ಬೆಳಗಾವಿ :
ಹೆಣ್ಣು ಕೊಟ್ಟ ಅತ್ತೆ ದೇವರಿಗೆ ಸಮಾನ ಅಂತಾ ಕರೆಯುತ್ತಾರೆ. ಆದರೆ, ಅದೇ ಹೆಣ್ಣು ಕೊಟ್ಟ ಅತ್ತೆಯ ಹೊಟ್ಟೆಗೆ ಅಳಿಯ ಚಾಕು ಇರಿದ ಘಟನೆ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಅರವಿಂದ ಗವಳಿ ಎಂಬಾತ ಅತ್ತೆಗೆ ಚಾಕು ಇರಿದ ಆರೋಪಿ. ಮಹಾದೇವಿ ಕರಿಗಾರ ಅಳಿಯನಿಂದ ಚಾಕು ಇರಿತಕ್ಕೊಳಗಾದ ಅತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷವಷ್ಟೇ ಅರವಿಂದ ಅವರ ಮದುವೆ ಆಗಿತ್ತು. ನಂತರ ಮುದ್ದಾದ ಗಂಡು ಮಗುವಿಗೆ ಅರವಿಂದನ ಪತ್ನಿ ಜನ್ಮ ನೀಡಿದ್ದರು. ಮಗು ಹುಟ್ಟಿದ ದಿನದಿಂದಲೂ ಅರವಿಂದ ಮಗುವನ್ನು ನೋಡುವ ತವಕದಲ್ಲಿದ್ದ. ಪದೇ ಪದೇ ವಿಡಿಯೋ ಕಾಲ್ ಮಾಡಿ ಮಗು ತೋರಿಸುವಂತೆ ಪತ್ನಿಯನ್ನು ಅರವಿಂದ ಪೀಡಿಸುತ್ತಿದ್ದ ಎಂಬುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ವಿಡಿಯೋ ಕಾಲ್ನಲ್ಲಿ ಮೊಬೈಲ್ ಹಿಡಿದು ಕೈ ನೋಯುತ್ತದೆ ಅಂತಾ ಅರವಿಂದ ಪತ್ನಿ ಹೇಳಿದರೂ ಆತ ಕೇಳುತ್ತಿರಲಿಲ್ಲ. ಇದೇ ವಿಚಾರಕ್ಕೆ ಗಂಡ - ಹೆಂಡತಿಯ ಮಧ್ಯೆ ಪ್ರವೇಶಿಸಿದ್ದ ಅತ್ತೆ ಮಹಾದೇವಿ, ಅಳಿಯನಿಗೆ ಬುದ್ಧಿ ಮಾತು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಕೋಪಿತನಾಗಿದ್ದ ಅಳಿಯ ಅತ್ತೆ ಮಹಾದೇವಿ ಅವರ ಹೊಟ್ಟೆಗೆ ಚಾಕು ಇರಿದಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಗಾಯಗೊಂಡ ಮಹಾದೇವಿ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಳಿಯ ಅರವಿಂದನನ್ನು ಈಗಾಗಲೇ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಲ್ಲೆಗೊಳಗಾದ ಮಹಾದೇವಿ ಕರಿಗಾರ ಪುತ್ರ ಮಲ್ಲಿಕಾರ್ಜುನ ಕರಿಗಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಪದೇ ಪದೇ ವಿಡಿಯೋ ಕಾಲ್ ಮಾಡಿ ನನ್ನ ತಂಗಿಗೆ ಆಕೆಯ ಗಂಡ ಅರವಿಂದ ಪೀಡಿಸುತ್ತಿದ್ದ. ನನಗೆ ಹುಟ್ಟಿದ ಮಗನನ್ನ ನನಗೆ ತೋರಿಸುವುದಿಲ್ಲ ಎನ್ನುತ್ತಿದ್ದ. ಹೀಗೆ ಮೊನ್ನೆ ಮೇ 2ರಂದು ನನಗೆ ಸುಸ್ತಾಗಿದೆ. ಕೈ ಜುಮ್ ಹಿಡಿದಿದೆ. ಆಮೇಲೆ ಮಾಡುತ್ತೇನೆ ಅಂತಾ ಹೇಳಿ ನಮ್ಮ ತಂಗಿ ಕಾಲ್ ಕಟ್ ಮಾಡಿದ್ದಾಳೆ. ಆಗ ಸಿಟ್ಟಿಗೆದ್ದು ವಾಪಸ್ ಕಾಲ್ ಮಾಡಿದ ನಮ್ಮ ಬಾವ, ನನಗೆ ಹುಟ್ಟಿದ ಮಗನನ್ನು ನನಗೆ ತೋರಿಸಲೇಬೇಕು ಅಂತಾ ಹೇಳಿ, ನಮ್ಮ ಮನೆಯವರನ್ನು ಎಲ್ಲಾ ಅಸಭ್ಯವಾಗಿ ಬೈದಿದ್ದಾನೆ.
ಆಗ ನಮ್ಮ ತಾಯಿ ಫೋನ್ ತೆಗೆದುಕೊಂಡು, ನಮ್ಮನ್ನು ಯಾಕೆ ಬೈಯ್ಯುತ್ತಿದ್ದಿಯಾ? ಗಂಡ-ಹೆಂಡತಿ ಜಗಳ ನಿಮ್ಮ ಕಡೆ ಇಟ್ಟುಕೊಳ್ಳಿ ಅಂತಾ ಹೇಳಿದ್ದಾರೆ. ನಿಮ್ಮನ್ನು ನಾನು ಬೈಯ್ಯುವವನೇ. ನೀವು ಏನ್ ಮಾಡ್ಕೊತಿರೋ ಮಾಡ್ಕೊಳ್ಳಿ. ನಿಮ್ಮನ್ನು ಅಲ್ಲಿಯೇ ಬಂದು ನೋಡಿಕೊಳ್ಳುತ್ತೇನೆ. ನಿಮ್ಮನ್ನಾರು ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಇದಾದ ಒಂದೂವರೇ ಗಂಟೆ ಬಳಿಕ ನಮ್ಮ ಮನೆಗೆ ಬಂದ ಅರವಿಂದ, ಫೋನಿನಲ್ಲಿ ಬಹಳ ಮಾತಾಡುತ್ತಿದ್ದಿ ಅಂತಾ ಹೇಳುತ್ತಾ, ಏಕಾಏಕಿ ನಮ್ಮ ಅವ್ವನ ಹೊಟ್ಟೆಗೆ ಚುಚ್ಚಿದ್ದಾನೆ. ಆಗ ನಾನು ಸೇರಿ ಹಲವರು ಬಿಡಿಸಿದೆವು. ಜಗಳ ಕೇಳಿಸಿಕೊಂಡು ಅಕ್ಕಪಕ್ಕದವರು ಬರುತ್ತಿದ್ದಂತೆ ಅಲ್ಲಿಂದ ಓಡಿಹೋದ. ಬಳಿಕ ನಾವು ನಮ್ಮ ತಾಯಿಯನ್ನು ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆವು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದೇವೆ. ಮತ್ತೆ ಫೋನ್ ಮಾಡಿದ ನಮ್ಮ ತಂಗಿ ಗಂಡ, ನಿನ್ನ ಮತ್ತು ನಿಮ್ಮ ಮನೆಯ ಯಾರನ್ನೂ ಬಿಡುವುದಿಲ್ಲ. ನಿಮ್ಮೆಲ್ಲರನ್ನೂ ಮುಗಿಸುವೆ ಅಂತಾ ಜೀವ ಬೆದರಿಕೆ ಹಾಕಿದ್ದಾನೆ ಅಂತಾ ಆರೋಪಿಸಿದರು.