್ಲಾ ಯಾದವ (ಗೊಲ್ಲ) ಕ್ಷೇಮಾಭಿವೃದ್ಧಿ ಸಂಘ ಸಮಾಜದ ಮುಖಂಡರು ಮತ್ತು ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.